ರಾಹುಲ್ ಗಾಂಧಿ vs ಹಿಮಂತ ಶರ್ಮಾ ಬಿಸ್ವಾ 
ದೇಶ

'ಸಾಕ್ಷ್ಯ ಸಿಕ್ಕರೆ Rahul Gandhi ಯನ್ನೇ ಜೈಲಿಗಟ್ಟುತ್ತೇನೆ..', 'ತಾಯಿ ಎದೆ ಹಾಲು ಕುಡಿದು ಬೆಳೆದ ಮಗ ನಾನು': Himanta Sarma; Video

ಭ್ರಷ್ಟಾಚಾರ ಮಾಡಿದ್ದಕ್ಕೆ ತಮ್ಮನ್ನು ಜೈಲಿಗೆ ಹಾಕಬೇಕು ಎಂದು ಹೇಳಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ‌ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ತಿರುಗೇಟು ನೀಡಿದ್ದಾರೆ.

ಗುವಾಹತಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಂತ ಶರ್ಮಾ ಬಿಸ್ವಾ ಅವರನ್ನು ಜೈಲಿಗೆ ಹಾಕಬೇಕು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಅಸ್ಸಾಂ ಸಿಎಂ ಹಿಮಂತ ಶರ್ಮಾ ಬಿಸ್ವಾ (Himanta Sarma) ಸಾಕ್ಷ್ಯಧಾರ ಸಿಕ್ಕರೆ ಅವರನ್ನೇ ಜೈಲಿಗಟ್ಟುತ್ತೇನೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಮಾಡಿದ್ದಕ್ಕೆ ತಮ್ಮನ್ನು ಜೈಲಿಗೆ ಹಾಕಬೇಕು ಎಂದು ಹೇಳಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ‌ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ತಿರುಗೇಟು ನೀಡಿದ್ದು, ನನಗಿಂತ ಮೊದಲು ಅವರು ಜೈಲಿಗೆ ಹೋಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದ್ದಾರೆ. ಇಂಥ ಹೇಳಿಕೆಗಳು ರಾಷ್ಟ್ರೀಯ ನಾಯಕರಿಗೆ ಸೂಕ್ತವಲ್ಲ ಎಂದು ಶರ್ಮಾ ಕುಟುಕಿದ್ದಾರೆ.

ಅಂತೆಯೇ ರಾಜ್ಯವೊಂದಕ್ಕೆ ಬಂದು ಯಾರನ್ನು ಜೈಲಿಗೆ ಹಾಕಬೇಕು ಎಂದು ಹೇಳುವುದು ರಾಷ್ಟ್ರೀಯ ನಾಯಕನಿಗೆ ಶೋಭೆಯಲ್ಲ. ನಾನು ಎಷ್ಟು ಮುಖ್ಯ ಎಂಬುದನ್ನು ಇದು ಸಾರುತ್ತದೆ. ತಮ್ಮ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗೆ ಇದ್ದಾರೆ ಎನ್ನುವುದನ್ನು ರಾಹುಲ್ ಗಾಂಧಿ ಮನಃಪೂರ್ವಕವಾಗಿ ಮರೆತಂತಿದೆ ಎಂದು ಹಿಮಂತ ಶರ್ಮಾ ಹೇಳಿದರು.

ಸಾಕ್ಷ್ಯ ಸಿಕ್ಕರೆ ರಾಹುಲ್ ಗಾಂಧಿಯನ್ನೇ ಜೈಲಿಗಟ್ಟುತ್ತೇನೆ

ಇದೇ ವೇಳೆ 'ಗೋಲ್‌ಪಾರ ಜಿಲ್ಲೆಯ ಪೈಕಾನ್ ಮೀಸಲು ಅರಣ್ಯದಲ್ಲಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಗೆ, ರಾಹುಲ್ ಗಾಂಧಿಯವರ ಭಾಷಣ ಕಾರಣ" ಎಂದು ಆರೋಪಿಸಿರುವ ಅಸ್ಸಾಂ ಮುಖ್ಯಮಂತ್ರಿ, "ರಾಹುಲ್‌ ಗಾಂಧಿ ಅವರ ದ್ವೇಷಭಾಷಣ ಅತಿಕ್ರಮಣಕಾರರನ್ನು ಕೆರಳಿಸಿದೆ. ಇದೇ ಕಾರಣಕ್ಕೆ ಅರಣ್ಯ ಭೂಮಿಯನ್ನು ತೆರವುಗೊಳಿಸುವ ಪ್ರಯತ್ನಗಳನ್ನು ಹಿಂಸಾತ್ಮಕವಾಗಿ ತಡೆಯುವ ಪ್ರಯತ್ನ ನಡೆದಿದೆ" ಎಂದು ಕಿಡಿಕಾರಿದರು.

