ನರೇಂದ್ರ ಮೋದಿ- ಡೊನಾಲ್ಡ್ ಟ್ರಂಪ್ online desk
ದೇಶ

ಟ್ರಂಪ್-ಪುಟಿನ್ ಮಾತುಕತೆ ವಿಫಲವಾದರೆ ಭಾರತಕ್ಕೆ ನಿರ್ಬಂಧ, ಹೆಚ್ಚಿನ ಸುಂಕ: ಅಮೆರಿಕಾದಿಂದ ಇದೆಂಥಾ ವಿಚಿತ್ರ ಎಚ್ಚರಿಕೆ?!

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯ ಫಲಿತಾಂಶವನ್ನು ಅವಲಂಬಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ನವದೆಹಲಿ: ಟ್ರಂಪ್ ಆಡಳಿತ ಭಾರತದ ಮೇಲೆ ಹೆಚ್ಚುವರಿ ದ್ವಿತೀಯ ಸುಂಕಗಳನ್ನು ವಿಧಿಸಬಹುದು ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಎಚ್ಚರಿಸಿದ್ದಾರೆ,

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯ ಫಲಿತಾಂಶವನ್ನು ಅವಲಂಬಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಬುಧವಾರ ಬ್ಲೂಮ್‌ಬರ್ಗ್ ಟಿವಿಗೆ ಮಾತನಾಡಿದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಶುಕ್ರವಾರ ಅಲಾಸ್ಕಾದಲ್ಲಿ ನಡೆಯುವ ಮಾತುಕತೆಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡದಿದ್ದರೆ ಅಮೆರಿಕ ಮತ್ತಷ್ಟು ದ್ವಿತೀಯ ನಿರ್ಬಂಧಗಳನ್ನು ವಿಧಿಸಬಹುದು ಎಂದು ಹೇಳಿದ್ದಾರೆ.

"ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ನಾವು ಭಾರತೀಯರ ಮೇಲೆ ದ್ವಿತೀಯ ಸುಂಕಗಳನ್ನು ವಿಧಿಸಿದ್ದೇವೆ. ಮತ್ತು ಎಲ್ಲವೂ ಅಂದುಕೊಂಡಂತೆ ಸರಿಯಾಗಿ ನಡೆಯದಿದ್ದರೆ, ನಿರ್ಬಂಧಗಳು ಅಥವಾ ದ್ವಿತೀಯ ಸುಂಕಗಳು ಹೆಚ್ಚಾಗಬಹುದನ್ನು ನಾನು ನೋಡಬಹುದು" ಎಂದು ಬೆಸೆಂಟ್ ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಟ್ರಂಪ್ ಇತ್ತೀಚೆಗೆ ಭಾರತೀಯ ಆಮದುಗಳ ಮೇಲೆ ಶೇ. 25 ರಷ್ಟು ದಂಡವನ್ನು ವಿಧಿಸಿದರು ಮತ್ತು ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳ ಖರೀದಿಯ ಮೇಲೆ ಶೇಕಡಾ 25 ರಷ್ಟು ಹೆಚ್ಚುವರಿ ಸುಂಕವನ್ನು ಸೇರಿಸಿದರು. ಉಕ್ರೇನ್‌ನಲ್ಲಿ ಮಾಸ್ಕೋದ ಯುದ್ಧಕ್ಕೆ ನವದೆಹಲಿ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ ಎಂದು ಅಮೆರಿಕ ಆಡಳಿತ ಆರೋಪಿಸಿದೆ.

ಒಟ್ಟು ಸುಂಕಗಳು ಈಗ ಶೇ.50 ರಷ್ಟಿದ್ದು, ಈ ನಿರ್ಧಾರಕ್ಕೆ ಭಾರತದಿಂದ ತೀವ್ರ ವಿರೋಧ ವ್ಯಕ್ತವಾಗಿದೆ, ಸರ್ಕಾರ ಸುಂಕಗಳನ್ನು "ಅನ್ಯಾಯಯುತ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ" ಎಂದು ಕರೆದಿದೆ ಮತ್ತು ಅದರ ತೈಲ ಆಮದುಗಳನ್ನು ರಾಷ್ಟ್ರೀಯ ಇಂಧನ ಭದ್ರತೆಯ ವಿಷಯವಾಗಿ ಸಮರ್ಥಿಸಿಕೊಂಡಿದೆ.

