ಶ್ರೀನಗರ: ಕಾಂದಹಾರ್ ವಿಮಾನ ಅಪಹರಣ ನಂತರ ಭಾರತದಿಂದ ಬಿಡುಗಡೆಯಾಗಿದ್ದ ಜೈಶ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ (Masood Azhar) ದೆಹಲಿ ಮತ್ತು ಮುಂಬೈನಲ್ಲಿ ಉಗ್ರ ದಾಳಿ ನಡೆಸಿದ್ದ ಎಂದು ಉನ್ನತ ಜೈಶ್ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ಒಪ್ಪಿಕೊಂಡಿದ್ದಾನೆ.
ಹೌದು.. ಕಾಶ್ಮೀರಿ ವೇದಿಕೆಯೊಂದರಲ್ಲಿ ಮಾತನಾಡಿರುವ ಜೈಶ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ (Masood Ilyas Kashmiri), '2019ರಲ್ಲಿ ಭಾರತದ ವಾಯುದಾಳಿಯ ಸಮಯದಲ್ಲಿ ನಾಶವಾದ ಬಾಲಕೋಟ್ನಲ್ಲಿ ಮಸೂದ್ ಅಜರ್ನ ನೆಲೆ ಇದೆ ಎಂದು ಇಲ್ಯಾಸ್ ಕಾಶ್ಮೀರಿ ಬಹಿರಂಗಪಡಿಸಿದ್ದಾನೆ.
ಪ್ರಸ್ತುತ ವೈರಲ್ ಆಗಿರುವ ಈ ಭಾಷಣದ ವಿಡಿಯೋದಲ್ಲಿ ನಾನಾ ವಿಚಾರಗಳ ಕುರಿತು ಮಾತನಾಡಿರುವ ಮಸೂದ್ ಇಲ್ಯಾಸ್ ಕಾಶ್ಮೀರಿ, 'ದೆಹಲಿಯ ತಿಹಾರ್ ಜೈಲಿನಿಂದ ತಪ್ಪಿಸಿಕೊಂಡ ನಂತರ, ಅಮೀರ್-ಉಲ್-ಮುಜಾಹಿದ್ದೀನ್ ಮೌಲಾನಾ ಮಸೂದ್ ಅಜರ್ ಪಾಕಿಸ್ತಾನಕ್ಕೆ ಬರುತ್ತಾನೆ. ಬಾಲಕೋಟ್ ಮಣ್ಣು ಅವನ ಧ್ಯೇಯ ಮತ್ತು ಕಾರ್ಯಕ್ರಮವನ್ನು ಮುಂದುವರಿಸಲು ಒಂದು ನೆಲೆಯನ್ನು ಒದಗಿಸಿತು. ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹುತಾತ್ಮ ಯೋಧರಾಗಿದ್ದರು ಎಂದು ಹೇಳಿದ್ದಾನೆ.
ಬಳಿಕ ಮಸೂದ್ ಅಜರ್ ಕುರಿತು ಮಾತನಾಡಿದ ಇಲ್ಯಾಸಿ, 'ಮಸೂದ್ ಅಜರ್ ದೆಹಲಿ ಮತ್ತು ಮುಂಬೈಯನ್ನು ಭಯಭೀತಗೊಳಿಸಿದ ವ್ಯಕ್ತಿ ಎಂದು ಬಣ್ಣಿಸಿದ್ದಾನೆ. ಅಲ್ಲದೆ 26/11 ಮತ್ತು ಸಂಸತ್ತಿನ ದಾಳಿಯಲ್ಲಿ ಆತನ ಪಾತ್ರವನ್ನು ದೃಢಪಡಿಸಿದ್ದಾನೆ.
