ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದ ಐತಿಹಾಸಿಕ ಹಜರತ್ಬಾಲ್ ದರ್ಗಾದ ಉದ್ಘಾಟನಾ ಫಲಕದ ಮೇಲಿದ್ದ ಭಾರತ ರಾಷ್ಟ್ರ ಲಾಂಛನ ಅಶೋಕ ಸ್ತಂಭ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಕ್ರಮ ಕೈಗೊಂಡಿರುವ ಪೊಲೀಸರು 50 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಹಜರತ್ಬಾಲ್ ಮಸೀದಿಯ ಅಶೋಕ ಲಾಂಛನವಿರುವ ಫಲಕವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ಘಟನೆಯಲ್ಲಿ ಭಾಗಿಯಾದವರಿಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯ ನಂತರ ನಡೆದ ಘಟನೆಯ ವೀಡಿಯೊಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಕೃತ್ಯವೆಸಗಿದವರನ್ನು ಬಂದಿಸಲಾಗುತ್ತಿದೆ ಎಂದು ಅವರು ಹೇಳಿದರು.
"ಇಲ್ಲಿಯವರೆಗೆ ಯಾರನ್ನೂ ಔಪಚಾರಿಕವಾಗಿ ಬಂಧಿಸಲಾಗಿಲ್ಲ. ಆದರೆ ಕೆಲವು ಜನರನ್ನು ಪ್ರಶ್ನಿಸಲಾಗುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತೆಯೇ "ಕಾನೂನಿನ ಪ್ರಕಾರ ಫಲಕವನ್ನು ಧ್ವಂಸ ಮಾಡಿದ ಮಹಿಳೆಯರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಆದರೆ ಘಟನೆಯಲ್ಲಿ ಭಾಗಿಯಾಗಿರುವ ಯಾವುದೇ ಅಪ್ರಾಪ್ತ ವಯಸ್ಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ" ಎಂದು ಅಧಿಕಾರಿ ಹೇಳಿದರು.
ಶುಕ್ರವಾರ ಹಜರತ್ಬಾಲ್ ದೇವಾಲಯದಲ್ಲಿ ಅಶೋಕ ಲಾಂಛನವಿರುವ ಫಲಕವನ್ನು ಧ್ವಂಸಗೊಳಿಸಿದ ನಂತರ ಕಾಶ್ಮೀರದಲ್ಲಿ ಭಾರಿ ವಿವಾದ ಭುಗಿಲೆದ್ದಿತು, ವಕ್ಫ್ ಮಂಡಳಿಯ ಮುಖ್ಯಸ್ಥ ದರಾಕ್ಷನ್ ಅಂದ್ರಾಬಿ ಮಸೀದಿಯಲ್ಲಿ ರಾಷ್ಟ್ರೀಯ ಲಾಂಛನವನ್ನು ಬಳಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪ್ರತಿಪಕ್ಷ ಪಿಡಿಪಿ ಸೇರಿದಂತೆ ಸ್ಥಳೀಯ ರಾಜಕೀಯ ಪಕ್ಷಗಳು ಆರೋಪಿಸಿದ್ದವು.
ಅಲ್ಲದೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಅವರನ್ನು ತಕ್ಷಣ ತೆಗೆದುಹಾಕುವಂತೆ ಅವರು ಒತ್ತಾಯಿಸಿದ್ದರು.
ಏನಿದು ಘಟನೆ…?
ಶ್ರೀನಗರದ ಹಜರತ್ಬಾಲ್ ದರ್ಗಾ ಇಸ್ಲಾಮಿಕ್ ಪವಿತ್ರ ತಾಣದಲ್ಲಿ ಒಂದಾಗಿದ್ದು, ಅದರಂತೆ ಇತ್ತೀಚೆಗಷ್ಟೇ ದರ್ಗಾದ ನವೀಕರಣ ಕಾರ್ಯ ಮುಗಿದು, ವಕ್ಫ್ ಮಂಡಳಿಯ ಅಧ್ಯಕ್ಷೆ ದಾರಕ್ಷನ್ ಅಂದ್ರಾಬಿಯವರ ನೇತೃತ್ವದಲ್ಲಿ ಇದರ ಅಧಿಕೃತ ಉದ್ಘಾಟನೆ ನಡೆಯಿತು.
ಇನ್ನು ಉದ್ಘಾಟನೆಯ ವೇಳೆ, ದರ್ಗಾದ ಒಳಭಾಗದಲ್ಲಿ ಒಂದು ಸ್ಮಾರಕ ಫಲಕವನ್ನು ಸ್ಥಾಪಿಸಲಾಯಿತು. ಅದರ ಮೇಲೆ ಭಾರತದ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭದ ಪ್ರತಿರೂಪವಿದೆ. ಆದ್ರೆ, ಈ ಚಿಹ್ನೆಯಲ್ಲಿ ಉಪಸ್ಥಿತ ಪ್ರಾಣಿಗಳ ಆಕಾರಗಳನ್ನು ಕೆಲವರು ವಿರೋಧಿಸಿದ್ದಾರೆ. ಮಾತ್ರವಲ್ಲದೇ ಅದನ್ನು ಕಲ್ಲಿನಿಂದ ಒಡೆದು ಕಿತ್ತು ಹಾಕಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಅಂದಹಾಗೆ ಇಸ್ಲಾಂ ಧರ್ಮದ ಅನ್ವಯ ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ಪ್ರಾಣಿಗಳ ಪ್ರತಿಮೆಗಳಿದ್ದರೆ ಅದು ಅನ್ವಯಿಸದು. ಏಕೆಂದರೆ ಇಸ್ಲಾಮ್ ಒಂದು ಏಕದೇವೋಪಾಸಕ ಧರ್ಮವಾಗಿದ್ದು, ಇಲ್ಲಿ ಕೇವಲ ಒಬ್ಬ ದೇವನಲ್ಲೇ ನಂಬಿಕೆ ಇರಬೇಕು ಎಂಬ ಕಾರಣ ನೀಡಿ ಕೆಲವು ಮೂಲಭೂತವಾದಿಗಳು ಅದನ್ನು ವಿರೋಧಿಸಿದ್ದಾರೆ.