ಪಾಟ್ನ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದು, ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸಿಎಂ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದ್ದು, ಜೆಡಿಯು 2ನೇ ದೊಡ್ಡ ಪಕ್ಷವಾಗಿದ್ದರೂ ಈ ವರೆಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಸಿಎಂ ಸ್ಥಾನದಲ್ಲೇ ಮುಂದುವರೆದಿದ್ದರು.
ಈಗ ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದ್ದು, ಅವರ ರಾಜೀನಾಮೆಯಿಂದ ತೆರವುಗೊಂಡಿದ್ದ ಸಿಎಂ ಸ್ಥಾನಕ್ಕೆ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ.
ಹಿಂದೊಮ್ಮೆ ಜೆಡಿಯು ಬಿಜೆಪಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾಗ ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರವೇ ಪಗಡಿ ತೆಗೆಯುತ್ತೇನೆ ಎಂದು ಸಾಮ್ರಾಟ್ ಚೌಧರಿ ಶಪಥ ಮಾಡಿದ್ದರು.
ಆದರೆ 2024 ರ ಚುನಾವಣೆ ಬಳಿಕ ಜೆಡಿಯು ಎನ್ ಡಿಎ ಮೈತ್ರಿಕೂಟಕ್ಕೆ ಮರಳಿದ ಬಳಿಕ ದೇಶ ಹಾಗೂ ಪಕ್ಷಕ್ಕಾಗಿ ವೈಯಕ್ತಿಕ ಅಭಿಪ್ರಾಯಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದ ಚೌಧರಿ, ಅಯೋಧ್ಯೆಗೆ ಹೋಗಿ ಪಗಡಿ ತೆಗೆಯುವುದಾಗಿ ಘೋಷಿಸಿದ್ದರು.
ನನಗೆ ಬಿಜೆಪಿ ಎಲ್ಲವನ್ನೂ ನೀಡಿದೆ. ನನಗೆ ಪಕ್ಷ ತಾಯಿ ಇದ್ದಂತೆ, ನಾನು ಪಕ್ಷಕ್ಕೆ ಋಣಿಯಾಗಿದ್ದೆನೆ ಎಂದು ಹೇಳಿದ್ದ ಚೌಧರಿ, ಅಯೋಧ್ಯೆಗೆ ತೆರಳಿ ಭಗವಾನ್ ರಾಮನ ದರ್ಶನ ಪಡೆದು ಪಗಡಿ ತೆಗೆದಿದ್ದರು.