ಜೈರಾಮ್ ರಮೇಶ್
ಜೈರಾಮ್ ರಮೇಶ್ 
ದೇಶ

ಸಂವಿಧಾನದ ಮೇಲಿನ ಬದ್ಧತೆ ಪ್ರದರ್ಶಿಸಲು ಸಂಸದ ಹೆಗಡೆ ವಿರುದ್ಧ ಮೋದಿ ಕ್ರಮ ಕೈಗೊಳ್ಳುತ್ತಾರೆಯೇ?

Lingaraj Badiger

ನವದೆಹಲಿ: ಸಂವಿಧಾನ ಬದಲಾಯಿಸಬೇಕು ಎಂದಿರುವ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಅನಂತ್‌ಕುಮಾರ್ ಹೆಗಡೆ ಹೇಳಿಕೆಗೆ ಸಂಬಂಧಿಸಿದಂತೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಸಂವಿಧಾನದ ಮೇಲಿನ ಬದ್ಧತೆಯನ್ನು ಪ್ರದರ್ಶಿಸಲು ತಮ್ಮ ಪಕ್ಷದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಗುಜರಾತ್ ಮತ್ತು ರಾಜಸ್ಥಾನ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

"ಪ್ರಧಾನಿ ಸಬರಮತಿ ಆಶ್ರಮ ಸ್ಮಾರಕ ಯೋಜನೆಗಾಗಿ ಅಹಮದಾಬಾದ್‌ನಲ್ಲಿದ್ದಾರೆ. ಪ್ರಧಾನಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಮಹಾತ್ಮರನ್ನು ಅಪ್ಪಿಕೊಳ್ಳುತ್ತಿರುವಾಗ, ಅವರು ಮಹಾತ್ಮ ಗಾಂಧಿಯವರ ಅಹಿಂಸೆ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸಮಾನತೆಯ ಆದರ್ಶಗಳಿಗೆ ಬದ್ಧರಾಗುತ್ತಾರೆಯೇ?" ಎಂದು ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಯವರು ಕರ್ನಾಟಕದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಂವಿಧಾನದ ಬಗ್ಗೆ ತಮ್ಮ ವೈಯಕ್ತಿಕ ಬದ್ಧತೆಯನ್ನು ಪ್ರದರ್ಶಿಸುತ್ತಾರೆಯೇ? ಎಂದು ಜೈರಾಮ್ ರಮೇಶ್ ಕೇಳಿದ್ದಾರೆ.

ಶನಿವಾರ ಕಾರವಾರದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಅನಂತ್‌ಕುಮಾರ್ ಹೆಗಡೆ ಅವರು, ಸಂವಿಧಾನವನ್ನು ಬದಲಾಯಿಸಲು ಮತ್ತು ಕಾಂಗ್ರೆಸ್ ಮಾಡಿದ ತಿದ್ದುಡಿಗಳನ್ನು ಮತ್ತು ಅನಗತ್ಯ ಸೇರ್ಪಡೆಗಳನ್ನು ಸರಿಪಡಿಸಲು ಬಿಜೆಪಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ ಎಂದು ಹೇಳಿದ್ದರು.

SCROLL FOR NEXT