ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ದೇಶ

ಅಮಲು ಪದಾರ್ಥ ನೀಡಿ ಕಾರಿನಲ್ಲಿಯೇ ಕಲಾವಿದೆ ಮೇಲೆ ಸಹ ಕಲಾವಿದರಿಂದ ಸಾಮೂಹಿಕ ಅತ್ಯಾಚಾರ

Ramyashree GN

ಮೇದಿನಿನಗರ: ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಛತ್ತೀಸ್‌ಗಢದ 21 ವರ್ಷದ ರಂಗ ಕಲಾವಿದೆ ಮೇಲೆ ಸಹ ಕಲಾವಿದರೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ವಿಶ್ರಾಮ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಪಲಮು ಮೂಲದ ಮೂವರು ಸಹ ಕಲಾವಿದರು ಮಹಿಳೆಗೆ ಮತ್ತು ಬರುವ ಪದಾರ್ಥವನ್ನು ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆಯನ್ನು ಪಲಮುವಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು ಎಂದು ವಿಶ್ರಾಮ್‌ಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ರಾಕೇಶ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಮಹಿಳೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪಲಮು ಜಿಲ್ಲೆಯ ವಿಶ್ರಾಮ್‌ಪುರದಲ್ಲಿ ಕಾರ್ಯಕ್ರಮವೊಂದಕ್ಕೆ ಮಹಿಳಾ ಕಲಾವಿದೆ ಛತ್ತೀಸ್‌ಗಢದಿಂದ ಬಂದಿದ್ದರು ಎಂದು ಎಸ್‌ಡಿಪಿಒ ತಿಳಿಸಿದ್ದಾರೆ.

ಕಾರಣಾಂತರಗಳಿಂದ ಆ ಕಾರ್ಯಕ್ರಮ ನಡೆಯಲಿಲ್ಲ. ಹೀಗಾಗಿ, ಆಕೆ ತನ್ನ ಸಹ ಕಲಾವಿದರೊಂದಿಗೆ ಹುಸೇನಾಬಾದ್‌ನಲ್ಲಿ ಮತ್ತೊಂದು ಕಾರ್ಯಕ್ರಮಕ್ಕೆ ತೆರಳಿದ್ದರು ಎಂದು ಅವರು ಹೇಳಿದರು.

ಹುಸೇನಾಬಾದ್‌ಗೆ ಹೋಗುವ ದಾರಿಯಲ್ಲಿ ಆರೋಪಿಗಳು ಆಕೆಗೆ ಕೆಲವು ಅಮಲು ಪದಾರ್ಥವನ್ನು ನೀಡಿದ್ದರು. ನಂತರ ಕಾರಿನಲ್ಲಿಯೇ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯ ಪಕ್ಕದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಸಿಂಗ್ ಹೇಳಿದರು.

ಭಾನುವಾರ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೂರನೇ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ ಎಂದು ಅವರು ಹೇಳಿದರು.

SCROLL FOR NEXT