ಲಖನೌ: ಉತ್ತರ ಪ್ರದೇಶ ಸಚಿವೆ ಬೇಬಿ ರಾಣಿ ಮೌರ್ಯ ಅವರು ಆಗ್ರಾದಲ್ಲಿರುವ ಶಹಜಹಾನ್ ಉದ್ಯಾನವನಕ್ಕೆ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರಿಡಬೇಕು ಎಂದು ಭಾನುವಾರ ಒತ್ತಾಯಿಸಿದ್ದಾರೆ.
ಮಹಿಳಾ ಕಲ್ಯಾಣ ಸಚಿವೆ ಬೇಬಿ ರಾಣಿ ಅವರು ಈ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
"ಹೌದು, ನಾನು ಈ ವಿಷಯದ ಬಗ್ಗೆ ಮತ್ತು ಶಹಜಹಾನ್ ಉದ್ಯಾನವನಕ್ಕೆ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ ಪ್ರಗತಿಪರ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರಿಡುಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ಅವರಿಗೆ ಪತ್ರ ಬರೆದಿದ್ದೇನೆ. ನಮ್ಮ ಸರ್ಕಾರಗಳು ಯಾವಾಗಲೂ ಮಹಿಳಾ ಸಬಲೀಕರಣವನ್ನು ಉತ್ತೇಜಿಸುತ್ತಿರುವುದರಿಂದ ಇದು ಶೀಘ್ರದಲ್ಲೇ ವಾಸ್ತವದಲ್ಲಿ ಜಾರಿಗೆ ಬರಲಿದೆ" ಎಂದು ಮೌರ್ಯ ಪಿಟಿಐಗೆ ತಿಳಿಸಿದ್ದಾರೆ.
ಶಹಜಹಾನ್ ಉದ್ಯಾನವನವು ಆಗ್ರಾ ಜಿಲ್ಲೆಯ ತಾಜ್ ಮಹಲ್ ಮತ್ತು ಆಗ್ರಾ ಕೋಟೆಯ ನಡುವಿನ ಮೊಘಲ್ ಯುಗದ ಹಸಿರು ಸ್ಥಳವಾಗಿದೆ.
"ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಈ ಉದ್ಯಾನವನದ ಹೆಸರು ಬದಲಾವಣೆ ಜನಸಾಮಾನ್ಯರಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಉದ್ಯಾನವನಕ್ಕೆ ಮರುನಾಮಕರಣ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ" ಎಂದು ಸಚಿವೆ ಹೇಳಿದ್ದಾರೆ.
ಶಹಜಹಾನ್ ಉದ್ಯಾನವನದ ಮರುನಾಮಕರಣದ ಬಗ್ಗೆ ಪರಿಶೀಲಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಮೌರ್ಯ ತಿಳಿಸಿದ್ದಾರೆ.