ಮಾಜಿ -CJI ಚಂದ್ರಚೂಡ್ 
ದೇಶ

ಕೂಡಲೇ ಅಧಿಕೃತ ನಿವಾಸ ಖಾಲಿ ಮಾಡಿ: ಮಾಜಿ CJI ಚಂದ್ರಚೂಡ್‌ಗೆ ಸುಪ್ರೀಂ ಕೋರ್ಟ್ ಸೂಚನೆ

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಸೇರಿದಂತೆ 33 ನ್ಯಾಯಾಧೀಶರಿದ್ದಾರೆ. ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರಿಗೆ ಇನ್ನೂ ಸರಕಾರಿ ವಸತಿ ಹಂಚಿಕೆಯಾಗಿಲ್ಲ.

ನವದೆಹಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಮ್ಮ ನಿವೃತ್ತಿಯ ಬಳಿಕವೂ ಮುಖ್ಯ ನ್ಯಾಯಾಧೀಶರ ಅಧಿಕೃತ ನಿವಾಸದಲ್ಲೇ ವಾಸಿಸುತ್ತಿದ್ದಾರೆ ಎಂಬುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್‌, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಬಂಗಲೆಯನ್ನು ಖಾಲಿ ಮಾಡಿಸಿ ನ್ಯಾಯಾಲಯದ ವಸತಿ ನಿಲಯಕ್ಕೆ ಹಿಂತಿರುಗಿಸುವಂತೆ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಸೇರಿದಂತೆ 33 ನ್ಯಾಯಾಧೀಶರಿದ್ದಾರೆ. ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರಿಗೆ ಇನ್ನೂ ಸರಕಾರಿ ವಸತಿ ಹಂಚಿಕೆಯಾಗಿಲ್ಲ. ಅವರಲ್ಲಿ ಮೂವರು ಸುಪ್ರೀಂ ಕೋರ್ಟ್‌ನ ಟ್ರಾನ್ಸಿಟ್ ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುತ್ತಿದ್ದರೆ. ಓರ್ವರು ರಾಜ್ಯ ಅತಿಥಿ ಗೃಹದಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ನಿವಾಸವಾದ ಕೃಷ್ಣ ಮೆನನ್ ಮಾರ್ಗ ಬಂಗಲೆಯ ತುರ್ತು ಅವಶ್ಯಕತೆಯಿದೆ.

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಚಂದ್ರಚೂಡ್ ಅವರು ನವೆಂಬರ್ 10, 2024 ರಂದು ನಿವೃತ್ತರಾದರು. ಅವರ ಅಧಿಕಾರಾವಧಿಯಲ್ಲಿ, ಮುಖ್ಯ ನ್ಯಾಯಮೂರ್ತಿಗಳು 5 ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆಯನ್ನು ತಮ್ಮ ನಿವಾಸವಾಗಿ ಪಡೆದುಕೊಂಡರು. ಇದೀಗ ನ್ಯಾಯಾಧೀಶರಿಗೆ ವಸತಿ ಹಂಚಿಕೆ ಮಾಡಲು ಚಂದ್ರಚೂಡ್ ಅವರು ನಿವಾಸವನ್ನು ಖಾಲಿ ಮಾಡಬೇಕಾದ ಅಗತ್ಯವಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಇದರಂತೆ ಸುಪ್ರೀಂ ಕೋರ್ಟ್ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಬಂಗಲೆಯನ್ನು ತಕ್ಷಣವೇ ಖಾಲಿ ಮಾಡಿಸುವಂತೆ ಒತ್ತಾಯಿಸಿದೆ.