ಫಾಕ್ಸ್ ನ್ಯೂಸ್‌ಗೆ ಬೆಸೆಂಟ್ ಪ್ರತ್ಯೇಕ ಹೇಳಿಕೆ ನೀಡಿದ್ದು, ಭಾರತ ವ್ಯಾಪಾರ ಮಾತುಕತೆಗಳಲ್ಲಿ "ಸ್ವಲ್ಪ ಅವಿಧೇಯ" ಎಂದು ಬಣ್ಣಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ನವದೆಹಲಿ ಮತ್ತು ವಾಷಿಂಗ್ಟನ್ ನಡುವಿನ ಮಾತುಕತೆಗಳ ನಡುವೆ ಅಡಚಣೆ ಉಂಟಾಗಿತ್ತು. ರಷ್ಯಾದ ವ್ಯಾಪಾರ ಮತ್ತು ಇತರ ಕಳವಳಗಳ ಕುರಿತು ಚರ್ಚೆಗಳನ್ನು ಸ್ಥಗಿತಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದರು.

ಭಾರತೀಯ ಸರಕುಗಳ ಮೇಲಿನ ಶೇ.50ರಷ್ಟು ಸುಂಕ ಜಾರಿಗೆ ಬರಲು ಕೇವಲ ಎರಡು ದಿನಗಳ ಮೊದಲು, ಆಗಸ್ಟ್ 25 ರಂದು ಭಾರತಕ್ಕೆ ಬರುವ ನಿರೀಕ್ಷೆಯಿರುವ ಅಮೆರಿಕದ ಸಮಾಲೋಚಕರೊಂದಿಗೆ ವ್ಯಾಪಾರ ಮಾತುಕತೆಗಳು ಪುನರಾರಂಭಗೊಳ್ಳಬಹುದು. ಆದಾಗ್ಯೂ, ತನ್ನ ಕೃಷಿ ಮತ್ತು ಡೈರಿ ಮಾರುಕಟ್ಟೆಗಳನ್ನು ರಕ್ಷಿಸುವ ಬಗ್ಗೆ ಭಾರತದ ನಿಲುವು ಮಾತುಕತೆಗಳಲ್ಲಿ ಪ್ರಮುಖ ವಿವಾದವಾಗಿ ಉಳಿಯುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದಾರೆ.

ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಮಾರ್ಗಗಳನ್ನು ಚರ್ಚಿಸಲು ಟ್ರಂಪ್ ಮತ್ತು ಅವರ ರಷ್ಯಾದ ಅಧ್ಯಕ್ಷರು ಶುಕ್ರವಾರ ಅಲಾಸ್ಕಾದ ಆಂಕಾರೇಜ್‌ನಲ್ಲಿ ಭೇಟಿಯಾಗಲಿದ್ದಾರೆ. ಯುದ್ಧದಲ್ಲಿರುವ ರಾಷ್ಟ್ರಗಳ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿರುವ ಅಮೆರಿಕ ಅಧ್ಯಕ್ಷರು, ಮಾಸ್ಕೋ ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ "ತೀವ್ರ ಪರಿಣಾಮಗಳ" ಬಗ್ಗೆ ಎಚ್ಚರಿಸಿದ್ದಾರೆ.

ಮೂರು ವರ್ಷಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಶಾಂತಿ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸುವುದು ಮಾತುಕತೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಮಾತುಕತೆಗಳಲ್ಲಿ ಕೈವ್ ಭಾಗವಹಿಸದೆ ಯಾವುದೇ ಶಾಂತಿ ಒಪ್ಪಂದವಿರುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ದೃಢಪಡಿಸಿದ್ದಾರೆ ಮತ್ತು ದೇಶ ಯಾವುದೇ ಪ್ರದೇಶವನ್ನು ರಷ್ಯಾಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ. ಉಕ್ರೇನ್ ಭಾಗವಹಿಸದ ಏಕಪಕ್ಷೀಯ ಸಭೆಯು ರಷ್ಯಾದ ಗುರಿಗಳಿಗೆ ಅನುಕೂಲಕರವಾದ ಫಲಿತಾಂಶಕ್ಕೆ ಕಾರಣವಾಗಬಹುದು ಎಂದು ಯುರೋಪಿನ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT