ಪ್ರಿಯಕರನಿಗಾಗಿ ಮಕ್ಕಳನ್ನೇ ಕೊಂದ ದೂರ್ತ ತಾಯಿ 
ದೇಶ

ಪ್ರಿಯಕರನ ಜೊತೆ ಮದುವೆಯಾಗಲು ತಾನೇ ಹೆತ್ತು ಸಾಕಿದ 3 ಮಕ್ಕಳನ್ನೇ ಕೊಂದ 'ಪಾಪಿ' ತಾಯಿ; ಧೂರ್ತ ಮಹಿಳೆ ಹೈಡ್ರಾಮಾ; Police ತನಿಖೆಯೇ ರೋಚಕ!

ಮಹಿಳೆಯೊಬ್ಬಳು ತನ್ನ ವಿವಾಹೇತರ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗಿದ್ದಾರೆ ಎಂದು ತಾನೇ ಹೆತ್ತು ಸಾಕಿದ ಮೂರು ಅಮಾಯಕ ಮಕ್ಕಳನ್ನು ಕೊಂದು ಮುಗಿಸಿದ್ದಾಳೆ.

ಸಂಗಾರೆಡ್ಡಿ: ಬಾಲ್ಯದ ಸ್ನೇಹಿತ-ಪ್ರಿಯಕರನೊಂದಿಗೆ ಮದುವೆಯಾಗಿ ಹೊಸ ಜೀವನ ನಡೆಸಲು ಇಚ್ಚಿಸಿದ್ದ ಮಹಿಳೆಯೊಬ್ಬಳು ಅದಕ್ಕೆ ಅಡ್ಡಿಯಾಗಿದ್ದ ತನ್ನ ಮೂರು ಮಕ್ಕಳನ್ನು ಕೊಂದು ಹಾಕಿರುವ ಧಾರುಣ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅಮೀನ್‌ಪುರ ಮಂಡಲದಲ್ಲಿ ಈ ಘೋರ ಹತ್ಯೆ ಪ್ರಕರಣ ದಾಖಲಾಗಿದ್ದು, ಮಹಿಳೆಯೊಬ್ಬಳು ತನ್ನ ವಿವಾಹೇತರ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗಿದ್ದಾರೆ ಎಂದು ತಾನೇ ಹೆತ್ತು ಸಾಕಿದ ಮೂರು ಅಮಾಯಕ ಮಕ್ಕಳನ್ನು ಕೊಂದು ಮುಗಿಸಿದ್ದಾಳೆ.

ಮೃತರನ್ನು ಸಾಯಿಕೃಷ್ಣ (12), ಮಧುಪ್ರಿಯಾ (10), ಗೌತಮ್ (8) ಎಂದು ಗುರುತಿಸಲಾಗಿದೆ. ಮಾರ್ಚ್ 27 ರಂದು ಈ ಘನಘೋರ ಹತ್ಯೆ ನಡೆದಿದ್ದು, ಪೊಲೀಸರು ಇದೀಗ ನಿಗೂಢ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿ ಮಹಿಳೆ ರಜಿತಾ ಅಲಿಯಾಸ್ ಲಾವಣ್ಯ ಮತ್ತು ಆಕೆಯ ಪ್ರಿಯಕರ ಶಿವಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ರಜಿತಾ ಅಲಿಯಾಸ್ ಲಾವಣ್ಯ 2013 ರಲ್ಲಿ ಬೀರಂಗುಡದ ರಾಘವೇಂದ್ರನಗರ ಕಾಲೋನಿಯ ನಿವಾಸಿ ಅವುರಿಚಿಂತಲ ಚೆನ್ನಯ್ಯ ಅವರನ್ನು ವಿವಾಹವಾಗಿದ್ದರು. ಚೆನ್ನಯ್ಯ ಲಾವಣ್ಯಗಿಂತ 20 ವರ್ಷ ದೊಡ್ಡವನಾಗಿದ್ದ. ರಜಿತಾ ಖಾಸಗಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿಳು. ಚೆನ್ನಯ್ಯ ನೀರಿನ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಈಗ್ಗೆ ತನ್ನ ಶಾಲಾ ಸಹಪಾಠಿಗಳು ಪರಸ್ಪರ ಸಂಪರ್ಕಕ್ಕೆ ಬಂದು ಪರಸ್ಪರ ಭೇಟಿಯಾಗಲು ನಿರ್ಧರಿಸಿದರು. ಇದಕ್ಕಾಗಿ ಒಂದು ಗೆಟ್-ಟುಗೆದರ್ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮಕ್ಕೆ ರಜಿತಾ ಕೂಡ ಹೋಗಿದ್ದಳು. ಅದೇ ಕಾರ್ಯಕ್ರಮದಲ್ಲಿ ಆಕೆಯ ಬಾಲ್ಯದ ಸ್ನೇಹಿತ ಹಾಗೂ ಸಹಪಾಠಿ ಶಿವಕುಮಾರ್ ನನ್ನು ಭೇಟಿಯಾಗಿದ್ದಾಳೆ. ಈ ಶಿವಕುಮಾರ್ ನಲ್ಗೊಂಡ ಜಿಲ್ಲೆಯ ಗೋಡುಕೊಂಡದ ನಿವಾಸಿಯಾಗಿದ್ದಾನೆ.

