ಮತದಾನಕ್ಕೆ ಸರದಿಯಲ್ಲಿ ನಿಂತಿರುವ ಜನರು  
ದೇಶ

ಜಮ್ಮು-ಕಾಶ್ಮೀರ ಚುನಾವಣೆ: ಬೆಳಗ್ಗೆ 9 ಗಂಟೆ ಹೊತ್ತಿಗೆ ಶೇ.11.11ರಷ್ಟು ಮತದಾನ

ಜಿಲ್ಲಾ ಚುನಾವಣಾಧಿಕಾರಿ, ದೋಡಾ ಹರ್ವಿಂದರ್ ಸಿಂಗ್, ಮತಗಟ್ಟೆಗಳಲ್ಲಿ ಮತದಾನ ಸಾಂಗವಾಗಿ ಸಾಗುತ್ತಿದ್ದು, ಜನರು ಮತ ಚಲಾಯಿಸಲು ಉತ್ಸಾಹ ತೋರುತ್ತಿದ್ದಾರೆ ಎಂದರು.

ಶ್ರೀನಗರ: ಭಾರತದ ಚುನಾವಣಾ ಆಯೋಗದ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ಮತದಾನದಲ್ಲಿ ಇಂದು ಬುಧವಾರ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಶೇಕಡಾ 11.11 ರಷ್ಟು ಮತದಾನವಾಗಿದೆ.

ECA ನೀಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಿಶ್ತ್ವಾರ್‌ನಲ್ಲಿ ಬೆಳಗ್ಗೆ 9 ಗಂಟೆಗೆ ಶೇಕಡಾ 14.83ರಷ್ಟು ಮತದಾನವಾಗಿದ್ದು, ಪುಲ್ವಾಮಾದಲ್ಲಿ ಶೇಕಡಾ 9.18 ರಷ್ಟು ಮತದಾನವಾಗಿದೆ. ಇನ್ನು ಅನಂತನಾಗ್ ಜಿಲ್ಲೆಯಲ್ಲಿ ಶೇ.10.26, ದೋಡಾ ಶೇ.12.90, ಕುಲ್ಗಾಮ್ ಶೇ.10.77, ರಾಂಬನ್ ಶೇ.11.91 ಮತ್ತು ಶೋಪಿಯಾನ್ ಶೇ.11.44 ಮತದಾನವಾಗಿದೆ.

ಜಿಲ್ಲಾ ಚುನಾವಣಾಧಿಕಾರಿ, ದೋಡಾ ಹರ್ವಿಂದರ್ ಸಿಂಗ್, ಮತಗಟ್ಟೆಗಳಲ್ಲಿ ಮತದಾನ ಸಾಂಗವಾಗಿ ಸಾಗುತ್ತಿದ್ದು, ಜನರು ಮತ ಚಲಾಯಿಸಲು ಉತ್ಸಾಹ ತೋರುತ್ತಿದ್ದಾರೆ. ಈ ಬಾರಿ ದಾಖಲೆಯ ಮತದಾನವಾಗುತ್ತದೆ ಎಂದು ಭಾವಿಸುತ್ತೇವೆ. ಇನ್ನೂ ಮತದಾನ ಮಾಡದಿರುವವರು ಬೇಗನೆ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿ ಎಂದು ಕೇಳಿಕೊಂಡಿದ್ದಾರೆ.

ಮತದಾರರು, ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರು ತಮ್ಮ ತಮ್ಮ ಮತಗಟ್ಟೆಗಳ ಹೊರಗೆ ಮುಂಜಾನೆ ಸರತಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುವ ಮುನ್ನವೇ ಹಲವು ಬೂತ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತದಾನವು ವೇಗವನ್ನು ಪಡೆದುಕೊಂಡಿತು, ಬೆಳಗಿನ ತಂಗಾಳಿಯು ಬಿಸಿಲಿಗೆ ದಾರಿ ಮಾಡಿಕೊಟ್ಟಿದ್ದರಿಂದ ಮೊದಲ ಎರಡು ಗಂಟೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಬಂದು ಹಕ್ಕು ಚಲಾಯಿಸಿದ್ದಾರೆ.