ನಿವೃತ್ತ ನ್ಯಾಯಮೂರ್ತಿ ಡಾ. ಡಿ.ವೈ ಚಂದ್ರಚೂಡ್ ಅವರಿಂದ ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆಯ ಸಂಖ್ಯೆ 5ಅನ್ನು ಯಾವುದೇ ವಿಳಂಬವಿಲ್ಲದೆ ಖಾಲಿ ಮಾಡಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ಏಕೆಂದರೆ, ಚಂದ್ರಚೂಡ್ ಅವರು ಸರ್ಕಾರ ಬಂಗಲೆಯಲ್ಲಿ ವಾಸಿಸಲು ಅನುಮತಿಸಲಾಗುವ ಸಮಯವು 2025ರ ಮೇ 31ಕ್ಕೆ ಮುಗಿದಿದೆ. ಜೊತೆಗೆ, 2022ರ ನಿಯಮಗಳಲ್ಲಿ ಒಂದಾದ ನಿಯಮ 3B ಅಡಿಯಲ್ಲಿ ಒದಗಿಸಲಾಗಿರುವ ಆರು ತಿಂಗಳ ಅವಧಿ ಕೂಡ 2025 ಮೇ 10ಕ್ಕೆ ಮುಕ್ತಾಯಗೊಂಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಏತನ್ಮಧ್ಯೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಚಂದ್ರಚೂಡ್ ಅವರು, ವೈಯಕ್ತಿಕ ಕಾರಣಗಳು ವಿಳಂಬಕ್ಕೆ ಕಾರಣವಾಗಿವೆ ಮತ್ತು ಸುಪ್ರೀಂ ಕೋರ್ಟ್ ಆಡಳಿತಕ್ಕೆ ಈ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ನಾನು ಸರ್ಕಾರಿ ವಸತಿ ಸೌಕರ್ಯದಲ್ಲಿ ಹೆಚ್ಚು ಕಾಲ ಉಳಿಯಲು ಬಯಸುವುದಿಲ್ಲ. ಆದರೆ, ನನ್ನ ಹೆಣ್ಣುಮಕ್ಕಳಿಗೆ ವಿಶೇಷ ಸೌಕರ್ಯಗಳಿರುವ ಮನೆ ಬೇಕು. ಅಂತಹ ಮನೆಗಾಗಿ ನಾನು ಫೆಬ್ರವರಿಯಿಂದ ಹುಡುಕಾಟ ನಡೆಸುತ್ತಿದ್ದೇನೆ. ಸೇವಾ ಅಪಾರ್ಟ್‌ಮೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ಸಹ ನೋಡಿದ್ದೇನೆ. ಆದರೆ, ಅವುಗಳಲ್ಲಿ ಯಾವುದೂ ನಮಗೆ ಅಗತ್ಯವಿರುವ ರೀತಿಯಲ್ಲಿಲ್ಲ.

ಏಪ್ರಿಲ್ 28 ರಂದು, ನಾನು ಅಂದಿನ ಸಿಜೆಐ ಖನ್ನಾ ಅವರಿಗೆ ಪತ್ರ ಬರೆದಿದ್ದೆ. ಸೂಕ್ತ ವಸತಿ ಸೌಕರ್ಯವನ್ನು ಹುಡುಕುತ್ತಿದ್ದೇನೆ. ಜೂನ್ 30 ರವರೆಗೆ ಬಂಗಲೆಯಲ್ಲಿ ಉಳಿಯಲು ಅವಕಾಶ ನೀಡುವಂತೆ ಕೇಳಿದ್ದೆ. ಆದರೆ, ಅವರಿಂದ ಯಾವುದೇ ಉತ್ತರ ಬಂದಿಲ್ಲ. ಇತ್ತೀಚೆಗೆ, ಹಾಲಿ ಸಿಜೆಐ ಬಿ.ಆರ್ ಗವಾಯಿ ಅವರೊಂದಿಗೆ ಮಾತನಾಡಿದ್ದೇನೆ. ಸಾಧ್ಯವಾದಷ್ಟು ಬೇಗ ನಿವಾಸ ಖಾಲಿ ಮಾಡುವುದಾಗಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಸರ್ಕಾರವು ನಮಗೆ ತಾತ್ಕಾಲಿಕವಾಗಿ ನಿವಾಸವೊಂದನ್ನು ಬಾಡಿಗೆಗೆ ನೀಡಿದೆ. ಆದರೆ, ಆ ಬಂಗಲೆಯನ್ನು ಎರಡು ವರ್ಷಗಳಿಂದ ಬಳಸಲಾಗಿಲ್ಲ. ಅದರ ದುರಸ್ತಿ ಮತ್ತು ನವೀಕರಣ ನಡೆಯುತ್ತಿದೆ. ಅದೆಲ್ಲವೂ ಮುಗಿದ ಕೂಡಲೇ ನಾವು ಸ್ಥಳಾಂತರಗೊಳ್ಳುತ್ತೇವೆ. ಈಗಾಗಲೇ ನಮ್ಮ ಹೆಚ್ಚಿನ ವಸ್ತುಗಳು ಪ್ಯಾಕ್ ಆಗಿವೆ. ಸರ್ಕಾರಿ ಬಂಗಲೆಯಲ್ಲಿ ಹೆಚ್ಚು ದಿನ ಉಳಿಯಬೇಕೆಂಬ ಆಸೆಯೇನೂ ನಮಗಿಲ್ಲ. ಆದರೆ, ಅನಿವಾರ್ಯವಾಗಿದೆ. ನಮಗೆ ಬೇರೆ ಆಯ್ಕೆಗಳಿಲ್ಲ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT