ಹೆಣ್ಣಾನೆಗೆ ಚಿಕಿತ್ಸೆ 
ದೇಶ

Video: ಅರಣ್ಯ ಇಲಾಖೆ ಸಾಹಸ; ಸಾವಿನ ದವಡೆಯಲ್ಲಿದ್ದ ಹೆಣ್ಣಾನೆಗೆ ಚಿಕಿತ್ಸೆ, ತಾಯಿ ನೋಡಿ ಖುಷಿಪಟ್ಟ ಮರಿ ಆನೆ

3 ದಿನಗಳ ಹಿಂದೆ ತೀವ್ರ ಅಸ್ವಸ್ಥಗೊಂಡು ಸಾವಿನದವಡೆಯಲ್ಲಿದ್ದ ಹೆಣ್ಣಾನೆಯೊಂದನ್ನು ಅರಣ್ಯ ಸಿಬ್ಬಂದಿ ಸಾಹಸ ಮಾಡಿ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಯಮತ್ತೂರು: 3 ದಿನಗಳ ಹಿಂದೆ ತೀವ್ರ ಅಸ್ವಸ್ಥಗೊಂಡು ಸಾವಿನದವಡೆಯಲ್ಲಿದ್ದ ಹೆಣ್ಣಾನೆಯೊಂದನ್ನು ಅರಣ್ಯ ಸಿಬ್ಬಂದಿ ಸಾಹಸ ಮಾಡಿ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ಮರುದಮಲೈ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೂರು ದಿನಗಳ ಹಿಂದೆ ಹೆಣ್ಣಾನೆಯೊಂದು ತೀವ್ರ ಅಸ್ವಸ್ಥಗೊಂಡು ನಿತ್ರಾಣವಾಗಿ ಬಿದ್ದಿತ್ತು.

ಈ ವೇಳೆ ಅದರ ಮರಿ ಆನೆ ಕೂಗುತ್ತಾ ಅದರ ಸುತ್ತಲೇ ತಿರುಗುತ್ತಿತ್ತು. ಇದನ್ನು ಗಮನಿಸಿದ ತಮಿಳುನಾಡು ಅರಣ್ಯ ಸಿಬ್ಬಂದಿ ಹತ್ತಿರಕ್ಕೆ ಬಂದು ವಿಚಾರ ತಿಳಿದು ಕೂಡಲೇ ಅರಣ್ಯ ಇಲಾಖೆ ಪಶು ವೈದ್ಯರಿಗೆ ಮಾಹಿತಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪಶು ವೈದ್ಯರು ತಡ ಮಾಡದೇ ಚಿಕಿತ್ಸೆ ಆರಂಭಿಸಿದ್ದು, ಸತತ ಮೂರು ದಿನಗಳ ತಾಯಿ ಆನೆಗೆ ನಿರಂತರವಾಗಿ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ಮತ್ತು ಅರಣ್ಯ ಸಿಬ್ಬಂದಿಗಳ ಶ್ರಮದಿಂದಾಗಿ ಇಂದು ತಾಯಿ ಆನೆ ಚೇತರಿಸಿಕೊಂಡಿದ್ದು, ಶುಕ್ರವಾರ ಆನೆಯನ್ನುಕ್ರೇನ್ ಸಹಾಯದಿಂದ ಎತ್ತಿ ನಿಲ್ಲಿಸಿದ್ದಾರೆ. ಈ ಹಿಂದೆ ನಿಲ್ಲಲೂ ಸಾಧ್ಯವಾಗದೇ ನಿತ್ರಾಣಗೊಂಡಿದ್ದ ಆನೆ ಇಂದು ಎದ್ದು ನಿಂತಿರುವುದನ್ನು ನೋಡಿ ಮರಿ ಆನೆ ಸಂತಸಗೊಂಡಿದೆ.

ಅಲ್ಲದೆ ಆನೆ ಶುಕ್ರವಾರ ತಾನಾಗಿಯೇ ಆಹಾರವನ್ನು ತಿನ್ನಲು ಶುರು ಮಾಡಿದ್ದು, ಪಶುವೈದ್ಯರಾದ ಕೊಯಮತ್ತೂರಿನ ಎ ಸುಕುಮಾರ್ ಮತ್ತು ಎಂಟಿಆರ್‌ನಲ್ಲಿರುವ ತೆಪ್ಪಕ್ಕಾಡುವಿನ ಕೆ ರಾಜೇಶ್ ಕುಮಾರ್ ತಾಯಿ ಆನೆಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಆನೆ ಶೀಘ್ರ ಚೇತರಿಸಿಕೊಳ್ಳುವ ಭರವಸೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದು, ಇನ್ನೆರಡು ದಿನ ಆನೆಗೆ ಚಿಕಿತ್ಸೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಅರಣ್ಯಾಧಿಕಾರಿ ಎನ್.ಜಯರಾಜ್ ಅವರು, '13 ಆನೆಗಳ ಹಿಂಡಿನ ಹೆಣ್ಣಾನೆ ಇದು. ಆಕೆಯ ಅನಾರೋಗ್ಯದ ಕಾರಣಗಳನ್ನು ಪತ್ತೆಹಚ್ಚಲು ನಾವು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ತಾಯಿ ಆನೆ ಮರಿ ಆನೆಗೆ ಜನ್ಮ ನೀಡಿದ ಬಳಿಕ ಅದು ಅನಾರೋಗ್ಯಕ್ಕೆ ತುತ್ತಾಗಿರಬಹುದು.

ಸರಿಯಾದ ಆಹಾರ ನೀರು ಸಿಗದೆಯೂ ಆನೆ ನಿತ್ರಾಣಗೊಂಡಿರಬಹುದು. ರಕ್ತ ಪರೀಕ್ಷೆಯ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ. 3 ದಿನಗಳ ಚಿಕಿತ್ಸೆ ಬಳಿಕ ಆನೆ ಎದ್ದು ನಿಂತು ತನ್ನ ಆಹಾರ ತಾನೇ ಸೇವಿಸುತ್ತಿದೆ. ಅದರ ಸುತ್ತಮುತ್ತಲಲ್ಲೇ ಅದರ ಇತರೆ ಆನೆಗಳ ಹಿಂಡು ತಿರುಗಾಡುತ್ತಿದೆ. ನಾವು ಪರಿಸ್ಥಿತಿಯನ್ನು ನಿಭಾಯಿಸಿದ್ದೇವೆ ಮತ್ತು ಚಿಕಿತ್ಸೆ ಮುಂದುವರೆಸಿದ್ದೇವೆ ಎಂದು ಹೇಳಿದ್ದಾರೆ.

ಪಶುವೈದ್ಯಕೀಯ ತಂಡ ಆನೆಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದು, ಆನೆ ನಿತ್ಯವೂ ಆಹಾರ ಮತ್ತು ನೀರು ಸೇವಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಆನೆ ಆರೋಗ್ಯ ಸ್ಥಿರವಾಗಿದ್ದರೂ ಅದರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT