ದೇಶ

ಉತ್ತರಪ್ರದೇಶ: ಫರೀದ್‌ಪುರದಲ್ಲಿ ಅಗ್ನಿ ಅವಘಡ: ಸುಟ್ಟ ಸ್ಥಿತಿಯಲ್ಲಿ ದಂಪತಿ, ಮೂವರು ಮಕ್ಕಳ ಮೃತದೇಹ ಪತ್ತೆ!

Vishwanath S

ಬರೇಲಿ: ಉತ್ತರ ಪ್ರದೇಶದ ಫರೀದ್‌ಪುರದಲ್ಲಿ ತಮ್ಮ ಬಾಡಿಗೆ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಘಟನೆ ಶನಿವಾರ ರಾತ್ರಿ ನಡೆದಿದ್ದು, ಭಾನುವಾರ ಬೆಳಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆ ಬಾಗಿಲು ಹೊಡೆದು ನೋಡಿದಾಗ ಐವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸುಶೀಲ್ ಚಂದ್ರ ಧುಲೆ ಹೇಳಿದರು.

ಮೃತರನ್ನು ಅಜಯ್ ಗುಪ್ತಾ (38), ಅವರ ಪತ್ನಿ ಅನಿತಾ (36), ಅವರ ಮಕ್ಕಳಾದ ದಿವ್ಯಾಂಶ್ (9) ಮತ್ತು ದಕ್ಷ್ (3) ಮತ್ತು ಮಗಳು ದಿವ್ಯಾಂಕ (6) ಎಂದು ಗುರುತಿಸಲಾಗಿದೆ.

ವಿವರವಾದ ತನಿಖೆ ನಡೆಯುತ್ತಿದೆ. ಬೆಂಕಿ ಹೇಗೆ ಸಂಭವಿಸಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದು, ಶವಸಂಸ್ಕಾರದ ಎಲ್ಲಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ತಿಳಿಸಿದ್ದಾರೆ.

SCROLL FOR NEXT