ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ 
ದೇಶ

National Herald Case: ಸೋನಿಯಾ-ರಾಹುಲ್ ವಿರುದ್ಧ ED ಚಾರ್ಚ್'ಶೀಟ್; ಕೇಂದ್ರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ಮುಂದು!

ವಿರೋಧ ಪಕ್ಷದ ವಿರುದ್ಧ ಮೋದಿ-ಶಾ ಆಡಳಿತದ ದ್ವೇಷಕ್ಕೆ ಮಿತಿಯಿಲ್ಲದಂತಾಗಿದೆ. ಜನರ ಕಳವಳಗಳನ್ನು ಪರಿಹರಿಸಲು ವಿಫಲರಾಗಿರುವ ಮತ್ತು ನಿರಂತರವಾಗಿ ಗೊಂದಲದ ಮೇಲೆ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ಮತ್ತು ಗೃಹ ಸಚಿವರು, ಈ ಕ್ರಮದ ಮೂಲಕ ಹತಾಶೆಯನ್ನು ತೋರಿಸುತ್ತಿದ್ದಾರೆ.

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಆರೋಪಪಟ್ಟಿಯನ್ನು ಖಂಡಿಸಿ, ಕಾಂಗ್ರೆಸ್ ಬುಧವಾರ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ದೇಶಾದ್ಯಂತ ಇಡಿ ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ತಿಳಿಸಿದೆ.

ಶಾಸಕರು, ಸಂಸದರು, ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಪಕ್ಷದ ಎಲ್ಲಾ ಹಿರಿಯ ನಾಯಕರು ರಾಜ್ಯ ಮಟ್ಟದ ಪ್ರತಿಭಟನೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಜಾರಿ ನಿರ್ದೇಶನಾಲಯದ ಕ್ರಮಗಳನ್ನು ಖಂಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು, ವಿರೋಧ ಪಕ್ಷದ ವಿರುದ್ಧ ಮೋದಿ-ಶಾ ಆಡಳಿತದ ದ್ವೇಷಕ್ಕೆ ಮಿತಿಯಿಲ್ಲದಂತಾಗಿದೆ. ಜನರ ಕಳವಳಗಳನ್ನು ಪರಿಹರಿಸಲು ವಿಫಲರಾಗಿರುವ ಮತ್ತು ನಿರಂತರವಾಗಿ ಗೊಂದಲದ ಮೇಲೆ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ಮತ್ತು ಗೃಹ ಸಚಿವರು, ಈ ಕ್ರಮದ ಮೂಲಕ ಹತಾಶೆಯನ್ನು ತೋರಿಸುತ್ತಿದ್ದಾರೆ. ನಮ್ಮ ನಾಯಕರು ದೇಶಕ್ಕಾಗಿ ತಮ್ಮ ರಕ್ತವನ್ನು ನೀಡಿದ ಕುಟುಂಬಕ್ಕೆ ಸೇರಿದವರು ಎಂಬುದನ್ನು ಕೇಂದ್ರ ಮರೆತಂತಿದ. ಅವರ ಈ ಸಣ್ಣ ತಂತ್ರಗಳು, ಕೇಂದ್ರೀಯ ಸಂಸ್ಥೆಗಳನ್ನು ಬಳಕೆ ಮಾಡುವುದರಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಇದು ಈ ವಿಭಜಕ, ವಿನಾಶಕಾರಿ ಆಡಳಿತದ ವಿರುದ್ಧ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

"ಕ್ರಮ ಎಂದು ಕರೆಯಲ್ಪಡುವ ಕ್ರಮವು ನಿಯಮಿತ ಕಾನೂನು ಕಾರ್ಯವಿಧಾನವಲ್ಲ. ಇದು ಕಾನೂನಿನ ನಿಯಮದ ವೇಷ ಧರಿಸಿ ರಾಜ್ಯ ಪ್ರಾಯೋಜಿತ ಅಪರಾಧವಾಗಿದೆ. ಪ್ರಜಾಸತ್ತಾತ್ಮಕ ವಿರೋಧವನ್ನು ಮೌನಗೊಳಿಸುವ ಗುರಿಯಾಗಿದೆ. ಕೇಂದ್ರ ಸರ್ಕಾರ ಸೇಡಿನ ರಾಜಕೀಯವನ್ನು ಅನುಸರಿಸುವಲ್ಲಿ ಎಲ್ಲಾ ಮಿತಿಗಳನ್ನು ಮೀರಿದೆ, ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿಸಿದೆಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಇನ್ನು ಪ್ರತಿಭಟನೆ ಕುರಿತು ಮಾತನಾಡಿರುವ ಅವರು, ಈ ಸ್ಪಷ್ಟ ಅಧಿಕಾರ ದುರುಪಯೋಗದ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಕಾಂಗ್ರೆಸ್ ಪಕ್ಷವು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಈ ಸಾರ್ವಜನಿಕ ಆಕ್ರೋಶವನ್ನು ಪ್ರತಿಧ್ವನಿಸುತ್ತದೆ ಎಂದು ಹೇಳಿದ್ದಾರೆ.

ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ದಬ್ಬಾಳಿಕೆಯನ್ನು ಧೈರ್ಯದಿಂದ ಎದುರಿಸಲು ಒಗ್ಗಟ್ಟಿನಿಂದ ನಿಲ್ಲಲು ಇದು ನಿರ್ಣಾಯಕ ಕ್ಷಣವಾಗಿದೆ.... ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನಾಯಕತ್ವವನ್ನು ಇಂತಹ ಕಾನೂನುಬಾಹಿರ ಕ್ರಮಗಳಿಂದ ಮೌನಗೊಳಿಸಲಾಗುವುದಿಲ್ಲ ಎಂಬುದನ್ನು ನಾವು ಪುನರುಚ್ಚರಿಸುತ್ತೇವೆ.

ನಾವು ಈ ಹಿಂದೆಯೂ ಭಾರತದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಹೋರಾಡಿದ್ದೇವೆ ಮತ್ತು ಈಗಲೂ ಮಾಡಲು ಸಿದ್ಧರಿದ್ದೇವೆ. ಸತ್ಯ, ನ್ಯಾಯ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ನಮ್ಮ ಬದ್ಧತೆ ಅಚಲವಾಗಿದೆ. ಸತ್ಯಮೇವ ಜಯತೆ ಕೇವಲ ಘೋಷಣೆಯಲ್ಲ-ಅದು ನಮ್ಮ ದೃಢನಿಶ್ಚಯ ಎಂದು ತಿಳಿಸಿದ್ದಾರೆ.

1938 ರಲ್ಲಿ ಪಂಡಿತ್ ಜವಾಹರಲಾಲ್ ನೆಹರು ಸ್ಥಾಪಿಸಿದ ನ್ಯಾಷನಲ್ ಹೆರಾಲ್ಡ್, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಪ್ರಬಲ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂದಿಗೂ ಇದು ನ್ಯಾಯ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಆದರ್ಶಗಳ ಪರವಾಗಿ ನಿಂತಿದ್ದು, ಈ ಮೌಲ್ಯಗಳ ಮೂಲಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ-ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರು ಮಾತನಾಡಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಕೆಲವರ ವಿರುದ್ಧ ಆರೋಪಪಟ್ಟಿಗಳನ್ನು ಸಲ್ಲಿಸುವುದು ಪ್ರಧಾನಿ ಮತ್ತು ಗೃಹ ಸಚಿವರ ದ್ವೇಷ ಮತ್ತು ಬೆದರಿಕೆಯ ರಾಜಕೀಯವಲ್ಲದೆ ಬೇರೇನೂ ಅಲ್ಲ. ಇಡಿ ಕ್ರಮದಿಂದ ಕಾಂಗ್ರೆಸ್ ಮತ್ತು ಅದರ ನಾಯಕತ್ವವನ್ನು ಮೌನಗೊಳಿಸಲಾಗುವುದಿಲ್ಲ. ಸತ್ಯ ಎಂದಿಗೂ ಮೇಲುಗೈ ಸಾಧಿಸುತ್ತದೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಅಸೋಸಿಯೇಟೆಡ್ ಲಿಮಿಟೆಡ್ ಜರ್ನಲ್ (ಎಜೆಎಲ್) ಒಡೆತನದಲ್ಲಿದೆ. ಎಜೆಎಲ್‌ಗೆ ಎಐಸಿಸಿ ಮೂಲಕ 90 ಕೋಟಿ ರು.ಸಾಲ ನೀಡಲಾಗಿತ್ತು. ಆದರೆ ಅದು ಸಾಲ ಮರುಪಾವತಿ ಮಾಡಿರಲಿಲ್ಲ. ಆದರೆ ಎಜೆಎಲ್ 2000 ಕೋಟಿ ರು. ಆಸ್ತಿ ಹೊಂದಿತ್ತು. ಈ ನಡುವೆ ಎಜೆಎಲ್‌ ಆಸ್ತಿಯನ್ನು ಕಡಿಮೆ ತೋರಿಸಿ, ಕೇವಲ 50 ಲಕ ರು.ಗೆ ಯಂಗ್ ಇಂಡಿಯನ್ ಎಂಬ ಕಂಪನಿಗೆ ಎಜೆಎಲ್ ಅನ್ನು ಮಾರಾಟ ಮಾಡಲಾಗಿತ್ತು.

ಇದರಲ್ಲಿ ಸೋನಿಯಾ, ರಾಹುಲ್ ಒಟ್ಟು ಶೇ.76ರಷ್ಟು ಷೇರು ಹೊಂದಿದ್ದಾರೆ. ಇದು ಎಜೆಎಲ್ ಆಸ್ತಿ ಕಬಳಿಸಲು ನಡೆಸಿದ ಅಕ್ರಮ ಎಂದು ಆರೋಪಿಸಿ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ 2014ರ ಜೂನ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ದೆಹಲಿಯ ಪಟಿಯಾಲ ಹೌಸ್‌ ನ್ಯಾಯಾಲಯವು ತನಿಖೆ ನಡೆಸುವಂತೆ ಇ.ಡಿ.ಗೆ ಆದೇಶಿಸಿತ್ತು.ಇ.ಡಿ. 2021ರಲ್ಲಿ ತನ್ನ ತನಿಖೆಯನ್ನು ಪ್ರಾರಂಭಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

SCROLL FOR NEXT