ನವದೆಹಲಿ: ಯೂಟ್ಯೂಬರ್ ಎಲ್ವಿಶ್ ಯಾದವ್ ದೆಹಲಿ ಮೂಲದ ಕಂಟೆಂಟ್ ಕ್ರಿಯೇಟರ್ ಓರ್ವನನ್ನು ಗುರುಗ್ರಾಮದ ಶಾಪಿಂಗ್ ಮಾಲ್ ನಲ್ಲಿ ಥಳಿಸಿದ್ದು, ಪ್ರಕರಣ ದಾಖಲಾಗಿದೆ. ಈ ಹಲ್ಲೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.
ಸಾಗರ್ ಠಾಕೂರ್ ಎಂಬ ದೆಹಲಿಯ ನಿವಾಸಿ ಯೂಟ್ಯೂಬರ್ ಎಲ್ವಿಶ್ ಯಾದವ್ ತಮ್ಮ ಬೆನ್ನು ಮೂಳೆ ಮುರಿಯಲು ಯತ್ನಿಸಿದ್ದು, ತಮ್ಮನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದಾರೆ.
ಠಾಕೂರ್ ಯೂಟ್ಯೂಬ್ ನಲ್ಲಿ 1.6 ಮಿಲಿಯನ್ ಚಂದಾದಾರರು, ಇನ್ಸ್ಟಾಗ್ರಾಮ್ ನಲ್ಲಿ 8,90,000 ಅನುಯಾಯಿಗಳು ಮತ್ತು ಟ್ವೀಟರ್ (ಎಕ್ಸ್) ನಲ್ಲಿ 2,50,000 ಅನುಯಾಯಿಗಳನ್ನು ಹೊಂದಿದ್ದಾರೆ. ತಾನು ಮತ್ತು ಯಾದವ್ 2021 ರಿಂದ ಪರಸ್ಪರ ಪರಿಚಿತರು ಎಂದು ಠಾಕೂರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
"ಕಳೆದ ಕೆಲವು ತಿಂಗಳುಗಳಲ್ಲಿ, ಎಲ್ವಿಶ್ ಫ್ಯಾನ್ ಪೇಜ್ಗಳು ದ್ವೇಷ ಮತ್ತು ಪ್ರಚಾರವನ್ನು ಹರಡುತ್ತಿವೆ, ಇದು ನನ್ನನ್ನು ಸಂಕಷ್ಟಕ್ಕೆ ಸಿಲುಕಿಸಿದೆ" ಎಂದು ಅವರು ಹೇಳಿದರು. ಯಾದವ್ ಅವರನ್ನು ಶುಕ್ರವಾರ ಭೇಟಿಯಾಗಲು ಕೇಳಿಕೊಂಡರು, ಚರ್ಚೆ ಮಾಡುವುದಕ್ಕಾಗಿ ಆಹ್ವಾನಿಸಿದ್ದಾರೆ ಎಂದು ಭಾವಿಸಿ ಒಪ್ಪಿಕೊಂಡಿದ್ದಾಗಿ ಎಂದು ಠಾಕೂರ್ ಹೇಳಿದ್ದಾರೆ.
ಆತ ಮಾಲ್ ಗೆ ಬಂದಾಗ ಅವನು ಮತ್ತು ಅವನ 8-10 ಗೂಂಡಾಗಳು ಕುಡಿದು ನನ್ನನ್ನು ಹೊಡೆಯಲು ಪ್ರಾರಂಭಿಸಿದರು ಮತ್ತು ನಿಂದನೀಯ ಪದಗಳನ್ನು ಬಳಸಲಾರಂಭಿಸಿದರು. ಎಲ್ವಿಶ್ ಯಾದವ್ ನನ್ನ ಬೆನ್ನುಮೂಳೆಯನ್ನು ಮುರಿಯಲು ಪ್ರಯತ್ನಿಸಿದರು ಇದರಿಂದ ನಾನು ದೈಹಿಕವಾಗಿ ಅಂಗವಿಕಲನಾಗುವ ಸಾಧ್ಯತೆ ಇದೆ ಎಂದು ಠಾಕೂರ್ ಆರೋಪಿಸಿದ್ದಾರೆ.