ಕಾನ್ಪುರ: ತನ್ನ ಗಂಡನ ಮನೆಯವರು ಕಿಡ್ನಿ ನೀಡುವಂತೆ ಅಥವಾ ಅದರ ಬದಲಿಗೆ 30 ಲಕ್ಷ ರೂ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ವನ ವಿವಾಹಿತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದ ಮಹಿಳೆ ತನ್ನದೇ ಗಂಡನ ಮನೆಯವರ ವಿರುದ್ಧ ಈ ಗಂಭೀರ ಆರೋಪ ಮಾಡುತ್ತಿದ್ದು, ತನ್ನ ಕಿಡ್ನಿ ನೀಡುವಂತೆ ಅಥವಾ 30 ಲಕ್ಷ ರೂ ಹಣ ತೆಗೆದುಕೊಂಡು ಬರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕಾನ್ಪುರದ ಚಕೇರಿಯಲ್ಲಿ ಪೊಲೀಸರು ವರದಕ್ಷಿಣೆ ಕಿರುಕುಳ, ವಂಚನೆ ಮತ್ತು ಕ್ರೌರ್ಯ ಪ್ರಕರಣ ದಾಖಲಾಗಿದ್ದು, ಮಹಿಳೆ ತಮ್ಮ ಪತಿ ಮತ್ತು ಅತ್ತೆಯರ ವಿರುದ್ಧ ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದ ಆಘಾತಕಾರಿ ಆರೋಪಗಳನ್ನು ಹೊರಿಸಿದ್ದಾರೆ.
ಸುಳ್ಳು ಹೇಳಿ ಕಿಡ್ನಿ ರೋಗಿ ಜೊತೆ ಮದುವೆ
ಇನ್ನು ಮಹಿಳೆ ಆರೋಪಿಸಿರುವಂತೆ ಮದುವೆಗೆ ಮೊದಲು ಪತಿಯ ಎರಡೂ ಮೂತ್ರಪಿಂಡಗಳು ವಿಫಲವಾಗಿವೆ ಎಂದು ಅವರ ಕುಟುಂಬ ತಿಳಿಸಿರಲಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ನಂತರ, ಅವರು ತನ್ನ ಒಂದು ಮೂತ್ರಪಿಂಡವನ್ನು ದಾನ ಮಾಡುವಂತೆ ಅಥವಾ 30 ಲಕ್ಷ ರೂ.ಗಳ ಮೊತ್ತವನ್ನು ವ್ಯವಸ್ಥೆ ಮಾಡುವಂತೆ ಒತ್ತಡ ಹೇರಿದರು.
ಆಗಿದ್ದೇನು?
ಜೂನ್ 22, 2023 ರಂದು ಲಕ್ನೋದ ನಿಶಾಂತ್ ಕುಮಾರ್ ಅವರನ್ನು ಮಹಿಳೆ ವಿವಾಹವಾಗಿದ್ದಾಗಿ ಹೇಳಿದ್ದಾರೆ. ಈ ವೇಳೆ ಮಹಿಳೆಯ ಕುಟುಂಬವು ಆಭರಣಗಳು, 8 ಲಕ್ಷ ನಗದು ಮತ್ತು ಮಹೀಂದ್ರಾ ಥಾರ್ ಎಸ್ಯುವಿ ಕಾರನ್ನು ಉಡುಗೊರೆಯಾಗಿ ನೀಡಿದೆ. ವಿವಾಹವನ್ನು ಕಾನ್ಪುರದಲ್ಲಿ ಆಯೋಜಿಸಲಾಗಿತ್ತು, ಆದರೆ ಲಕ್ನೋದಲ್ಲಿರುವ ತನ್ನ ಗಂಡನ ಮನೆಯಲ್ಲಿ ವಿಚಿತ್ರ ಸಂದರ್ಭಗಳನ್ನು ಎದುರಿಸಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಪತಿ ತನ್ನೊಂದಿಗೆ ಲೈಂಗಿಕ ಸಂಬಂಧದಲ್ಲಿ ಆಸಕ್ತಿ ತೋರಿಸಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಕೆಲವೊಮ್ಮೆ, ತನ್ನ ಅತ್ತೆ ತಮ್ಮ ನಡುವೆ ಮಲಗುತ್ತಿದ್ದರು ಎಂದು ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ. ತನ್ನ ಮಾವ ತನ್ನ ಕೋಣೆಗೆ ಹೇಳದೇ ಕೇಳದೇ ಒಳಗೆ ಬರುತ್ತಿದ್ದರು. ತನ್ನ ಒಪ್ಪಿಗೆಯಿಲ್ಲದೆ ತನ್ನ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಮಲಗಲು ನಿರಾಕರಿಸುತ್ತಿದ್ದ ಪತಿ ನಿಶಾಂತ್
ಅಲ್ಲದೆ ಪತಿ ನಿಶಾಂತ್ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಹಿಂಜರಿಯುತ್ತಿರುವುದನ್ನು ಆಕೆ ಪ್ರಶ್ನಿಸಿದಾಗಲೆಲ್ಲಾ ಅವನು ಉತ್ತರಗಳನ್ನು ತಪ್ಪಿಸಿ ಬೇರೊಬ್ಬರನ್ನು ಮದುವೆಯಾಗುವಂತೆ ಹೇಳುತ್ತಿದ್ದನು ಎಂದು ಹೇಳಿದ್ದಾರೆ.