"ರಾಹುಲ್ ಗಾಂಧಿ ಇಲ್ಲಿಗೆ ಬಂದು ಅತಿಕ್ರಮಣಕಾರರು ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಇದರಿಂದ ಅತಿಕ್ರಮಣಕಾರರು ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸ್‌ ಮತ್ತು ಅರಣ್ಯ ಸಿಬ್ಬಂದಿ ಮೇಲೆ ದೊಣ್ಣೆಗಳಿಂದ ದಾಳಿ ಮಾಡಿದರು. ಪೊಲೀಸರು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದರಿಂಧ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅರಣ್ಯ ಅತಿಕ್ರಮಣಕಾರರಿಗೆ ಅದೇ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಮತ್ತು ಮನೆಗಳನ್ನು ನೀಡಲಾಗುವುದು ಎಂಬ ರಾಹುಲ್‌ ಗಾಂಧಿ ಹೇಳಿಕೆ ಕಾನೂನುಬಾಹಿರ" ಎಂದು ಅಸ್ಸಾಂ ಸಿಎಂ ಹರಿಹಾಯ್ದರು.

ಅಲ್ಲದೆ "ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ಭೇಟಿ ನೀಡಿದ ಸಂದರ್ಭದಲ್ಲಿ ಮಾಡಿದ ಭಾಷಣಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದು, ಅವರ ಭಾಷಣ ಮತ್ತು ಹಿಂಸಾಚಾರದ ನಡುವೆ ಸಂಬಂಧವಿದೆಯೇ ಎಂದು ನಿರ್ಧರಿಸಲಾಗುವುದು. ಪುರಾವೆಗಳು ಕಂಡುಬಂದರೆ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ದೇಶದಲ್ಲಿ ಅನೇಕ ಜೈಲುಗಳು ಗಾಂಧಿ ಕುಟುಂಬಕ್ಕಾಗಿ ಕಾಯುತ್ತಿವೆ. ಇಂದು, ಜಾರಿ ನಿರ್ದೇಶನಾಲಯವು ರಾಬರ್ಟ್ ವಾದ್ರಾಗೆ ಸಂಬಂಧಿಸಿದ ಹಲವಾರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಇದೇ ವೇಳೆ ಸ್ಪಷ್ಟಪಡಿಸಿದರು.

'ಬಾಟಲ್ ಹಾಲಲ್ಲ..ತಾಯಿ ಎದೆ ಹಾಲು ಕುಡಿದ ಬೆಳೆದ ಮಗ ನಾನು'

ರಾಹುಲ್ ಗಾಂಧಿಗೆ ಒಂದು ವಿಷಯ ಸ್ಪಷ್ಟವಾಗಿ ಹೇಳುತ್ತೇನೆ. ನಾನು ಅಸ್ಸಾಂನಲ್ಲಿ ಹುಟ್ಟಿರುವ ಅಸ್ಸಾಮಿ ಪ್ರಜೆ. ನಾನು ಫೀಡಿಂಗ್ ಬಾಟಲ್‌ನಿಂದ ಹಾಲು ಕುಡಿದು ಬೆಳೆದಿಲ್ಲ, ನನಗೆ ನನ್ನ ತಾಯಿಯ ಎದೆ ಹಾಲು ಕುಡಿಸಲಾಗಿದೆ. ಹಾಗಾಗಿ ನಾನು ರಾಹುಲ್ ಗಾಂಧಿಗೆ 'ಬುರ್ಹಾ ಅಂಗುಲಿ' (ಹೆಬ್ಬೆರಳು) ತೋರಿಸುತ್ತಿದ್ದೇನೆ. ರಾಹುಲ್‌ ಗಾಂಧಿ ಹೇಳಿಕೆಗೆ ಖುದ್ದು ಇಲ್ಲಿನ ಕಾಂಗ್ರೆಸ್ ಸದಸ್ಯರೇ ಅಸಮಾಧಾನಗೊಂಡಿದ್ದಾರೆ. ಅವರು ನನಗೆ ಕರೆ ಮಾಡಿ, 'ದಾದಾ (ಅಣ್ಣ), ಅವರು ಇಲ್ಲಿಗೆ ಇದನ್ನೆಲ್ಲ ಹೇಳಲು ಬಂದಿದ್ದಾರೆಯೇ?' ಎಂದು ನನ್ನನ್ನು ಪ್ರಶ್ನಿಸಿದರು. ಹೀಗಾಗಿ ನಾನು ಅವರಿಗೆ 'ಬುರ್ಹಾ ಅಂಗುಲಿ' ತೋರಿಸುತ್ತಿದ್ದೇನೆ" ಎಂದು ಹಿಮಂತ ಬಿಸ್ವಾ ಶರ್ಮಾ ವ್ಯಂಗ್ಯವಾಡಿದರು.

