ದೇಶ

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ದಾವೆದಾರ ಇಕ್ಬಾಲ್ ಅನ್ಸಾರಿಗೂ ರಾಮ ಮಂದಿರದ ಆಹ್ವಾನ!

Srinivasamurthy VN

ಅಯೋಧ್ಯೆ: ಮಹತ್ವದ ಬೆಳವಣಿಗೆಯಲ್ಲಿ ಅಯೋಧ್ಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದ್ದು, ಇದೀಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ದಾವೆದಾರ ಇಕ್ಬಾಲ್ ಅನ್ಸಾರಿ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಲ್ಲದೆ, ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಅನ್ಸಾರಿ ಖಚಿತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜನವರಿ 22 ರಂದು ನಡೆಯಲಿರುವ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಬಾಬರಿ ಮಸೀದಿಯ ಮುಖ್ಯ ಪ್ರತಿಪಾದಕ ಇಕ್ಬಾಲ್ ಅನ್ಸಾರಿ ಅವರಿಗೆ ಆಹ್ವಾನ ಕಳುಹಿಸಿದೆ. 

ಯಾರೂ ಈ ಇಕ್ಬಾಲ್ ಅನ್ಸಾರಿ?
ಇಕ್ಬಾಲ್ ಅನ್ಸಾರಿ ಅವರ ತಂದೆ ಹಾಶಿಮ್ ಅನ್ಸಾರಿ ಅವರು ರಾಮ ಜನ್ಮಭೂಮಿ ಮಾಲೀಕತ್ವದ ವಿವಾದದ ಪ್ರಮುಖ ಫಿರ್ಯಾದಿಯಾಗಿದ್ದರು. ಅವರು ತಮ್ಮ ತಂದೆಯ ಮರಣದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಬಾಬರಿ ಮಸೀದಿಗಾಗಿ ಕಾನೂನು ಹೋರಾಟವನ್ನು ಮುಂದುವರೆಸಿದ್ದರು. ಆದಾಗ್ಯೂ, 9 ನವೆಂಬರ್ 2019 ರಂದು ಐತಿಹಾಸಿಕ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿಯ ಮಾಲೀಕತ್ವವನ್ನು ಹಿಂದೂ ಪಕ್ಷಕ್ಕೆ ಹಸ್ತಾಂತರಿಸಲು ತೀರ್ಪು ನೀಡಿತು. ಇಕ್ಬಾಲ್ ಅನ್ಸಾರಿ ಅವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ ಮತ್ತು ನೂರಾರು ವರ್ಷಗಳ ಈ ವಿವಾದವನ್ನು ಕೊನೆಗೊಳಿಸಿದ್ದಕ್ಕಾಗಿ ಅಭಿನಂದಿಸಿದ್ದಾರೆ. 

ಈ ಕುರಿತು ಈ ಹಿಂದೆ ಮಾತನಾಡಿದ್ದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ನಗರದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮದ ಆರಂಭಿಕ ಆಹ್ವಾನವನ್ನು ಇಕ್ಬಾಲ್ ಅನ್ಸಾರಿಗೆ ಕಳುಹಿಸಲಾಗಿದೆ ಎಂಬುವುದು ಉಲ್ಲೇಖನೀಯ. ಆಗ ಅವರು, ‘ನನಗೆ ಮೊದಲ ಆಮಂತ್ರಣ ಸಿಕ್ಕಿದ್ದು ರಾಮನ ದಿವ್ಯ ಆಶಯವಾಗಿರಬಹುದು. ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದಿದ್ದರು.

ಪ್ರಧಾನಿ ಮೋದಿಯವರ ಮೇಲೆ ಪುಷ್ಪವೃಷ್ಟಿ ಮಾಡಿದ್ದ ಇಕ್ಬಾಲ್ ಅನ್ಸಾರಿ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. ಅಲ್ಲಿ ರೋಡ್ ಶೋ ಕೂಡ ಮಾಡಿದ್ದರು. ಈ ವೇಳೆ ಇಕ್ಬಾಲ್ ಅನ್ಸಾರಿ ಅವರು ಪ್ರಧಾನಿ ಮೋದಿಯವರ ಮೇಲೆ ಹೂವಿನ ಮಳೆಗರೆದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಇಕ್ಬಾಲ್ ಅನ್ಸಾರಿ, ಅಯೋಧ್ಯೆಗೆ ಬರುವವರು ನಮ್ಮ ಅತಿಥಿಗಳು. ಅವರಿಗೆ ನಮಸ್ಕಾರ ಮಾಡುವುದು ನಮ್ಮ ಧರ್ಮ ಮತ್ತು ಸಂಪ್ರದಾಯ. ನಮ್ಮ ದೇಶದ ಪ್ರಧಾನಿ ಅಯೋಧ್ಯೆಗೆ ಬಂದಿದ್ದು, ಅವರನ್ನು ಸ್ವಾಗತಿಸಲು ನಾನು ಪುಷ್ಪವೃಷ್ಟಿ ಮಾಡಿದೆ ಎಂದು ಹೇಳಿದರು.

SCROLL FOR NEXT