ನವದೆಹಲಿ: ಎರಡು ದಶಕಗಳ ಹಿಂದೆ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(MGNREGA) ಯೋಜನೆಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ನಾಶ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಕಿಡಿಕಾರಿದ್ದಾರೆ.
ಹೊಸದಾಗಿ ಅಂಗೀಕರಿಸಲಾದ ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ "ಗ್ರಾಮ ವಿರೋಧಿ" ಮತ್ತು "ರಾಜ್ಯಗಳ ವಿರೋಧಿ" ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಜಿ ರಾಮ್ ಜಿ ಮಸೂದೆ MGNREGAನ ಪರಿಷ್ಕರಣೆಯಲ್ಲ. ಬದಲಾಗಿ ಅದರ ಮೂಲ ತತ್ವಗಳನ್ನು ದುರ್ಬಲಗೊಳಿಸಲಾಗಿದೆ. "ನಿನ್ನೆ ರಾತ್ರಿ, ಮೋದಿ ಸರ್ಕಾರ ಇಪ್ಪತ್ತು ವರ್ಷಗಳ MGNREGA ಯನ್ನು ಒಂದೇ ದಿನದಲ್ಲಿ ನಾಶ ಮಾಡಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಇದು ಹಕ್ಕು ಆಧಾರಿತ, ಬೇಡಿಕೆ ಆಧಾರಿತ ಗ್ಯಾರಂಟಿಯನ್ನು ನಾಶ ಮಾಡುತ್ತದೆ ಮತ್ತು ಅದನ್ನು ದೆಹಲಿಯಿಂದ ನಿಯಂತ್ರಿಸಲ್ಪಡುವ ಪಡಿತರ ಯೋಜನೆಯಾಗಿ ಪರಿವರ್ತಿಸುತ್ತಿದೆ. ಇದು ರಾಜ್ಯಗಳ ವಿರೋಧಿ ಮತ್ತು ಗ್ರಾಮ ವಿರೋಧಿಯಾಗಿದೆ" ಎಂದು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಂಜಿಎನ್ಆರ್ಇಜಿಎ ಗ್ರಾಮೀಣ ಕಾರ್ಮಿಕರಿಗೆ ಚೌಕಾಶಿ ಮಾಡುವ ಶಕ್ತಿಯನ್ನು ನೀಡಿತ್ತು ಎಂದು ಹೇಳಿದ್ದಾರೆ.
"ನಿಜವಾದ ಆಯ್ಕೆಗಳೊಂದಿಗೆ, ಶೋಷಣೆ ಮತ್ತು ವಲಸೆ ಸಂಕಷ್ಟ ಕಡಿಮೆ ಮಾಡಿತ್ತು, ವೇತನ ಹೆಚ್ಚಾಯಿತು, ಕೆಲಸದ ಪರಿಸ್ಥಿತಿಗಳು ಸುಧಾರಿಸಿದ್ದು. ಇವೆಲ್ಲವೂ ಗ್ರಾಮೀಣ ಮೂಲಸೌಕರ್ಯವನ್ನು ನಿರ್ಮಿಸುವ ಮತ್ತು ಪುನರುಜ್ಜೀವನಗೊಳಿಸಿದ್ದವು. ಆದರೆ ಆ ಹತೋಟಿಯನ್ನು ನಿಖರವಾಗಿ ಈ ಸರ್ಕಾರ ಹಾಳು ಮಾಡಲು ಬಯಸುತ್ತದೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೆಲಸಕ್ಕೆ ಮಿತಿ ಹೇರುವ ಮೂಲಕ ಮತ್ತು ಅದನ್ನು ನಿರಾಕರಿಸಲು ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸುವ ಮೂಲಕ, ವಿಬಿ-ಜಿ ರಾಮ್ ಜಿ ಮಸೂದೆಯು ಗ್ರಾಮೀಣ ಬಡವರು ಹೊಂದಿದ್ದ ಒಂದು ಸಾಧನವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
"ಕೋವಿಡ್ ಸಮಯದಲ್ಲಿ ಎಂಜಿಎನ್ಆರ್ಇಜಿಎ ಎಂದರೆ ಏನೆಂದು ನಾವು ನೋಡಿದ್ದೇವೆ. ಆರ್ಥಿಕತೆ ಸ್ಥಗಿತಗೊಂಡು ಜೀವನೋಪಾಯ ಕುಸಿದಾಗ, ಅದು ಕೋಟ್ಯಂತರ ಜನರು ಹಸಿವು ಮತ್ತು ಸಾಲ ಮಾಡದಂತೆ ತಡೆಯಿತು" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.