ಏನು ಹೇಳಿದ್ದರು ರಾಹುಲ್ ಗಾಂಧಿ?

ಅಸ್ಸಾಂ ಪಂಚಾಯಿತಿ ಚುನಾವಣೆ ವೇಳೆಯೂ ಹಿಮಂತ ಬಿಸ್ವಾ ಶರ್ಮಾ ಮತ್ತು ರಾಹುಲ್‌ ಗಾಂಧಿ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ಬುಧವಾರ ಗುವಾಹಟಿ ಸಮೀಪದ ಚಂಗ್ಯೋನ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನಯ ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಭ್ರಷ್ಟಾಚಾರಕ್ಕೆ ಹಿಮಂತ ಹಾಗೂ ಅವರ ಕುಟುಂಬಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು.

ಜನರೇ ಶರ್ಮಾ ಅವರನ್ನು ಜೈಲಿಗೆ ಹಾಕಬೇಕು ಎಂದಿದ್ದರು. ಚಾಂಗ್ಯೋನ್‌ನಲ್ಲಿ ಪಕ್ಷದ ರಾಜ್ಯ ನಾಯಕರೊಂದಿಗೆ ನಡೆಸಿದ ಗೋಪ್ಯ ಸಭೆಯಲ್ಲಿ ರಾಹುಲ್ ಗಾಂಧಿ ಹೀಗೆ ಹೇಳಿದ್ದಾರೆ ಎಂದು, ಹಿಮಾಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಹಿಮಾಂತ ಹೇಳಿಕೆ ಬಳಿಕ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಈ ಮಾತುಗಳನ್ನು ಆಡಿದ್ದರು.

ಬರೆದಿಟ್ಟುಕೊಳ್ಳಿ, ಹಿಮಾಂತ ಬಿಸ್ವ ಶರ್ಮಾ ಅವರನ್ನು ಖಂಡಿತವಾಗಿಯೂ ಜೈಲಿಗೆ ಕಳುಹಿಸಲಾಗುವುದು’ ಗೋಪ್ಯ ಸಭೆಯಲ್ಲಿ ರಾಹುಲ್ ಗಾಂಧಿ ಆಡಿತ ಮಾತುಗಳಿವು ಎಂದು ಅವರು ಬರೆದುಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಸ್ರೇಲ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಜೆರುಸಲೆಮ್ ಬಸ್ ಮೇಲೆ ಗುಂಡಿನ ದಾಳಿ: 5 ಸಾವು, 12 ಜನರಿಗೆ ಗಾಯ

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 19 ಮಂದಿ ಸಾವು; ಸೇನೆ ನಿಯೋಜನೆ; Video!

ಕೋಮು ಘರ್ಷಣೆ: ಸೆಪ್ಟೆಂಬರ್ 9 ರಂದು ಮದ್ದೂರು ಬಂದ್‌ಗೆ ಬಿಜೆಪಿ ಕರೆ

ನಾಳೆ ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ BRS-BJD ದೂರ; ಇದು INDIA ಅಭ್ಯರ್ಥಿ ವಿರುದ್ಧ NDA ಅಭ್ಯರ್ಥಿ ಗೆಲುವಿಗೆ ವರವಾಗುತ್ತಾ?

ರಷ್ಯಾದಿಂದ ತೈಲ ಖರೀದಿ "ರಕ್ತದ ಹಣ": ಭಾರತದ ಮೇಲೆ ಮತ್ತೆ ಕಿಡಿ ಕಾರಿದ ವ್ಯಾಪಾರ ಸಲಹೆಗಾರ ಪೀಟರ್ ನವರೊ!

SCROLL FOR NEXT