ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ
ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ 
ದೇಶ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಹಿಂದಿನಿಂದ ತಳ್ಳಲಾಯಿತೆ? ಟಿಎಂಸಿ ಸ್ಪಷ್ಟನೆ ಏನು?

Shilpa D

ಕೊಲ್ಕೋತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬೀಳುವಂತೆ ಹಿಂದಿನಿಂದ ತಳ್ಳಲಾಗಿದೆ ಎಂಬ ಆರೋಪಗಳಿಗೆ ತೃಣಮೂಲ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

69 ವರ್ಷದ ಮಮತಾ ಬ್ಯಾನರ್ಜಿ ಅವರು ದಕ್ಷಿಣ ಕೋಲ್ಕತ್ತದ ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಬಿದ್ದಿದ್ದರು. ಹಣೆ ಮತ್ತು ಮೂಗಿಗೆ ಪೆಟ್ಟಾಗಿದ್ದರಿಂದ ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಳ್ಳಿರಬಹುದು ಎಂದು ಆಸ್ಪತ್ರೆಯ ನಿರ್ದೇಶಕ ಮಣಿಮೋಯ್ ಬಂದೋಪಾಧ್ಯಾಯ ಗುರುವಾರ ಹೇಳಿದ್ದರು. ನಂತರ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದರು. ಇದು ಭಾರಿ ಗೊಂದಲ ಹಾಗೂ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಮಗ್ರ ತನಿಖೆಗೆ ಆಗ್ರಹಿಸಿದೆ.

ಮುಖ್ಯಮಂತ್ರಿಗಳನ್ನು ಹಿಂದಿನಿಂದ ನೂಕಲಾಗಿದೆ ಎಂದು ಎಸ್‌ಎಸ್‌ಕೆಎಂ ಆಸ್ಪತ್ರೆ ನಿರ್ದೇಶಕರು ಗುರುವಾರ ರಾತ್ರಿ ಹೇಳಿದ್ದರು. ಇಂದು ಬೆಳಿಗ್ಗೆ ತಮ್ಮ ಮಾತನ್ನು ಬದಲಾಯಿಸಿರುವ ಅವರು, ಬೇರೆಯೇ ಕಾರಣ ಹೇಳುತ್ತಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಬೀಳಲು ಏನು ಕಾರಣ ಎಂಬುದನ್ನು ಪತ್ತೆ ಹಚ್ಚಲು ಸಮಗ್ರ ತನಿಖೆ ನಡೆಸಬೇಕು. ಈ ಘಟನೆ ಬಗ್ಗೆ ತಿಳಿದುಕೊಳ್ಳುವುದು ಪಶ್ಚಿಮ ಬಂಗಾಳದ ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಸಂಸದ ದಿಲೀಪ್‌ ಘೋಷ್‌ ಹೇಳಿದ್ದಾರೆ.

ಈ ವಿಷಯವನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದು ಟಿಎಂಸಿ ನಾಯಕಿ ಹಾಗೂ ಸಚಿವೆ ಶಶಿ ಪಾಂಜಾ ಹೇಳಿದ್ದಾರೆ. ಸಿಎಂ ತಲೆತಿರುಗುವಿಕೆ ಅನುಭವಿಸಿದ ನಂತರ ಕುಸಿದು ಬಿದ್ದಿದ್ದಾರೆ ಎಂದು ಹೇಳಿದೆ. ಅಪಘಾತದ ಬಗ್ಗೆ ದಾರಿ ತಪ್ಪಿಸುವ ಟೀಕೆಗಳನ್ನು ಮಾಡದಂತೆ ಟಿಎಂಸಿ ನಾಯಕ ಜನಸಾಮಾನ್ಯರನ್ನು ಕೇಳಿಕೊಂಡಿದ್ದಾರೆ.

ಸಿಎಂ ಕುಸಿದು ಬಿದ್ದುದಕ್ಕೆ ಕಾರಣ ಅಧಿಕ ರಕ್ತದೊತ್ತಡ ಅಥವಾ ಸಕ್ಕರೆ ಕಾಯಿಲೆ ಇರಬಹುದು ಎಂದು ಅವರು ಹೇಳಿದ್ದಾರೆ. ದೀದಿ ಕೂಡ ಒಬ್ಬರು ಮನುಷ್ಯರು. ಅವರು ತುಂಬಾ ಬ್ಯುಸಿಯಾದ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಘಟನೆಯನ್ನು ಯಾರೂ ತಪ್ಪು ರೀತಿಯಲ್ಲಿ ವ್ಯಾಖ್ಯಾನಿಸಬಾರದು ಎಂದು ಅವರು ಹೇಳಿದ್ದಾರೆ.

ನಿಮಗೆ ಆರೋಗ್ಯ ಸರಿ ಇಲ್ಲದಿರುವಾಗ, ಬೀಳುವ ಸಾಧ್ಯತೆ ಇರುತ್ತದೆ. ಈ ರೀತಿ ಆದಾಗ, ಹಿಂದಿನಿಂದ ನಿಮ್ಮನ್ನು ಯಾರೋ ತಳ್ಳಿದ್ದರು ಎಂದು ಅನಿಸುತ್ತದೆ. ಈ ಬಗ್ಗೆ ವೈದ್ಯರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರಲ್ಲದೇ, ಹಣೆಯಲ್ಲಿ ರಕ್ತಸ್ರಾವದಿಂದ ಮುಖ್ಯಮಂತ್ರಿಗಳು ಬಳಲಿದ್ದನ್ನು ತೋರಿಸುವ ಚಿತ್ರಗಳನ್ನು ಸಹ ನಾವೆಲ್ಲ ನೋಡಿದ್ದೇವೆ ಎಂದು ಹೇಳಿದ್ದಾರೆ.

SCROLL FOR NEXT