ನವದೆಹಲಿ: ಆಮ್ ಆದ್ಮಿ ಪಾರ್ಟಿ (AAP) ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕ ಸ್ಥಾನದಿಂದ ರಾಘವ ಚಡ್ಡಾ ಅವರನ್ನು ತೆಗೆದುಹಾಕಿದ ಕೆಲವೇ ದಿನಗಳ ನಂತರ, ಪಂಜಾಬ್ ಸರ್ಕಾರವು ಬುಧವಾರ ಸಂಸದರಿಗೆ ನೀಡಲಾಗಿದ್ದ Z+ ವರ್ಗದ ಭದ್ರತಾ ವಲಯವನ್ನು ಹಿಂತೆಗೆದುಕೊಂಡಿದೆ.
37 ವರ್ಷದ ಚಡ್ಡಾ ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಪಂಜಾಬ್ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಕ್ಷಣವೇ ಮುಖ್ಯ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪಂಜಾಬ್ನ ಈ ಸಂಸದನೊಂದಿಗೆ AAP ಪಕ್ಷದ ಹೆಚ್ಚುತ್ತಿರುವ ಹಾಗೂ ಕಹಿಯಾದ ಭಿನ್ನಾಭಿಪ್ರಾಯದ ನಡುವೆ ಈ ಕ್ರಮ ಇತ್ತೀಚಿನ ಬೆಳವಣಿಗೆಯಾಗಿದೆ. AAP ತೆಗೆದುಕೊಂಡ ಈ ನಿರ್ಧಾರದ ತಕ್ಷಣವೇ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮಧ್ಯಪ್ರವೇಶಿಸಿ, ಆ ಸಂಸದರಿಗೆ ಭದ್ರತಾ ವಲಯ ಒದಗಿಸಲು ಮುಂದಾಗಿದೆ. ಮೂಲಗಳ ಪ್ರಕಾರ, ಗೃಹ ಸಚಿವಾಲಯವು ದೆಹಲಿ ಮತ್ತು ಪಂಜಾಬ್ನಲ್ಲಿ ಆ AAP ಸಂಸದರಿಗೆ ‘Z’ ವರ್ಗದ ಭದ್ರತೆ, ದೇಶದ ಉಳಿದ ಭಾಗಗಳಲ್ಲಿ ‘Y’ ವರ್ಗದ ಭದ್ರತೆ ನೀಡಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತುವುದನ್ನು ತಪ್ಪಿಸಿ, ಬದಲಿಗೆ “ಸಾಫ್ಟ್ ಪಿಆರ್” ನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ, AAP ಪಕ್ಷ ಏಪ್ರಿಲ್ 2ರಂದು ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ತೆಗೆದುಹಾಕಿತ್ತು.
ಹೋರಾಟ ಧೋರಣೆಯಲ್ಲಿದ್ದ ಚಡ್ಡಾ, ಪಕ್ಷದ ಆರೋಪಗಳನ್ನು “ಸುಳ್ಳು” ಎಂದು ತಳ್ಳಿ ಹಾಕಿ, ತಾನು ಸಂಸತ್ತಿಗೆ ಜನರ ಸಮಸ್ಯೆಗಳನ್ನು ಎತ್ತಿಹಿಡಿಯಲು ಹೋಗಿದ್ದೇ ಹೊರತು ಗದ್ದಲ ಸೃಷ್ಟಿಸಲು ಅಲ್ಲ ಎಂದು ಹೇಳಿದ್ದರು.
ಸ್ವಾತಿ ಮಾಲಿವಾಲ್ ನಂತರ, ಪಕ್ಷದ ನಾಯಕತ್ವದೊಂದಿಗೆ ಅಸಮಾಧಾನಕ್ಕೆ ಒಳಗಾದ ಆಪ್ನ ಎರಡನೇ ರಾಜ್ಯಸಭಾ ಸದಸ್ಯರಾಗಿದ್ದಾರೆ ರಾಘವ್ ಚಡ್ಡಾ. ಒಮ್ಮೆ ಅರವಿಂದ ಕೇಜ್ರಿವಾಲ್ ಅವರ ಆಪ್ತ ವಿಶ್ವಾಸಪಾತ್ರರಲ್ಲಿ ಒಬ್ಬರಾಗಿದ್ದ ಹಾಗೂ ದೇಶದ ಅತಿ ಕಿರಿಯ ಸಂಸದರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಚಡ್ಡಾ, ವಿಶೇಷವಾಗಿ ಪಂಜಾಬ್ನಲ್ಲಿ ಮತ್ತು ದೆಹಲಿಯಲ್ಲಿ ಆಪ್ ಆಡಳಿತಾವಧಿಯಲ್ಲಿ ಪಕ್ಷದ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಕೆಲವು ತಿಂಗಳಲ್ಲಿ, ರಾಘವ್ ಚಡ್ಡಾ ಜನಹಿತದ ವಿಷಯಗಳು ಹಾಗೂ ಜನರ ನೋವು-ತೊಂದರೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ತೀವ್ರವಾಗಿ ಎತ್ತಿಕೊಂಡು ಮಾತನಾಡುತ್ತಿದ್ದಾರೆ. ಇದಕ್ಕೂ ಮುನ್ನ ಬಿಡುಗಡೆಯಾದ ಒಂದು ವಿಡಿಯೋ ಸಂದೇಶದಲ್ಲಿ, ನನ್ನನ್ನು “ಮೌನಗೊಳಿಸಲಾಗಿದೆ, ಸೋಲಿಸಿಲ್ಲ” ಎಂದು ರಾಘವ್ ಚಡ್ಡಾ ಹೇಳಿದ್ದರು.