ನವದೆಹಲಿ: ಬೆಂಗಳೂರಿನ ರಾಮಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 1 ರಂದು ನಡೆದಿದ್ದ ಐಇಡಿ ಬಾಂಬ್ ದಾಳಿಯಿಂದ ಕೆಫೆಗೆ ವ್ಯಾಪಕ ಹಾನಿಯಾಗಿತ್ತು. ಹಲವಾರು ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿ ಸೇರಿದಂತೆ 10 ಮಂದಿ ಗಾಯಗೊಂಡಿದ್ದರು. ಅವರಲ್ಲಿ ಕೆಲವರು ತೀವ್ರವಾಗಿ ಗಾಯಗೊಂಡಿದ್ದರು. ಹಲವು ರಾಜ್ಯಗಳ ವಿವಿಧ ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ ಎಂದು ಹಿರಿಯ ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ತಮಿಳುನಾಡಿನ ಕೊಯಮತ್ತೂರು ಮೂಲಕ ಇಬ್ಬರು ಡಾಕ್ಟರ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಎನ್ಐಎಯ ಎರಡು ತಂಡಗಳು ಸಾಯಿಬಾಬಾ ಕಾಲೋನಿಯ ನಾರಾಯಣಗುರು ಸ್ಟ್ರೀಟ್ನಲ್ಲಿರುವ ಇಬ್ಬರು ವೈದ್ಯರ ನಿವಾಸಗಳ ಮೇಲೆ ದಾಳಿ ನಡೆಸಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎರಡೂ ಮನೆಗಳ ಮುಂದೆ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿತ್ತು ಮೂಲಗಳು ತಿಳಿಸಿವೆ.
ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ತನಿಖಾ ಸಂಸ್ಥೆ, ಏಪ್ರಿಲ್ 12 ರಂದು ಮಾಸ್ಟರ್ ಮೈಂಡ್ ಅದ್ಬುಲ್ ಮಥೀನ್ ಅಹ್ಮದ್ ತಾಹಾ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಈ ವಿಷಯದಲ್ಲಿ ಬಂಧಿಸಿತ್ತು. ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇರಿಸಿದ್ದ ತಾಹಾ ಮತ್ತು ಇತರ ಆರೋಪಿಗಳಾದ ಮುಸ್ಸಾವಿರ್ ಹುಸೇನ್ ಶಾಜಿಬ್ ಅವರನ್ನು ಕೋಲ್ಕತ್ತಾ ಬಳಿಯ ಲಾಡ್ಜ್ನಿಂದ ಬಂಧಿಸಲಾಗಿತ್ತು.