ಪಿಎಂ ನರೇಂದ್ರ ಮೋದಿ ಮತ್ತು ಜೆ.ಪಿ ನಡ್ಡಾ
ಪಿಎಂ ನರೇಂದ್ರ ಮೋದಿ ಮತ್ತು ಜೆ.ಪಿ ನಡ್ಡಾ 
ದೇಶ

'ಲೋಕ' ಸಮರ: ಇಂದು ಬಿಜೆಪಿಯ 125 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ? ಹೊಸಬರಿಗೆ ಮಣೆ, ಹಲವು ಹಿರಿತಲೆಗಳಿಗೆ ಗೇಟ್ ಪಾಸ್!

Shilpa D

ನವದೆಹಲಿ: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಮೋದಿ ಹಾಗೂ ಅಮಿತ್‌ ಶಾ ಹಲವು ಚುನಾವಣಾ ತಂತ್ರಗಾರಿಕೆಯನ್ನ ಹೆಣೆದಿದ್ದಾರೆ. ಹಲವು ಗಂಟೆಗಳ ಮಹತ್ವದ ಚರ್ಚೆಯ ನಂತರ, ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ವಾರಣಾಸಿ, ಗಾಂಧಿನಗರ ಮತ್ತು ಲಕ್ನೋದಂತಹ ಪ್ರಮುಖ ಸ್ಥಾನಗಳನ್ನು ಒಳಗೊಂಡಂತೆ 125 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳು ಮತ್ತು ಉಪ ಮುಖ್ಯಮಂತ್ರಿಗಳನ್ನು ಒಳಗೊಂಡಂತೆ CEC ಯಲ್ಲಿ 550 ಕ್ಕೂ ಅಧಿಕ ಸದಸ್ಯರಿದ್ದು ಸಂಜೆಯವರೆಗೂ ಗಂಟೆಗಟ್ಟಲೆ ಸಭೆ ನಡೆಯಿತು.

ಗುರುವಾರ ರಾತ್ರಿಯವರೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮವಾಗದಿದ್ದರೇ, ಮರುದಿನ ಬಿಡುಗಡೆ ಮಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಿಇಸಿ ಸಭೆಯ ಪೂರ್ವಭಾವಿಯಾಗಿ ಪ್ರಧಾನಿ ನಿವಾಸದಲ್ಲಿ ನಡ್ಡಾ, ಶಾ ಮತ್ತು ಮೋದಿ ಮಹತ್ವದ ಮಾತುಕತೆ ನಡೆಸಿದರು. ಈ ಸಭೆಯು ಸುಮಾರು ಮೂರು ಗಂಟೆಗಳ ಕಾಲ ಮುಂದುವರೆಯಿತು, ಅಲ್ಲಿ ಅಭ್ಯರ್ಥಿಗಳ ಆಯ್ಕೆಯೆ ಅಂಶಗಳ ಬಗ್ಗೆ ಚರ್ಚಿಸಲಾಯಿತು ಎಂದು ವರದಿಯಾಗಿದೆ.

ಬಳಿಕ ಮೂವರು ಪಕ್ಷದ ಕೇಂದ್ರ ಕಚೇರಿಗೆ ತೆರಳಿದರು. ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಸಿಎಂಗಳು ಮತ್ತು ಉಪ ಮುಖ್ಯಮಂತ್ರಿಗಳು ತಡರಾತ್ರಿಯವರೆಗೂ ಸಿಇಸಿ ಸಭೆಯಲ್ಲಿ ಭಾಗವಹಿಸಿದ್ದರು. ಹಲವು ಗಂಟೆಗಳ ಚರ್ಚೆ ಸಮಾಲೋಚನೆ ನಂತರ 18 ರಾಜ್ಯಗಳಲ್ಲಿ 100-125 ಲೋಕಸಭಾ ಸ್ಥಾನಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿದೆ ಎಂದು ವರದಿಯಾಗಿದೆ.