ಅಲ್ಲಿಂದ ಇಬ್ಬರೂ ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಬಳಿಕ ವಿವಾಹೇತರ ಸಂಬಂಧದವರೆಗೂ ಸಂಬಂಧ ಮುಂದುವರೆಸಿದ್ದಾರೆ. ಫೋನ್ ನಲ್ಲಿ ಮಾತನಾಡುವುದರಿಂದ ಆರಂಭವಾದ ಇವರ ಸಂಪರ್ಕ ಕ್ರಮೇಣ ವಿಡಿಯೋ ಕಾಲ್ ವರೆಗೂ ಮುಂದುವರೆದಿತ್ತು. ಮೊದಲೇ ತನ್ನ 20 ವರ್ಷದ ಹಿರಿಯ ಗಂಡನನ್ನು ಕಂಡರೆ ಇಷ್ಟವಿಲ್ಲದ ರಜಿತಾ ಕ್ರಮೇಣ ಶಿವಕುಮಾರ್ ಗೆ ಹತ್ತಿರವಾದಳು. ಇದೇ ವಿಚಾರವಾಗಿ ಆಗಾಗ ತನ್ನ ಗಂಡ ಚೆನ್ನಯ್ಯ ಜೊತೆ ಜಗಳ ಕೂಡ ಮಾಡುತ್ತಿದ್ದಳು.

'ಮದುವೆಗೆ ಮಕ್ಕಳು ಅಡ್ಡಿಯಾದರೆ ಅವರನ್ನು ಕೊಂದು ಮುಗಿಸುತ್ತೇನೆ'

ಇದೇ ಸಂದರ್ಭದಲ್ಲಿ ಶಿವಕುಮಾರ್ ನನ್ನು ರಜಿತಾ ಮದುವೆಯಾಗುವಂತೆ ಕೇಳಿದ್ದಾರೆ. ಈ ವೇಳೆ ಶಿವಕುಮಾರ್ ನೀನು ನಿನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ಬಂದರೆ ನಾನು ನಿನ್ನನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಈ ವೇಳೆ ಇದಕ್ಕೆ ರಜಿತಾ ಉತ್ತರಿಸಿದ್ದು, ನಮ್ಮ ಮದುವೆಗೆ ಮಕ್ಕಳೇ ಅಡ್ಡಿಯಾದರೇ ಅವರನ್ನೇ ಕೊಂದು ಮುಗಿಸುತ್ತೇನೆ ಎಂದು ಹೇಳಿದ್ದಾಳೆ.

ಇದಕ್ಕೆ ಶಿವಕುಮಾರ್ ಕೂಡ ಒಪ್ಪಿಗೆ ಸೂಚಿಸಿ ಮಾರ್ಚ್ 27ರಂದು ಮಕ್ಕಳ ಕೊಲ್ಲಲು ಸಂಚು ರೂಪಿಸಿದ್ದ. ಅದರಂತೆ ಮಾರ್ಚ್ 27 ರ ಸಂಜೆ ರಜಿತಾ ಪತಿ ಚೆನ್ನಯ್ಯ ಮನೆಯಿಂದ ಕೆಲಸಕ್ಕೆ ಹೊರಗಡೆ ಹೋದಾಗ ರಜಿತಾ ತನ್ನ ಮೂರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಹಾಕಿದ್ದಾಳೆ. ಮೊದಲು ತನ್ನ ಹಿರಿಯ ಮಗ ಸಾಯಿಕೃಷ್ಣ, ನಂತರ ಅವಳ ಮಗಳು ಮಧುಪ್ರಿಯಾ ಮತ್ತು ಅವಳ ಕಿರಿಯ ಮಗ ಗೌತಮ್ ಕುತ್ತಿಗೆಗೆ ಟವಲ್ ಬಿಗಿದು ಅವರ ಬಾಯಿಗೆ ಬಟ್ಟೆ ತುರಿಕಿ ಕಿರುಚಾಡದಂತೆ ಮಾಡಿ ಕೊಂದು ಮುಗಿಸಿದ್ದಾಳೆ.

