ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ 
ದೇಶ

ನಾವು ಹಿಂದೂಗಳು, ಆದರೆ 'ಹಿಂದಿ' ಅಲ್ಲ: ರಾಜ್ ಠಾಕ್ರೆ

ಹಿಂದಿ ರಾಷ್ಟ್ರ ಭಾಷೆಯಲ್ಲ. ದೇಶದ ಇತರ ಭಾಷೆಗಳಂತೆ ಇದು ಕೇವಲ ರಾಜ್ಯ ಭಾಷೆಗಳಲ್ಲಿ ಒಂದಾಗಿದೆ. ಇದನ್ನು 1ನೇ ತರಗತಿಯಿಂದಲೇ ಮಹಾರಾಷ್ಟ್ರದಲ್ಲಿ ಏಕೆ ಕಲಿಸಬೇಕು? ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.

ಮುಂಬೈ: ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆ ವಿರುದ್ಧ ಎಕ್ಸ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ರಾಜ್ಯ ಶಾಲಾ ಪಠ್ಯಕ್ರಮ ಚೌಕಟ್ಟು 2024ರ ಪ್ರಕಾರ, ಮಹಾರಾಷ್ಟ್ರದಲ್ಲಿ ಒಂದನೇ ತರಗತಿಯಿಂದಲೇ ಹಿಂದಿಯನ್ನು ಕಡ್ಡಾಯಗೊಳಿಸಲಾಗಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಈ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಠಾಕ್ರೆ ಎಚ್ಚರಿಸಿದ್ದಾರೆ.

"ದೇಶಾದ್ಯಂತ 'ಹಿಂದೀಕರಣ'ವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ನಿರಂತರ ಪ್ರಯತ್ನಗಳು ಈ ರಾಜ್ಯದಲ್ಲಿ ಯಶಸ್ವಿಯಾಗಲು ಬಿಡುವುದಿಲ್ಲ. ಹಿಂದಿ ರಾಷ್ಟ್ರೀಯ ಭಾಷೆಯಲ್ಲ. ದೇಶದ ಇತರ ಭಾಷೆಗಳಂತೆ ಇದು ಕೇವಲ ರಾಜ್ಯ ಭಾಷೆಗಳಲ್ಲಿ ಒಂದಾಗಿದೆ. ಹೀಗಾಗಿ ಇದನ್ನು 1ನೇ ತರಗತಿಯಿಂದಲೇ ಮಹಾರಾಷ್ಟ್ರದಲ್ಲಿ ಏಕೆ ಕಲಿಸಬೇಕು? ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.

ನಿಮ್ಮ ತ್ರಿಭಾಷಾ ಸೂತ್ರವನ್ನು ಸರ್ಕಾರಿ ವಹಿವಾಟುಗಳಿಗೆ ಸೀಮಿತಗೊಳಿಸಿ. ಅದನ್ನು ಶಿಕ್ಷಣಕ್ಕೆ ವಿಸ್ತರಿಸಬೇಡಿ. ಈ ದೇಶವನ್ನು ಭಾಷಾವಾರು ಆಧಾರದ ಮೇಲೆ ಮರುಸಂಘಟಿಸಲಾಯಿತು ಮತ್ತು ಹಲವು ವರ್ಷಗಳಿಂದ ಅದು ಅಸ್ತಿತ್ವದಲ್ಲಿದೆ ಎಂದಿದ್ದಾರೆ.

"ಆದರೆ ಈಗ, ಮಹಾರಾಷ್ಟ್ರದ ಮೇಲೆ ಬೇರೆ ರಾಜ್ಯದ ಭಾಷೆಯನ್ನು ಹೇರಲು ಏಕೆ ಪ್ರಯತ್ನಿಸಲಾಗುತ್ತಿದೆ? ಇದು ಭಾಷಾ ಪುನರ್ರಚನೆಯ ತತ್ವದ ಮೇಲಿನ ದಾಳಿಯಲ್ಲದೆ ಬೇರೇನೂ ಅಲ್ಲ. ಪ್ರತಿಯೊಂದು ಭಾಷೆ ತನ್ನದೇ ಆದ ರೀತಿಯಲ್ಲಿ ಸುಂದರವಾಗಿರುತ್ತದೆ ಮತ್ತು ಅದರ ವಿಕಾಸದ ಹಿಂದೆ ದೀರ್ಘ ಇತಿಹಾಸ ಮತ್ತು ಸಂಪ್ರದಾಯವಿದೆ. ಒಂದು ರಾಜ್ಯದ ಭಾಷೆಯನ್ನು ಆ ರಾಜ್ಯದಲ್ಲಿ ಗೌರವಿಸಬೇಕು. ಮಹಾರಾಷ್ಟ್ರದಲ್ಲಿ ಮರಾಠಿಯೇತರ ಭಾಷಿಕರಿಂದ ಮರಾಠಿಯನ್ನು ಗೌರವಿಸಬೇಕಾದಂತೆಯೇ, ಇತರ ರಾಜ್ಯಗಳ ಭಾಷೆಯನ್ನು ಆ ರಾಜ್ಯಗಳ ಎಲ್ಲಾ ಭಾಷಾ ಸಮುದಾಯಗಳು ಗೌರವಿಸಬೇಕು. ಆದರೆ ನೀವು ಈ ದೇಶದ ಭಾಷಾ ಸಂಪ್ರದಾಯಗಳನ್ನು ದುರ್ಬಲಗೊಳಿಸಲು ಬಯಸಿದರೆ, ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

"ನಾವು ಹಿಂದೂಗಳು, ಆದರೆ ನಾವು ಹಿಂದಿ ಅಲ್ಲ! ನೀವು ಮಹಾರಾಷ್ಟ್ರವನ್ನು ಹಿಂದೀಕರಣ ಮಾಡಲು ಪ್ರಯತ್ನಿಸಿದರೆ, ಸಂಘರ್ಷ ಅನಿವಾರ್ಯ. ಇದೆಲ್ಲವನ್ನೂ ನೋಡಿದಾಗ, ಸರ್ಕಾರ ಉದ್ದೇಶಪೂರ್ವಕವಾಗಿ ಈ ಸಂಘರ್ಷವನ್ನು ಪ್ರಚೋದಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಸಂಪೂರ್ಣ ಪ್ರಯತ್ನವು ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆಯಲು ಮರಾಠಿ ಮತ್ತು ಮರಾಠಿಯೇತರ ಸಂಘರ್ಷವನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆಯೇ? ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT