ವಿಜಯ್ ಮಲ್ಯ, ನೀರವ್ ಮೋದಿ  
ದೇಶ

ತಿಹಾರ್ ಜೈಲು ಪರಿಶೀಲಿಸಿದ ಬ್ರಿಟನ್ ತಂಡ: ವಿಜಯ್ ಮಲ್ಯ, ನೀರವ್ ಮೋದಿ ಗಡಿಪಾರು ಸನ್ನಿಹಿತ..?

ಭಾರತಕ್ಕೆ ಗಡೀಪಾರು ತಪ್ಪಿಸಿಕೊಳ್ಳಲು ಇಬ್ಬರೂ ಆರೋಪಿಗಳು, ಭಾರತದ ಜೈಲುಗಳಲ್ಲಿನ ಅವ್ಯವಸ್ಥೆಯನ್ನೇ ಪ್ರಮುಖವಾಗಿ ಉಲ್ಲೇಖಿಸಿದ್ದರು. ಅಲ್ಲಿಗೆ ಹೋದರೆ ತಾವು ಕಾಯಿಲೆ ಬಿದ್ದು ಸಾಯುವ ಗಂಭೀರ ಆರೋಪಗಳನ್ನು ಮಾಡಿದ್ದರು.

ನವದೆಹಲಿ: ಭಾರತದ ವಿವಿಧ ಬ್ಯಾಂಕ್'ಗಳಿಗೆ ಸಾವಿರಾರು ಕೋಟಿ ರು.ವಂಚಿಸಿ ವಿದೇಶಗಳಿಗೆ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ ಬ್ರಿಟನ್ ನಲ್ಲಿರುವ ಕೆಲವು ದೇಶಭ್ರಷ್ಟರು ಶೀಘ್ರದಲ್ಲೇ ಭಾರತಕ್ಕೆ ಗಡೀಪಾರಾಗುವ ಬೆಳವಣಿಗೆಗಳು ಕಂಡು ಬರುತ್ತಿವೆ.

ಭಾರತೀಯ ಬ್ಯಾಂಕುಗಳಿಗೆ ಮೋಸ ಮಾಡಿದ ಆರೋಪದ ಮೇರೆಗೆ ಬ್ರಿಟನ್ ನಲ್ಲಿ ಅಡಗಿರುವ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಇನ್ನಿತರ ಹೈ ಪ್ರೊಫೈಲ್ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಈಗಾಗಲೇ ಭಾರತ, ಬ್ರಿಟನ್ ಸರ್ಕಾರವನ್ನು ಕೋರಿದ್ದು ಅಲ್ಲಿನ ನ್ಯಾಯಾಂಗ ವ್ಯವಸ್ಥೆಯು ಅದಕ್ಕೆ ಸಮ್ಮತಿಯನ್ನೂ ನೀಡಿದೆ.

ಒಂದು ವೇಳೆ ಅವರು ಭಾರತಕ್ಕೆ ಹಸ್ತಾಂತರಗೊಂಡರೆ ಅವರನ್ನು ತಿಹಾರ್ ಜೈಲಿನಲ್ಲಿ ಇಡುವುದಾಗಿ ಭಾರತ ಸರ್ಕಾರ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ನಿಂದ ಇತ್ತೀಚೆಗೆ ಬಂದಿದ್ದ ತಜ್ಞರ ತಂಡವೊಂದು ಜೈಲಿನ ಭದ್ರತೆ ಹಾಗೂ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದೆ ಎಂದು ತಿಳಿದುಬಂದಿದೆ.

ಭಾರತಕ್ಕೆ ಗಡೀಪಾರು ತಪ್ಪಿಸಿಕೊಳ್ಳಲು ಇಬ್ಬರೂ ಆರೋಪಿಗಳು, ಭಾರತದ ಜೈಲುಗಳಲ್ಲಿನ ಅವ್ಯವಸ್ಥೆಯನ್ನೇ ಪ್ರಮುಖವಾಗಿ ಉಲ್ಲೇಖಿಸಿದ್ದರು. ಅಲ್ಲಿಗೆ ಹೋದರೆ ತಾವು ಕಾಯಿಲೆ ಬಿದ್ದು ಸಾಯುವ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬ್ರಿಟನ್‌ನ ಜೈಲು ಅಧಿಕಾರಿಗಳ ತಂಡವೊಂದು ಇತ್ತೀಚೆಗೆ ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ವಿಜಯ್ ಮಲ್ಯ ಗಡೀಪಾರಿಗೆ ಸಂಬಂಧಿಸಿದಂತೆ ಭಾರತದ ಜೈಲಿನ ಸ್ಥಿತಿ ಬಗ್ಗೆ ಬ್ರಿಟನ್‌ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ಆಗ ಭಾರತವು ಜೈಲಿನ ಸ್ಥಿತಿ ಉನ್ನತೀಕರಿಸಲಾಗುತ್ತದೆ ಎಂದು ಭರವಸೆ ನೀಡಿತ್ತು.

ಮತ್ತೊಂದೆಡೆ ಗಡೀಪಾರು ಜಾರಿಯಾಗಿದ್ದರೂ ನೀರವ್ ಮೋದಿಯನ್ನು ಬ್ರಿಟನ್‌ನ ಜೈಲಿನಲ್ಲಿಯೇ ಇರಿಸಿಕೊಂಡಿದೆ. ಇದರ ಬೆನ್ನಲ್ಲೇ ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್‌ನ ಅಧಿಕಾರಿಗಳು ತಿಹಾರ್‌ಗೆ ಭೇಟಿ ನೀಡಿ ಅಲ್ಲಿನ ಕೈದಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಜೈಲಿನ ಸ್ಥಿತಿಗಳ ಕುರಿತು ಕೂಲಂಕಷ ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಈ ವೇಳೆ ಬಹುಬೇಡಿಕೆ ವಂಚಕರಿಗೆ ಬೇಕಿದ್ದರೆ 'ವಿಶೇಷ ವ್ಯವಸ್ಥೆ' ಮಾಡುವುದಾಗಿ ಭಾರತದ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ವಂಚನೆ ಪ್ರಕರಣದಲ್ಲಿ ಹಲವು ದೇಶಗಳಿಗೆ ಪರಾರಿಯಾಗಿರುವ 178 ಮಂದಿಯ ಗಡೀಪಾರಿಗೆ ಭಾರತ ಪ್ರಯತ್ನ ನಡೆಸುತ್ತಿದೆ. ಈ ಪೈಕಿ 20 ಮಂದಿ ಬ್ರಿಟನ್ ನಲ್ಲಿ ನೆಲೆಸಿದ್ದಾರೆಂದು ತಿಳಿದುಬಂದಿದೆ.

ಈ ಪಟ್ಟಿಯಲ್ಲಿ ವಿಜಯ್ ಮಲ್ಯ ಮತ್ತು ನೀರವ್ ಮೋದಿಯಷ್ಟೇ ಅಲ್ಲದೆ, ಸಂಜಯ್ ಭಂಡಾರಿ ಮತ್ತು ಹಲವಾರು ಖಲಿಸ್ತಾನಿ ನಾಯಕರೂ ಸೇರಿದ್ದಾರೆ.

ನೀರವ್‌ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13800 ಕೋಟಿ ರು. ವಂಚಿಸಿದ್ದು, ವಿಜಯ್ ಮಲ್ಯ ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕ್‌ಗಳಿಗೆ 9000 ಕೋಟಿ ರು. ವಂಚಿಸಿ ಪರಾರಿಯಾದ ಆರೋಪ ಎದುರಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಟಿಷರ ದಬ್ಬಾಳಿಕೆ ನಡುವೆಯೂ 'ವಂದೇ ಮಾತರಂ' ಬಂಡೆಯಂತೆ ಗಟ್ಟಿಯಾಗಿ ನಿಂತಿತು: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ಮಲಯಾಳಂ ನಟಿ ಮೇಲೆ ಅತ್ಯಾಚಾರ ಪ್ರಕರಣ: ನಟ ದಿಲೀಪ್ ಖುಲಾಸೆ; ಪಲ್ಸರ್ ಸುನಿ ಸೇರಿ ಆರು ಮಂದಿ ತಪ್ಪಿತಸ್ಥರು

ಬಾಬ್ರಿ ಮಾದರಿಯ ಬಂಗಾಳದ ಮಸೀದಿಗೆ ಎರಡೇ ದಿನದಲ್ಲಿ 1.3 ಕೋಟಿ ರೂ. ದೇಣಿಗೆ!

ಬೆಳಗಾವಿಯಲ್ಲಿ ಎಂಇಎಸ್, ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟಿಕೆ; ಮಹಾರಾಷ್ಟ್ರಕ್ಕೆ KSRTC ಬಸ್ ಸಂಚಾರ ಬಂದ್!

ತಾಪಮಾನದಲ್ಲಿ ಮತ್ತಷ್ಟು ಕುಸಿತ: ಬೆಂಗಳೂರಿನಲ್ಲಿ ಚಳಿ ಪ್ರಮಾಣ ಹೆಚ್ಚಳ, ವಾಯು ಗುಣಮಟ್ಟದಲ್ಲೂ ಬದಲಾವಣೆ

SCROLL FOR NEXT