ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್  
ದೇಶ

ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ: ಮುಸ್ಲಿಂ ಬಣಕ್ಕೆ ಹಿನ್ನಡೆ

Shilpa D

ಅಲಹಾಬಾದ್: ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಒಂದು ನೆಲಮಾಳಿಗೆ ವಿಭಾಗದಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿರುವ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಇದು ಮುಸ್ಲಿಂ ಬಣಕ್ಕೆ ಮತ್ತೊಂದು ಹಿನ್ನಡೆ ಉಂಟುಮಾಡಿದೆ.

ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ವ್ಯಾಸ ತೆಹ್ಖಾನಾದಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಸೋಮವಾರ ಅಲಹಾಬಾದ್‌ ಹೈಕೋರ್ಟ್‌ ತನ್ನ ತೀರ್ಪು ಪ್ರಕಟಿಸಿದೆ.

31 ವರ್ಷಗಳ ನಂತರ ಇದೇ ತಿಂಗಳ ಆರಂಭದಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪ್ರಥಮ ಬಾರಿಗೆ ಪೂಜೆ ನೆರವೇರಿಸಲಾಗಿತ್ತು. ಮಸೀದಿಯು ನಾಲ್ಕು ʼತೆಹ್ಖಾನಾಗಳು’ ಅಥವಾ ನೆಲಮಾಳಿಗೆಗಳನ್ನು ಹೊಂದಿದೆ. ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜನವರಿ 31ರ ಆದೇಶದಲ್ಲಿ ಜ್ಞಾನವಾಪಿ ಮಸೀದಿಯ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿದ್ದರು. ನಂತರ, ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಮತ್ತು ಶ್ರೀಗಳು ಸೂಚಿಸಿದ ಅರ್ಚಕರಿಂದ ಏಳು ದಿನಗಳಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಮೂಲಕ ವಿಗ್ರಹಗಳ ಪೂಜೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಿರುದ್ಧ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರು ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ನ್ಯಾಯಾಲಯದ ಆದೇಶ ನೀಡಿತ್ತು. ಮೊಕದ್ದಮೆಯ ಪ್ರಕಾರ, ಅರ್ಚಕ ಸೋಮನಾಥ ವ್ಯಾಸ್ ಅವರು 1993ರವರೆಗೆ ಅಧಿಕಾರಿಗಳು ನೆಲಮಾಳಿಗೆಯನ್ನು ಮುಚ್ಚುವವರೆಗೂ ಅಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಿದ್ದರು.

ವಾರಣಾಸಿ ನ್ಯಾಯಾಲಯದ ಜನವರಿ 31ರ ಆದೇಶವನ್ನು ತಡೆಹಿಡಿಯಲು ಕೋರಿ ಮುಸ್ಲಿಮರು ಸಲ್ಲಿಸಿದ್ದ ಮನವಿಯನ್ನು ಫೆಬ್ರುವರಿ 2ರಂದು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ಹಿಂದೂ ಕಡೆಯವರು ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿತ್ತು.

ಜನವರಿ 31ರ ಆದೇಶವನ್ನು ಪ್ರಶ್ನಿಸಲು ಮಸೀದಿ ಸಮಿತಿಯು ತನ್ನ ಮನವಿಯಲ್ಲಿ ತಿದ್ದುಪಡಿ ಮಾಡಲು ಫೆಬ್ರವರಿ 6ರವರೆಗೆ ಕಾಲಾವಕಾಶವನ್ನು ಹೈಕೋರ್ಟ್ ನೀಡಿತ್ತು. ನಂತರ ಫೆಬ್ರುವರಿ 12ರಂದು ನ್ಯಾಯಾಲಯವು ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿತ್ತು.

SCROLL FOR NEXT