ದೇಶ

ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ: 'ಆಯಾರಾಂ ಗಯಾರಾಂ' ಪಕ್ಷಾಂತರಿಗಳಿಗೆ ಬ್ರೇಕ್ ಹಾಕಲು ಸಮಿತಿ ರಚನೆ, ನಡ್ಡಾ ನಿರ್ಧಾರ

Manjula VN

ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಅನ್ಯಪಕ್ಷಗಳಿಂದ ಬಿಜೆಪಿಗೆ ಬರಲು ಇಚ್ಛಿಸುವವರ ಪೂರ್ವಾಪರ ಪರಿಶೀಲನೆ ನಡೆಸಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಹೊಸ ಸಮಿತಿಯನ್ನು ರಚನೆ ಮಾಡಿದ್ದಾರೆ.

ಈ ಸಮಿತಿಯ ಷರತ್ತು ವಿಧಿಸಿ ಪಕ್ಷಕ್ಕೆ ಬರುವವರನ್ನು ಅಥವಾ ಯಾವುದೋ ಉದ್ದೇಶ ಇರಿಸಿಕೊಂಡು ಪಕ್ಷಕ್ಕೆ ಬರುವವರನ್ನು ಅಥವಾ ಪದೇ ಪದೇ ಪಕ್ಷ ಬದಲಿಸುವ ಖಯಾಲಿಯ ವ್ಯಕ್ತಿಗಳನ್ನು ಮೊದಲ ಹಂತದಲ್ಲೇ ತಿರಸ್ಕರಿಸಿ, ಅವರ ಬಿಜೆಪಿ ಸೇರ್ಪಡೆಗೆ ತಡೆ ಒಡ್ಡಲಿದೆ.

ಡಿ.6 ರಂದು ಈ ಸಮಿತಿಯು ಮೊದಲ ಸಭೆ ನಡೆಸಲಿದೆ. ಈ ಸಮಿತಿಯ ಸದಸ್ಯರು ಬಿಜೆಪಿಗೆ ಅನ್ಯಪಕ್ಷಗಳಿಂದ ಬರುವವರ ವಿಶ್ವಾಸಾರ್ಹತೆ, ಕಷ್ಟಕಾಲದಲ್ಲಿ ಪಕ್ಷಕ್ಕೆ ನೆರವು ನೀಡುವುದು, ಅವರ ನಿಯತ್ತು, ವಿಧೇಯತೆಗಳನ್ನು ಪರಿಶೀಲಿಸಿ ಪಕ್ಷದ ವರಿಷ್ಠರಿಗೆ ವರದಿ ನೀಡಲಿದೆ. ಸಮಿತಿಯ ವರದಿ ಸಕಾರಾತ್ಮಕವಾಗಿದ್ದರೆ ಮಾತ್ರ, ಆಕಾಂಕ್ಷಿಗಳನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಕೆಲವರು ಪಕ್ಷ ಸೇರ್ಪಡೆಗೂ ಮುನ್ನ ಕೆಲವು ಷರತ್ತುಗಳನ್ನು ವಿಧಿಸುತ್ತಾರೆ. ಇನ್ನೂ ಕೆಲವರು ಬಿಜೆಪಿ ಸೋತರೆ ಮಾತೃ ಪಕ್ಷಕ್ಕೆ ಮರಳುವ ಚಂಚಲ ಬುದ್ಧಿಯವರಾಗಿರುತ್ತಾರೆ. ಇಂತಹವರನ್ನು ಪಕ್ಷಕೇಕೆ ಸೇರಿಸಿಕೊಳ್ಳುವುದು ಬೇಡ ಎಂದು ಸಮಿತಿ ತೀರ್ಮಾನಿಸುತ್ತದೆ.

ಈ ಹಿಂದೆ ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಬಿಜೆಪಿಗೆ ಬಂದಿದ್ದ ಮುಕುಲ್ ರಾಯ್, ಚುನಾವಣೆಯಲ್ಲಿ ಟಿಎಂಸಿ ಗೆದ್ದ ಕಾರಣ ಪಕ್ಷ ತೊರೆದಿದ್ದರು. ಈ ಹಿನ್ನೆಲೆಯಲ್ಲಿ ಇಂತಹ ಆಯಾರಾಂ ಗಯಾರಾಂ ಪಕ್ಷಾಂತರಿಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬಿಜೆಪಿ ತಂತ್ರ ರೂಪಿಸಿದೆ.

2024ಕ್ಕೆ ಪ್ರಧಾನಮಂತ್ರಿ ನರೇಂದ್ರ  ಮೋದಿಯವರು 3ನೇ ಬಾರಿ ಆಯ್ಕೆ ಬಯಸಿರುವ ಹಿನ್ನೆಲೆಯಲ್ಲಿ ಆಯಾರಾಂ ಗಯಾರಾಂ ಗಳಿಗೆ ಪಕ್ಷದಲ್ಲಿ ಸ್ಥಾನವನ್ನೇ ನೀಡದಿರಲು ಪಕ್ಷ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ಕಾರ್ಯತಂತ್ರ, ಉತ್ತರ ಪ್ರದೇಶದಲ್ಲಿ ರಾಮ ಮಂದಿರ ಉದ್ಘಾಟನೆ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸಲು ಇತ್ತೀಚೆಗಷ್ಟೇ ಬಿಜೆಪಿಯ ಹಿರಿಯ ನಾಯಕರ ಸಭೆ ದೆಹಲಿಯಲ್ಲಿ ನಡೆಯಿತು.

ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಅಶ್ವಿನಿ ವೈಷ್ಣವ್, ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾಸ್ ಶರ್ಮಾ, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕ್ಲಸ್ಟರ್‌ ಮಾದರಿಯಲ್ಲಿ ಲೋಕಸಭಾ ಕ್ಷೇತ್ರಗಳನ್ನು ವಿಭಾಗ ಮಾಡಿಕೊಂಡು ಕಾರ್ಯತಂತ್ರ ರೂಪಿಸಲು ಹಿಂದೆ ನಿರ್ಧರಿಸಲಾಗಿತ್ತು. ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಚಾರವನ್ನು ಹೇಗೆ ನಡೆಸಬೇಕು? ಇಂಬುದರ ಬಗ್ಗೆ ಕೂಡ ಯೋಜನೆ ರೂಪಿಸಲಾಗುತ್ತಿದೆ.

ಪಕ್ಷದ ಹಿರಿಯ ನಾಯಕರು, ಕೇಂದ್ರ ಸಚಿವರ ನೇತೃತ್ವದಲ್ಲಿ ಸಮಾವೇಶ, ಜಾಥಾಗಳನ್ನು ಸಹ ನಡೆಯಲು ಬಿಜೆಪಿ ತೀರ್ಮಾನಿಸಿದೆ.

ಮುಂದಿನ ಸಭೆಗಳಲ್ಲಿ ಯಾವ-ಯಾವ ರಾಜ್ಯದಲ್ಲಿ ಯಾವ ನಾಯಕರು ಸಮಾವೇಶ, ಜಾಥಾ ನಡೆಸಿ 2024ರ ಚುನಾವಣೆ ಪ್ರಚಾರ ನಡೆಸಬೇಕು ಎಂದು ತೀರ್ಮಾನ ಕೈಗೊಳ್ಳಲಾಗುತ್ತದೆ.

SCROLL FOR NEXT