ಮುಂಬೈ: ಷೇರು ಮಾರುಕಟ್ಟೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಹಾಗೂ ಇತರೆ ಐವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್ ನಾಲ್ಕು ವಾರಗಳ ತಡೆ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಕುಮಾರ್ ಡಿಗೆ, ವಿಶೇಷ ನ್ಯಾಯಾಲಯವು ಪ್ರಕರಣದ ವಿವರಗಳನ್ನು ನೋಡದೆ, ಆರೋಪಿಗಳ ಮೇಲೆ ಯಾವುದೇ ನಿರ್ದಿಷ್ಟ ಆರೋಪ ಹೊರಿಸದೆ ಯಾಂತ್ರಿಕವಾಗಿ ಆದೇಶಿಸಿದೆ ಎಂದಿದ್ದಾರೆ.
ಆದ್ದರಿಂದ, ಆದೇಶವನ್ನು ಮುಂದಿನ ದಿನಾಂಕದವರೆಗೆ ತಡೆಹಿಡಿಯಲಾಗಿದೆ. ಪ್ರಕರಣದ ದೂರುದಾರರಾದ ಸಪನ್ ಶ್ರೀವಾಸ್ತವ ಅವರಿಗೆ ಅರ್ಜಿಗಳಿಗೆ ಉತ್ತರವಾಗಿ ಅಫಿಡವಿಟ್ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.
ತಮ್ಮ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಇಲ್ಲಿನ ವಿಶೇಷ ನ್ಯಾಯಾಲಯವು ಮಾರ್ಚ್ 1ರಂದು ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸೆಬಿ ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್, ಬಿಎಸ್ಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುಂದರರಾಮನ್ ರಾಮಮೂರ್ತಿ ಹಾಗೂ ಇತರರು ಸೋಮವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಮಾಧವಿ ಪುರಿ ಬುಚ್ ಹಾಗೂ ಇತರ ಐವರು ಅಧಿಕಾರಿಗಳು ಸೆಬಿಯ ನಿಯಮಾವಳಿ ಉಲ್ಲಂಘಿಸಿ ಆರ್ಥಿಕ ವಂಚನೆ ಎಸಗಿದ್ದಾರೆ ಎಂದು ಪತ್ರಕರ್ತ ಸಪನ್ ಶ್ರೀವಾಸ್ತವ ಅವರು, ಮುಂಬೈನ ಎಸಿಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಶಶಿಕಾಂತ್ ಏಕನಾಥರಾವ್ ಬಂಗಾರ್ ಎಫ್ಐಆರ್ ದಾಖಲಿಸುವಂತೆ ಎಸಿಬಿಗೆ ನಿರ್ದೇಶನ ನೀಡಿದ್ದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬುಚ್ ಮತ್ತು ಸೆಬಿ ಅಧಿಕಾರಿಗಳನ್ನು ಪ್ರತಿನಿಧಿಸಿದರೆ, ಅಮಿತ್ ದೇಸಾಯಿ ಬಿಎಸ್ಇಯ ಮಾಜಿ ಅಧ್ಯಕ್ಷ ಪ್ರಮೋದ್ ಅಗರ್ವಾಲ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರರಾಮನ್ ರಾಮಮೂರ್ತಿ ಪರವಾಗಿ ಹಾಜರಾದರು. ಪ್ರತಿವಾದಿಯಾದ ಸಪನ್ ಶ್ರೀವಾಸ್ತವ ಅವರೇ ತಮ್ಮ ಪ್ರಕರಣವನ್ನು ವೈಯಕ್ತಿಕವಾಗಿ ವಾದಿಸಿದರು.
ಠಾಣೆ ಮೂಲದ ಪತ್ರಕರ್ತ ಸಪನ್ ಶ್ರೀವಾತ್ಸವ ಅವರು ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿಮಾಧವಿ ಬುಚ್ ಮತ್ತು ಇತರ ಅಧಿಕಾರಿಗಳ ವಿರುದ್ಧ ದೊಡ್ಡ ಪ್ರಮಾಣದ ಆರ್ಥಿಕ ವಂಚನೆ, ನಿಯಂತ್ರಕ ಕ್ರಮಗಳ ಉಲ್ಲಂಘನೆ ಮತ್ತು ಭ್ರಷ್ಟಾಚಾರ ಎಸಗಿದ ಆರೋಪ ಹೊರಿಸಿದ್ದಾರೆ. 1992ರ ಸೆಬಿ ಕಾಯಿದೆಯ ನಿಯಮಗಳನ್ನು ಪೂರೈಸದ ಕಂಪನಿಯೊಂದಕ್ಕೆ ಷೇರು ವಿನಿಮಯ ಕೇಂದ್ರದಲ್ಲಿ ಲಿಸ್ಟಿಂಗ್ಗೆ ಅವಕಾಶ ಕಲ್ಪಿಸುವ ಮೂಲಕ ಅವ್ಯವಹಾರ ಎಸಗಲಾಗಿದೆ ಎಂದೂ ಅರ್ಜಿಯಲ್ಲಿಆರೋಪಿಸಲಾಗಿದೆ.
ಡಿಸೆಂಬರ್ 1994 ರಲ್ಲಿ ಬಂಗಾಳ ಮೂಲದ ಕ್ಯಾಲ್ಸ್ ರಿಫೈನರೀಸ್ಗೆ ಬಿಎಸ್ಇಯಲ್ಲಿ ಪಟ್ಟಿ ಮಾಡಲು ಅನುಮತಿ ನೀಡುವಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ವಿಷಯ ಇದಾಗಿದೆ..