ಕೋಲ್ಕತ್ತ: ಇತ್ತೀಚಿಗೆ ನಡೆದ ಬಿಹಾರ ವಿಧಾನಸಭೆಯಲ್ಲಿ ಎನ್ ಡಿಎ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶತ್ರುಘ್ನ ಸಿನ್ಹಾ, ನಮ್ಮ ಬಿಹಾರದ ಜನರು ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ಅರ್ಹವಾದ ಸರ್ಕಾರವನ್ನು ಮಾಡಿಕೊಂಡಿದ್ದಕ್ಕಾಗಿ ಮತ್ತು ಅತ್ಯಂತ ಜನಪ್ರಿಯ, ಸಜ್ಜನ ರಾಜಕಾರಣಿಯಾದ ನಿತೀಶ್ ಕುಮಾರ್ ಅವರ ನಾಯಕತ್ವವನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆ ಎಂದಿದ್ದಾರೆ.
ಜನರ ನಿರೀಕ್ಷೆಗಳಿಗೆ ತಕ್ಕಂತೆ ಆಡಳಿತ ನಡೆಸಲು ನಿತೀಶ್ ಕುಮಾರ್ ಅವರಿಗೆ ದೇವರು ಆಶೀರ್ವದಿಸಲಿ. ಅದೇ ರೀತಿ ಎನ್ ಡಿಎ ಮಿತ್ರ ಪಕ್ಷಗಳಿಗೆ ಅಭಿನಂದನೆಗಳು, ಜೈ ಬಿಹಾರ, ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ಶತ್ರುಘ್ನ ಸಿನ್ಹಾ ಅವರ ಹೇಳಿಕೆ ರಾಜಕೀಯ ವಲಯಗಳಿಗೆ ಕುತೂಹಲ ಮೂಡಿಸಿದೆ. ಸಿನ್ಹಾ ಅವರು ಬಿಹಾರ ಮೂಲದವರಾಗಿದ್ದು, ಇದು ಅವರ ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದು ಟಿಎಂಸಿ ಹೇಳಿದೆ.