ಅಭ್ಯರ್ಥಿಗಳ ಆಯ್ಕೆಗೆ ಗೆಲುವಿನ ಪ್ರಮಾಣ ಪ್ರಮುಖ ಪ್ರಾಥಮಿಕ ಅಂಶವಾಗಿರಬೇಕು ಎಂದು CEC ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳ ಮೇಲೆ ಕಣ್ಣಟ್ಟಿದೆ , ಆದರೆ ಈ ಬಾರಿ ಬಿಜೆಪಿ ಮಾತ್ರ 370 ಸ್ಥಾನಗಳನ್ನು ದಾಟಲಿದೆ ಎಂದು ಬಿಂಬಿಸುತ್ತಿರುವ ಈ ಸಮಯದಲ್ಲಿ ಹೆಚ್ಚಿನ ಗೆಲುವಿನ ಸಾಮರ್ಥ್ಯ, ಶುದ್ಧ ರಾಜಕೀಯ ಹಿನ್ನೆಲೆ ಮತ್ತು ಜನರೊಂದಿಗೆ ಇಂಟರ್‌ಫೇಸ್ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು.

ವಾರಣಾಸಿಯಿಂದ ಮೋದಿ, ಗುಜರಾತ್‌ನ ಗಾಂಧಿನಗರದಿಂದ ಶಾ, ಲಕ್ನೋದಿಂದ ರಾಜನಾಥ್ ಸಿಂಗ್ ಮುಂದುವರಿಕೆಯಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದರು. ನಾಗ್ಪುರದಿಂದ ನಿತಿನ್ ಗಡ್ಕರಿ, ಅಮೇಠಿಯಿಂದ ಸ್ಮೃತಿ ಇರಾನಿ, ಹಮೀರ್‌ಪುರದಿಂದ ಅನುರಾಗ್ ಠಾಕೂರ್, ಧಾರವಾಡದಿಂದ ಪ್ರಹ್ಲಾದ್ ಜೋಶಿ ಸ್ಪರ್ಧಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಬಿಜೆಪಿ ನಾಯಕರಾದ ರವಿ ಕಿಶನ್ ಗೋರಖ್‌ಪುರದಿಂದ, ಸುಬ್ರತ್ ಪಾಠಕ್ ಕನೌಜ್‌ನಿಂದ ಮತ್ತು ಸಾಧ್ವಿ ನಿರಂಜನ್ ಫತೇಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಮತ್ತು ಪಶ್ಚಿಮ ಬಂಗಾಳದಲ್ಲಿ ದುರ್ಬಲ ಎಂದು ಗುರುತಿಸಲಾದ ಸ್ಥಾನಗಳ ಅಭ್ಯರ್ಥಿಗಳ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ" ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಹೊಸ ಮುಖಗಳನ್ನು ಕಣಕ್ಕೆ ತರುವ ಜೊತೆಗೆ ಅನೇಕ ರಾಜ್ಯಸಭಾ ಸಂಸದರನ್ನು ಕಣಕ್ಕಿಳಿಸಬಹುದು ಎಂದು ನಂಬಲಾಗಿದೆ.

ಈ ಬಾರಿ ಹೊಸ ಮುಖಗಳಿಗೆ ದಾರಿ ಮಾಡಿಕೊಡಲು ಹಲವಾರು ಹಾಲಿ ಸಂಸದರನ್ನು ಕೈಬಿಡಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ, ಕಳಪೆ ಗೆಲುವು, ಜನರೊಂದಿಗೆ ಕಳಪೆ ಸಂಪರ್ಕ ಮತ್ತು ವಯಯಸ್ಸಿನ ಕಾರಣ ಹಾಗೂ ಆಯಾ ಕ್ಷೇತ್ರಗಳಲ್ಲಿ ಬದಲಾದ ಸಾಮಾಜಿಕ ಮತ್ತು ಜಾತಿ ಸಮೀಕರಣಗಳಿಂದಾಗಿ ಈ ಬಾರಿ ಪಕ್ಷವು ಒಟ್ಟು ಹಾಲಿ ಸಂಸದರ ಪೈಕಿ ಶೇ. 25-30 ರಷ್ಟು ಮಂದಿಗೆ ಗೇಟ್ ಪಾಸ್ ನೀಡುತ್ತದೆ ಎಂದು ಮೂಲಗಳು ವಿವರಿಸಿವೆ.

SCROLL FOR NEXT