ಬಹಳ ಸಮಯದ ನಂತರ ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಈ ಅವಕಾಶವನ್ನು ಹೆಚ್ಚು ಬಳಸುತ್ತಿದ್ದಾರೆ ಎಂದು ಮತದಾರರು ಹೇಳಿದ್ದಾರೆ.

"ಇಂದು ಪ್ರಜಾಪ್ರಭುತ್ವದ ಹಬ್ಬ. ನಾವು 10 ವರ್ಷಗಳ ನಂತರ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದೇವೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ಇತರ ಸರ್ಕಾರಗಳಿಗಿಂತ ಉತ್ತಮವಾಗಿದೆ" ಎಂದು ಕುಲ್ಗಾಮ್‌ನ ಬಶೀರ್ ಅಹ್ಮದ್ ಹೇಳಿದರು.

ಕಾಶ್ಮೀರದ ಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳಿವೆ. ರಾಜ್ಯತ್ವವನ್ನು ಮರುಸ್ಥಾಪಿಸುವುದು ಅತ್ಯಂತ ಮುಖ್ಯವಾದುದು ಎಂದು ಅವರು ಹೇಳಿದರು.

ಅಭಿವೃದ್ಧಿಯ ಹೊರತಾಗಿ ನಮಗೆ ಮಾಡಿದ್ದಕ್ಕೆ ವಿರುದ್ಧವಾಗಿ ಮತ ಹಾಕುತ್ತಿದ್ದೇವೆ, ನಮ್ಮ ರಾಜ್ಯತ್ವವನ್ನು ಕಿತ್ತುಕೊಳ್ಳಲಾಗಿದೆ, ನಮ್ಮ ಮೇಲೆ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಹಲ್ಲೆಗಳು ನಡೆಯುತ್ತಿವೆ, ಅದೆಲ್ಲದರ ವಿರುದ್ಧದ ಮತ ಇದಾಗಿದೆ ಎಂದು ಅಹ್ಮದ್ ಹೇಳಿದರು.

ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, 24 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಸುಗಮವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಹಂತದ ಮತದಾನದ ಇಂದು ಮೊದಲ ಹಂತದಲ್ಲಿ, ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ಮಾಡುತ್ತಿವೆ.

ಜಮ್ಮು ಪ್ರದೇಶದ ಮೂರು ಜಿಲ್ಲೆಗಳಲ್ಲಿ ಎಂಟು ಮತ್ತು ಕಾಶ್ಮೀರ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿ 16 - 24 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುತ್ತಿರುವ 90 ಸ್ವತಂತ್ರರು ಸೇರಿದಂತೆ 219 ಅಭ್ಯರ್ಥಿಗಳ ಭವಿಷ್ಯವನ್ನು 23 ಲಕ್ಷಕ್ಕೂ ಹೆಚ್ಚು ಮತದಾರರು ನಿರ್ಧರಿಸುತ್ತಾರೆ.

3,276 ಮತಗಟ್ಟೆಗಳಲ್ಲಿ ಒಟ್ಟು 14,000 ಮತಗಟ್ಟೆ ಸಿಬ್ಬಂದಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರದ ಪ್ರಮುಖ ಅಭ್ಯರ್ಥಿಗಳ ಪೈಕಿ ಇಂದು ಸಿಪಿಐ (ಎಂ)ನ ಮೊಹಮ್ಮದ್ ಯೂಸುಫ್ ತರಿಗಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್, ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ ಮತ್ತು ಪಿಡಿಪಿಯ ಸರ್ತಾಜ್ ಮದ್ನಿ ಮತ್ತು ಅಬ್ದುಲ್ ರೆಹಮಾನ್ ವೀರಿ ಅವರ ಭವಿಷ್ಯ ನಿರ್ಧಾರವಾಗಲಿದೆ.

ಶ್ರೀಗುಫ್ವಾರಾ-ಬಿಜ್‌ಬೆಹರಾದಿಂದ ಸ್ಪರ್ಧಿಸುತ್ತಿರುವ ಪಿಡಿಪಿಯ ಇಲ್ತಿಜಾ ಮುಫ್ತಿ ಮತ್ತು ಪುಲ್ವಾಮಾದಿಂದ ಪಕ್ಷದ ಯುವ ನಾಯಕ ವಹೀದ್ ಪಾರಾ ಕೂಡ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT