ಚಂಡೀಗಢ: ಆಮ್ ಆದ್ಮಿ ಪಕ್ಷದ(ಎಎಪಿ) 32 ಶಾಸಕರು ನಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಪಕ್ಷ ಬದಲಾಯಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ಸೋಮವಾರ ಹೇಳಿದ್ದಾರೆ.
"ಮುಂಬರುವ ತಿಂಗಳುಗಳಲ್ಲಿ, ಪಂಜಾಬ್ನಲ್ಲಿ ಮಹಾರಾಷ್ಟ್ರದ ಏಕನಾಥ್ ಶಿಂಧೆ ಅವರಂತೆ ಎಎಪಿ ಶಾಸಕರು ಪಕ್ಷ ಬದಲಾಯಿಸಲಿದ್ದಾರೆ. ಈ ಶಾಸಕರು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರು ಟಿಕೆಟ್ ಖರೀದಿಸಿದಂತೆ ಕಾಂಗ್ರೆಸ್ನೊಂದಿಗೆ ಮುಂಗಡ ಬುಕಿಂಗ್ ಮಾಡುತ್ತಿದ್ದಾರೆ" ಎಂದು ಬಾಜ್ವಾ ತಿಳಿಸಿದ್ದಾರೆ.
ಎರಡು ದಿನಗಳ ವಿಶೇಷ ವಿಧಾನಸಭಾ ಅಧಿವೇಶನಕ್ಕೂ ಮುನ್ನ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಬಾಜ್ವಾ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು, ಸಿಎಂ ಮಾನ್ ಹಾಗೂ ಕೇಂದ್ರ ನಡುವೆ "ಸೇತುವೆ"ಯಾಗಿದ್ದಾರೆ ಎಂದು ಆರೋಪಿಸಿದರು.
ಬಿಟ್ಟು ಕೇಂದ್ರ ನಾಯಕರೊಂದಿಗೆ ಸಿಎಂ ಸಭೆಗಳನ್ನು ಸುಗಮಗೊಳಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿಯ ಅಧಿಕೃತ ನಿವಾಸದ ಹೊರಗೆ ಅವರ ಪ್ರತಿಭಟನೆ ಕೇವಲ ನಾಟಕ ಎಂದು ಟೀಕಿಸಿದರು.
"ಬಿಜೆಪಿ ನಾಯಕತ್ವವು, ಕೇಂದ್ರ ಸಚಿವ ಬಿಟ್ಟು ಮೂಲಕ ಸಿಎಂ ಮಾನ್ ಅವರೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರು ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ ಎಂಬುದು ನನ್ನ ನೇರ ಆರೋಪ" ಎಂದರು.