ಧನ್ ಬಾದ್: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ 400 ಸ್ಥಾನಗಳ ಗೆಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ದೇಶವು ಮೋದಿಯವರ ಗ್ಯಾರಂಟಿ"ಯಲ್ಲಿ ನಂಬಿಕೆ ಇಟ್ಟಿರುವುದರಿಂದ ಈ ಘೋಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶುಕ್ರವಾರ ಧನ್ಬಾದ್ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲೆಡೆ ಒಂದೇ ಶಬ್ದ ಕೇಳಿಬರುತ್ತಿದೆ. ಅದು 'ಅಬ್ ಕಿ ಬಾರ್, 400 ಎಂದರು. ದೇಶಕ್ಕೆ ಮೋದಿಯವರ ಗ್ಯಾರಂಟಿಯಲ್ಲಿ ನಂಬಿಕೆ ಇರುವುದರಿಂದಲೇ 400 ಸೀಟುಗಳ ಘೋಷಣೆ ಮಾಡಲಾಗುತ್ತಿದೆ. ಪೆಂಡಾಲ್ ಚಿಕ್ಕದಾಗಿರುವುದಕ್ಕೆ ಕ್ಷಮೆಯಾಚಿಸುತ್ತೇನೆ. ಕೇವಲ ಶೇಕಡಾ 5 ರಷ್ಟು ಜನರು ಒಳಗೆ ಇದ್ದಾರೆ, ಉಳಿದ ಶೇ. 95 ರಷ್ಟು ಜನರು ಬಿಸಿಲಿನಲ್ಲಿದ್ದಾರೆ ಎಂದು ಪ್ರಧಾನಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಏಕೆಂದರೆ ದೇಶವು ಮೋದಿ ಗ್ಯಾರಂಟಿ ಮೇಲೆ ಅವಲಂಬಿತವಾಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶದ ಸಕಾರಾತ್ಮಕ ಅಭಿವೃದ್ಧಿಯ ಶತ್ರುಗಳು ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
“ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ಅಭಿವೃದ್ಧಿಯ ದೊಡ್ಡ ಶತ್ರುಗಳು.ಉತ್ತರ ಕರಣಪುರದ ವಿದ್ಯುತ್ ಸ್ಥಾವರಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ಮಾಡಿದ್ದರು. ನಂತರ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈ ಯೋಜನೆ ಸ್ಥಗಿತಗೊಂಡಿತ್ತು. 2014ರಲ್ಲಿ ಈ ಯೋಜನೆಯನ್ನು ಪುನರುಜ್ಜೀವನಗೊಳಿಸುವ ಗ್ಯಾರಂಟಿ ನೀಡಿದ್ದೆ. ಇಂದು ಈ ವಿದ್ಯುತ್ ಸ್ಥಾವರದಿಂದಾಗಿ ಹಲವಾರು ಮನೆಗಳು ಬೆಳಗುತ್ತಿವೆ ಎಂದು ಪ್ರಧಾನಿ ಹೇಳಿದರು.