ಆತನ ಈ ಹೇಳಿಕೆಗಳು ಪಾಕಿಸ್ತಾನವು ಒಸಾಮಾ ಬಿನ್ ಮತ್ತು ಮಸೂದ್ ಅಜರ್ಗೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಆಶ್ರಯ ನೀಡಿತು ಎಂಬುದು ಈಗ ಸ್ಪಷ್ಟವಾಗಿದೆ. ಇನ್ನು ಇಲ್ಯಾಸಿ ಭಾಷಣದ ವೇಳೆ ವೇದಿಕೆಯ ಎರಡೂ ಬದಿಗಳಲ್ಲಿ ಮುಸುಕುಧಾರಿ ಬಂದೂಕುಧಾರಿಗಳು ಇದ್ದು ಇವರೂ ಕೂಡ ಆತನ ರಕ್ಷಣೆಗೆ ಬಂದಿರುವ ಉಗ್ರಗಾಮಿಗಳೇ ಎಂದು ಹೇಳಲಾಗಿದೆ.
ಆಪರೇಷನ್ ಸಿಂದೂರ್ ವೇಳೆ ಮಸೂದ್ ಅಜರ್ ಕುಟುಂಬ ನಾಶ
ಇದೇ ವೇಳೆ ಈ ವರ್ಷದ ಮೇ ತಿಂಗಳಲ್ಲಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯಲ್ಲಿ ಉಗ್ರ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ ನಾಶವಾದ ಕುರಿತು ಮಾತನಾಡಿರುವ ಇಲ್ಯಾಸಿ, 'ಎಲ್ಲವನ್ನೂ ತ್ಯಾಗ ಮಾಡಿದ ನಂತರ, ಮೇ 7 ರಂದು ಬಹವಾಲ್ಪುರದಲ್ಲಿ, ಮೌಲಾನಾ ಮಸೂದ್ ಮಜರ್ ಅವರ ಕುಟುಂಬ ಸದಸ್ಯರನ್ನು ಭಾರತೀಯ ಸೇನೆಯ ಕ್ಷಿಪಣಿಗಳು ತುಂಡು ತುಂಡಾಗಿ ಹರಿದು ಹಾಕಿತು. ಆದರೆ ನಾವು ಭಾರತಕ್ಕೆ ತಿರುಗೇಟು ನೀಡಲಿದ್ದೇವೆ. ಶೀಘ್ರದಲ್ಲಿ ಮೌಲಾನಾ ಮಸೂದ್ ಅಜರ್ ನೇತೃತ್ವದಲ್ಲಿ ದೊಡ್ಡ ಗೆಲುವು ಸಾಧಿಸಲಿದ್ದೇವೆ ಎಂದು ಸಂಭಾವ್ಯ ದಾಳಿ ಕುರಿತು ಇಲ್ಯಾಸಿ ಮಾತನಾಡಿದ್ದಾನೆ.
ಉಗ್ರಗಾಮಿಗಳಿಗೆ ಪಾಕ್ ಸೇನಾ ಗೌರವ
ಇದೇ ವೇಳೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ ಉಗ್ರರ ಅಂತ್ಯಕ್ರಿಯೆಗಳಲ್ಲಿ ಪಾಕಿಸ್ತಾನ ಸೇನಾ ಕಮಾಂಡರ್ಗಳು ಭಾಗವಹಿಸಬೇಕು ಮತ್ತು ಭಾರತೀಯ ದಾಳಿಯಲ್ಲಿ ಕೊಲ್ಲಲ್ಪಟ್ಟ ಜೆಇಎಂ ಭಯೋತ್ಪಾದಕರನ್ನು ಗೌರವಿಸಬೇಕು, ವಾಯುಪಡೆ ಅಂತ್ಯಕ್ರಿಯೆಗಳಿಗೆ ಭದ್ರತೆ ಒದಗಿಸಬೇಕು ಮತ್ತು ಸೈನಿಕರು ಸಮವಸ್ತ್ರದಲ್ಲಿ ಸತ್ತ ಭಯೋತ್ಪಾದಕರಿಗೆ ನಮನ ಸಲ್ಲಿಸಬೇಕು ಎಂದು ಆಗಿನ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜಿಹೆಚ್ಕ್ಯೂನಿಂದ ಆದೇಶಿಸಿದ್ದರು ಎಂದು ಇಲ್ಯಾಸಿ ಕಾಶ್ಮೀರಿ ಹೇಳಿದ್ದಾನೆ.
ಗಮನಾರ್ಹವಾಗಿ, ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7 ರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು.