ರಾಹುಲ್ ಗಾಂಧಿ
ರಾಹುಲ್ ಗಾಂಧಿ 
ದೇಶ

ಉತ್ತರ ಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರದ ಗ್ಯಾರಂಟಿ 'ಜಂಗಲ್ ರಾಜ್' ಆಗಿದೆ: ರಾಹುಲ್ ಗಾಂಧಿ

Ramyashree GN

ನವದೆಹಲಿ: ಉತ್ತರ ಪ್ರದೇಶದ ಡಬಲ್ ಇಂಜಿನ್ ಸರ್ಕಾರದ ಸತ್ಯವೆಂದರೆ ಅದು 'ಜಂಗಲ್ ರಾಜ್ ಗ್ಯಾರಂಟಿ'ಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದರ ವಿರುದ್ಧ ಪಕ್ಷದ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಘೋಷಿಸಿದರು.

'ಬಿಜೆಪಿ ಮತ್ತು ಮೋದಿ ಮಾಧ್ಯಮಗಳು ಒಟ್ಟಾಗಿ 'ಸುಳ್ಳಿನ ವ್ಯವಹಾರ'ದಲ್ಲಿ ಹೇಗೆ ತೊಡಗಿವೆ ಎಂಬುದಕ್ಕೆ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ದೊಡ್ಡ ಉದಾಹರಣೆಯಾಗಿದೆ' ಎಂದು ಅವರು ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಹಿಳೆಯರ ವಿರುದ್ಧದ ಇತ್ತೀಚಿನ ಹಲವಾರು ಅಪರಾಧಗಳ ಪ್ರಕರಣಗಳನ್ನು ಎತ್ತಿ ಹಿಡಿದ ಅವರು, ಅಪ್ರಾಪ್ತ ಸಹೋದರಿಯರ ಶವಗಳು ಕೆಲವು ಸ್ಥಳಗಳಲ್ಲಿ ಮರಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿವೆ. ಐಐಟಿ-ಬಿಎಚ್‌ಯು ಕ್ಯಾಂಪಸ್‌ನಲ್ಲಿ ಬಿಜೆಪಿ ಸದಸ್ಯರಿಂದ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಮತ್ತು ನ್ಯಾಯ ಸಿಗದೆ ಮಹಿಳಾ ನ್ಯಾಯಾಧೀಶರೇ ಆತ್ಮಹತ್ಯೆಗೆ ಶರಣಾಗಿರುವಂತ ಅನೇಕ ಘಟನೆಗಳು ವರದಿಯಾಗಿವೆ ಎಂದರು.

ಇದು ಕಾನೂನು ಮತ್ತು ಸುವ್ಯವಸ್ಥೆಯು ಹಾಳಾಗಿರುವುದನ್ನು ಸೂಚಿಸುತ್ತದೆ ಎಂದಿರುವ ಅವರು, ಇತ್ತೀಚೆಗೆ ರಾಂಪುರದಲ್ಲಿ 10ನೇ ತರಗತಿ ಪರೀಕ್ಷೆ ಬರೆದು ವಾಪಸ್ಸಾಗುತ್ತಿದ್ದ ದಲಿತ ವಿದ್ಯಾರ್ಥಿನಿಯೊಬ್ಬಳನ್ನು ಹತ್ಯೆ ಮಾಡಿದ ಘಟನೆಯನ್ನೂ ಅವರು ಉಲ್ಲೇಖಿಸಿದ್ದಾರೆ.

'ಮೋದಿ ಮಾಧ್ಯಮಗಳು ಸೃಷ್ಟಿಸಿರುವ ಸುಳ್ಳು ಚಿತ್ರಣದಿಂದ ಹೊರಬರಲು ಮತ್ತು ಡಬಲ್ ಎಂಜಿನ್ ಸರ್ಕಾರವು 'ಜಂಗಲ್ ರಾಜ್ ಗ್ಯಾರಂಟಿ' ಎಂಬ ಸತ್ಯವನ್ನು ನೋಡುವ ಸಮಯ ಬಂದಿದೆ' ಎಂದು ಹೇಳಿದರು.

'ಬಿಜೆಪಿ ವ್ಯವಸ್ಥೆ ಮತ್ತು ಈ ಕ್ರಿಮಿನಲ್‌ಗಳ ಒಕ್ಕೂಟದ ವಿರುದ್ಧ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿ ಜಿಲ್ಲೆ ಮತ್ತು ಪ್ರತಿ ತಹಸಿಲ್‌ಗಳಲ್ಲಿ ಪ್ರತಿಭಟನೆ ಮಾಡುವ ಮೂಲಕ ನ್ಯಾಯಕ್ಕಾಗಿ ಧ್ವನಿ ಎತ್ತಲಿದ್ದಾರೆ' ಎಂದು ಅವರು ಹೇಳಿದರು.

SCROLL FOR NEXT