ಕೊಲೆ ಮಾಡಿ ತಪ್ಪಿಸಿಕೊಳ್ಳಲು ಹೈಡ್ರಾಮಾ

ಇನ್ನು ಮಕ್ಕಳ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಧೂರ್ತ ಮಹಿಳೆ ರಜಿತಾ ದೊಡ್ಡ ಹೈಡ್ರಾಮಾವನ್ನೇ ರಚಿಸಿದ್ದಳು. ಕೆಲಸಕ್ಕೆ ಹೋದ ತನ್ನ ಗಂಡ ಮನೆಗೆ ಬರುತ್ತಲೇ ತನಗೆ ಅತೀವ ಹೊಟ್ಟೆ ನೋವು.. ರಾತ್ರಿ ಕಬ್ಬು ತಿಂದ ಬಳಿಕ ತೀವ್ರ ಹೊಟ್ಟೆನೋವು ಬಂದಿದೆ ಎಂದು ಡ್ರಾಮಾ ಮಾಡಿದ್ದಾಳೆ. ಹೆಂಡತಿಯ ನೋವಿನ ಯಾತನೆ ನೋಡಿದ ಗಂಡ ಚೆನ್ನಯ್ಯ ಆತಂಕಗೊಂಡು ಮಕ್ಕಳು ಮಲಗಿದ್ದಾರೆ ಎಂದು ಭಾವಿಸಿ ಮೊದಲು ರಜಿತಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆಸ್ಪತ್ರೆಯಲ್ಲಿ ರಜಿತಾಳನ್ನು ದಾಖಲಿಸಿ ಬಳಿಕ ಮನೆಗೆ ಬಂದು ಮಕ್ಕಳನ್ನು ನೋಡಿದಾಗ ಅವರು ಸಾವನ್ನಪ್ಪಿರುವುದು ತಿಳಿದಿದೆ. ಕೂಡಲೇ ಚೆನ್ನಯ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರೋಚಕ ಪೊಲೀಸ್ ತನಿಖೆ, ಫೋನ್ ಕರೆಯಿಂದ ಸಿಕ್ಕಿಬಿದ್ದ ಧೂರ್ತ ಮಹಿಳೆ

ಇನ್ನು ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾವಿಗೀಡಾದ ಮಕ್ಕಳ ತಂದೆ ಚೆನ್ನಯ್ಯ ಮತ್ತು ತಾಯಿ ರಜಿತಾಳ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ರಜಿತಾಳ ಮೊಬೈಲ್ ನಿಂದ ಒಂದು ಸಂಖ್ಯೆಗೆ ಹೆಚ್ಚು ಬಾರಿ ಕರೆಗಳು ಹೋಗಿದ್ದು, ಈ ಕರೆಗಳನ್ನು ಪರಿಶಿಲೀಸಿ ಅನುಮಾನಗೊಂಡ ಪೊಲೀಸರು ಮೊದಲು ರಜಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ರಜಿತಾ ಪೊಲೀಸರ ತನಿಖೆ ವೇಳೆ ನಡೆದ ವಿಚಾರ ಬಾಯಿ ಬಿಟ್ಟಿದ್ದು, ಬಳಿಕ ಆಕೆಯ ಪ್ರಿಯಕರ ಶಿವಕುಮಾರ್ ನನ್ನು ಕೂಡ ಬಂಧಿಸಿದ್ದಾರೆ. ಇದೀಗ ಇಬ್ಬರೂ ಆರೋಪಿಗಳನ್ನು ಕೋರ್ಟ್ 3 ದಿನಗಳ ಪೊಲೀಸ್ ವಶಕ್ಕೆ ನೀಡಿದ್ದು, ಇಬ್ಬರೂ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಸಂಗಾರೆಡ್ಡಿ ಎಸ್ಪಿ ಪರಿತೋಷ್ ಪಂಕಜ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT