ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ANI
ದೇಶ

ಕಾಂಗ್ರೆಸ್ ಬ್ಯಾಂಕ್ ಖಾತೆ, 300 ಕೋಟಿ ರೂ ಸ್ಥಗಿತ.. ಇಂತಹ ಸ್ಥಿತಿಯಲ್ಲಿ ಚುನಾವಣೆ ಎದುರಿಸುವುದು ಹೇಗೆ?: ಮೋದಿ ಸರ್ಕಾರದ ವಿರುದ್ಧ ಖರ್ಗೆ ಕಿಡಿ

Srinivasamurthy VN

ಬೆಂಗಳೂರು: ಕೇಂದ್ರ ಮೋದಿ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಪಕ್ಷದ ಸುಮಾರು 300 ಕೋಟಿ ರೂ ಗಳನ್ನು ಬಳಸದಂತಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, 'ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಪಕ್ಷದ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲು ಬಿಜೆಪಿ ಆದಾಯ ಇಲಾಖೆಗೆ ಸೂಚನೆ ನೀಡಿ ಈ ಕೆಲಸ ಮಾಡಿಸಿದೆ. ನಮ್ಮ ಸುಮಾರು 300 ಕೋಟಿ ರೂ ಗಳು ಇರುವ ಬ್ಯಾಂಕ್ ಖಾತೆಗಳು ಸ್ಥಗಿತವಾಗಿವೆ.

ಆದರೆ ಬಿಜೆಪಿಯ ಬ್ಯಾಂಕ್ ಖಾತೆಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಲೆವೆಲ್ ಪ್ಲೇಯಿಂಗ್ ಗ್ರೌಂಡ್ ಎಲ್ಲಿದೆ? ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ನಾನು ಒತ್ತಾಯಿಸುತ್ತೇನೆ. ಸತ್ಯ ಹೊರಬರದ ಹೊರತು ಅವರ ಖಾತೆಗಳನ್ನು ಸಹ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಭಾರತದ ಚುನಾವಣಾ ಆಯೋಗ (Election Commission of India) ಎಸ್‌ಬಿಐ (SBI)ಯಿಂದ ಪಡೆದ ಚುನಾವಣಾ ಬಾಂಡ್‌ (Electoral Bonds)ಗಳ ಮಾಹಿತಿಯು ಭಾರತೀಯ ಜನತಾ ಪಕ್ಷದ ಮುಖವಾಡವನ್ನು ಕಳಚಿದೆ. ಬಿಜೆಪಿಯು ಇ.ಡಿ. ಮತ್ತು ಐಟಿಗಳ ಮೂಲಕ ಬೆದರಿಕೆ ಒಡ್ಡಿ ದೇಣಿಗೆ ಸಂಗ್ರಹ ಮಾಡಿರುವುದು‌ ಸ್ಪಷ್ಟವಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಬೇಕು. ಇವತ್ತು ಒಂದು ಮಹತ್ವದ ವಿಷಯ ದೇಶದ ಮುಂದೆ ಬಂದಿದೆ.

ಎಷ್ಟೇ ತೊಂದರೆ ಆದರೂ ಸರಿ ಜನರಿಗೆ ಅದರ ಹಿಂದಿನ ಸತ್ಯ ತಿಳಿಸಬೇಕು ಎಂದು ಬಂದಿದ್ದೇವೆ. ಪ್ರಧಾನಮಂತ್ರಿ ಹರಿಶ್ಚಂದ್ರನ ಹಾಗೆ ಬಹಳ ಮಾತನ್ನು ಆಡುತ್ತಿದ್ದರು. ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಇವತ್ತು ಸುಪ್ರೀಂ ಕೋರ್ಟ್ ನಿಂದ ಎಲ್ಲವೂ ಬಹಿರಂಗವಾಗಿದೆ. ಬಿಜೆಪಿ ಹೇಗೆ ಹಣ ಮಾಡಿದೆ ಎಂಬುದು ಚುನಾವಣಾ ಬಾಂಡ್ ನಿಂದ ಬಯಲಾಗಿದೆ ಎಂದು ಖರ್ಗೆ ಹೇಳಿದರು.

ಬಿಜೆಪಿಗೆ 6 ಸಾವಿರ ಕೋಟಿ ದೇಣಿಗೆ

ಭಾರತೀಯ ಜನತಾ ಪಾರ್ಟಿಗೆ ಸುಮಾರು ಆರು ಸಾವಿರ ಕೋಟಿ ರೂ. ದೇಣಿಗೆ ಸಂದಾಯವಾಗಿದೆ. ಇದರಲ್ಲಿ ದೇಣಿಗೆದಾರರು ಇಡಿ ಪ್ರಕರಣದಲ್ಲಿ ಸಿಲುಕಿದವರೇ ಹೆಚ್ಚಿದ್ದಾರೆ. ಅಂತವರನ್ನು ಹೆದರಿಸಿ ಮೋದಿ ಸರ್ಕಾರ ಹಣ ಪಡೆದಿದೆ. ಪ್ರಧಾನಿ ಮೋದಿ ಅವರು ಸತ್ಯ ಹರಿಶ್ಚಂದ್ರ ತರ ಮಾತನಾಡುತ್ತಿದ್ದರು. ‘ನಾ ಖಾವುಂಗಾ, ನಾ ಖಾನೆದೂಂಗಾ’ ಎನ್ನುತ್ತಿದ್ದ ಮೋದಿ ಈ ಹಣದ ಬಗ್ಗೆ ದೇಶಕ್ಕೆ ಉತ್ತರಿಸಬೇಕು. ಮೋದಿ ಉದ್ದೇಶ ಸ್ಪಷ್ಟವಾಗಿದೆ, ವಿರೋಧ ಪಕ್ಷಳಿಗೆ ಹಣ ಸಿಗಬಾರದು ಎಂಬುದು. ಹೀಗಾಗಿಯೇ ನಮ್ಮ ಅಕೌಂಟ್‌ಗಳನ್ನು ಬ್ಲಾಕ್‌ ಮಾಡಲಾಗಿದೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಖರ್ಗೆ ಹೇಳಿದರು.

ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಅಕ್ರಮ ಹಣ

ಜೆಪಿ ಶೇ. 50ರಷ್ಟು ಹಣವನ್ನು ಚುನಾವಣಾ ಬಾಂಡ್ ಮೂಲಕ ಹಣ ಸಂಗ್ರಹಿಸಿದೆ. ಕಾಂಗ್ರೆಸ್ ಪಾಲು ಕೇವಲ 11% ಇದೆ. ಬಿಜೆಪಿಗೆ ಇಷ್ಟೊಂದು ಬೃಹತ್ ಮೊತ್ತದ ದೇಣಿಗೆ ಯಾಕೆ ಕೊಡಲಾಗಿದೆ? ದೇಣಿಗೆ ಕೊಟ್ಟವರು ಯಾರು..?ʼʼ ಎಂದು ಪ್ರಶ್ನಿಸಿದ ಅವರು, ಇದರ ಹಿಂದಿನ ಸತ್ಯ ಈಗ ಬಯಲಾಗಿದೆ. ಯಾರು ಐಟಿ, ಇಡಿ ದಾಳಿಗೆ ತುತ್ತಾಗಿದ್ದರೋ ಅವರು ದೇಣಿಗೆ ನೀಡಿದ್ದಾರೆ.

ಅವರ ಮೇಲೆ ಒತ್ತಡ ಹಾಕಿ ದೇಣಿಗೆ ಸಂಗ್ರಹಿಸಲಾಗಿದೆ. ಸುಪ್ರೀಂ ಕೋರ್ಟ್ ಎಲ್ಲ ಸತ್ಯಗಳನ್ನೂ ಬಹಿರಂಗಗೊಳಿಸಿದೆ. ಪ್ರಧಾನಿ ಮೋದಿ ಅವರು ಎಲ್ಲವನ್ನೂ ನಾನೇ ನಾನೇ ಎಂದು ಹೇಳಿಕೊಳ್ಳುತ್ತಾರೆ. ಇದು ಮೋದಿ ಸರ್ಕಾರ್, ಮೋದಿ ಕಿ ಗ್ಯಾರಂಟಿ ಅಂತ ಹೇಳುತ್ತಿದ್ದರು. ಕನಿಷ್ಠ ಬಿಜೆಪಿ ಅಂತನೂ ಕೂಡ ಹೇಳುತ್ತಿರಲಿಲ್ಲ. 56 ಇಂಚಿನ ಎದೆ ಅವರಿಗೆ ಇರಬಹುದೇನೋ, ಆದರೆ, ಆವರೂ ಪಾರದರ್ಶಕವಾಗಿರಬೇಕು ಎಂದು ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸುವುದು ಹೇಗೆ?

ಕಾಂಗ್ರೆಸ್ ಪಕ್ಷದ ಅಕೌಂಟ್ ನಲ್ಲಿದ್ದ ಎಲ್ಲ ಹಣವನ್ನು ಫ್ರೀಜ಼್ ಮಾಡಲಾಗಿದೆ. ಹೀಗೆ ಮಾಡಿದರೆ ನಾವು ಚುನಾವಣೆಗೆ ಹೋಗುವುದು ಹೇಗೆ? ನೀವು ದೇಣಿಗೆ ಮೂಲಕ ಸಾವಿರಾರು ಕೋಟಿ ಸಂಗ್ರಹ ಮಾಡಬಹುದು. ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರು, ಸಣ್ಣ ಪುಟ್ಟ ಲೀಡರ್ಸ್ ಕೊಟ್ಟಿರುವ ಹಣವನ್ನ ಫ್ರೀಜ್ ಮಾಡಿದ್ದೀರಿʼʼ ಎಂದು ಹೇಳಿದ ಖರ್ಗೆ ಅವರು, ಬಿಜೆಪಿಯ ಅಕೌಂಟ್‌ಗಳನ್ನು ಫ್ರೀಜ್ ಮಾಡಬೇಕು. ಸ್ಪೆಷಲ್ ಟೀಮ್ ಮೂಲಕ ತನಿಖೆ ನಡೆಸಬೇಕು. ದೇಣಿಗೆ ನೀಡಲು ಯಾರಾದರೂ ಹಿಂಸೆ ಕೊಟ್ಟಿದ್ದಾರಾ? ಒತ್ತಡ ಹಾಕಿದ್ದಾರಾ..? ಎಲ್ಲವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಖರ್ಗೆ ಆಗ್ರಹಿಸಿದರು.

ಅಂದಹಾಗೆ ಇಂದಿನ ಸುದ್ದಿಗೋಷ್ಠಿಯಸ್ಸಿ ರಾಜ್ಯಸಭಾ ಸದಸ್ಯ ಅಜಯ್ ಮಾಕೇನ್, ಪವನ್ ಖೇರಾ, ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಲೀಂ ಅಹ್ಮದ್ ಅವರು ಉಪಸ್ಥಿತರಿದ್ದರು.

SCROLL FOR NEXT