ತನ್ನ ಪತಿ ದಿನಕ್ಕೆ ಕನಿಷ್ಠ 10 ಮಾತ್ರೆಗಳ ಸೇವಿಸುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ ಅವನ ಕುಟುಂಬ ಸದಸ್ಯರು ಅವನಿಗೆ ಅಧಿಕ ರಕ್ತದೊತ್ತಡವಿದೆ ಎಂದು ಹೇಳಿದ್ದರು. ಆದರೆ ತನ್ನ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಮತ್ತು ಅವನ ಕುಟುಂಬಕ್ಕೆ ಅದರ ಬಗ್ಗೆ ತಿಳಿದಿದೆ ಎಂದು ನನಗೆ ತಿಳಿದುಬಂತು ಎಂದು ಹೇಳಿದ್ದಾರೆ.
2024 ರ ಏಪ್ರಿಲ್ನಲ್ಲಿ, ತಾನು ಏನನ್ನು ಅನುಭವಿಸುತ್ತಿದ್ದೇನೆ ಎಂಬುದರ ಕುರಿತು ತನ್ನ ಅತ್ತಿಗೆಗೆ ಹೇಳಿದ್ದಾಗಿ ಮಹಿಳೆ ತನ್ನ ದೂರಿನಲ್ಲಿ ಹೇಳಿದ್ದಾರೆ. ಆಕೆಯ ಮಧ್ಯಪ್ರವೇಶದ ನಂತರವೇ ಆಕೆಯ ಪತಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದರು. ನಂತರ, ತನ್ನ ಅತ್ತಿಗೆ ತನ್ನ ಅತ್ತೆಗೆ "ಫೈಲ್ ಅನ್ನು ಮರೆಮಾಡಲು" ಹೇಳುವುದನ್ನು ನಾನು ಕೇಳಿಸಿಕೊಂಡೆ. ಫೈಲ್ ಅನ್ನು ತೆಗೆದು ನೋಡಿದಾಗ ಆಘಾತವಾಗಿತ್ತು. ಅದರಲ್ಲಿ 2022 ರ ಹಿಂದಿನ ನಿಶಾಂತ್ನ ವೈದ್ಯಕೀಯ ದಾಖಲೆಗಳು ಇದ್ದವು ಮತ್ತು ಅವನ ಎರಡೂ ಮೂತ್ರಪಿಂಡಗಳು ಆತನ ವ್ಯಸನದಿಂದಾಗಿ ವಿಫಲವಾಗಿವೆ ಮತ್ತು ಅವನು ಡಯಾಲಿಸಿಸ್ನಲ್ಲಿದ್ದನೆಂದು ಹೇಳಲಾಗಿದೆ.
ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ಆಕೆಯ ಅತ್ತೆ-ಮಾವನವರನ್ನು ಈ ಬಗ್ಗೆ ವಿಚಾರಿಸಿದಾಗ ಅವರು ಆಕೆಗೆ ಎರಡು ಆಯ್ಕೆಗಳನ್ನು ನೀಡಿದರು. ನಿಮ್ಮ ಕುಟುಂಬದಿಂದ 30 ಲಕ್ಷ ರೂ.ಗಳ ಹಣ ನೀಡಿ.. ಇಲ್ಲ ನಿಮ್ಮ ಪತಿಗೆ ಮೂತ್ರಪಿಂಡವನ್ನು ದಾನ ಮಾಡುವಂತೆ ಹೇಳಿದರು ಎಂದು ಮಹಿಳೆ ಹೇಳಿದ್ದಾರೆ..
ಅಕ್ಟೋಬರ್ 11, 2024 ರಂದು ಮಹಿಳೆ ತನ್ನ ಅತ್ತೆ-ಮಾವನ ಮನೆಯಿಂದ ಹೊರಗೆ ಹೋದಳು. ಅಲ್ಲದೆ ಆಕೆಯ ಕುಟುಂಬವು ತನಗೆ ಉಡುಗೊರೆಯಾಗಿ ನೀಡಿದ ಆಭರಣಗಳನ್ನು ಆಕೆಯ ಅತ್ತೆ-ಮಾವಂದಿರು ತೆಗೆದುಕೊಂಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಅಂದಿನಿಂದ ಅವರು ಕಾನ್ಪುರದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಪೊಲೀಸರು ಆಕೆಯ ಪತಿ ನಿಶಾಂತ್ ಮತ್ತು ಅವರ ಅತ್ತೆ-ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ಪಾಂಡೆ ಮಾತನಾಡಿ, "ನಾವು ಪ್ರಕರಣ ದಾಖಲಿಸಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ. ತನಿಖೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.