ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಾದಿಸುತ್ತಿರುವ ಅನಧಿಕೃತ ವಿಡಿಯೋ ರೆಕಾರ್ಡಿಂಗ್ಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಬುಧವಾರ ದೆಹಲಿ ಪೊಲೀಸರಿಗೆ ಸೂಚಿಸಿದೆ.
ಹೈಕೋರ್ಟ್ನ ಅಧಿಕಾರಿಯೊಬ್ಬರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ನ್ಯಾಯಾಲಯದ ಪ್ರಕ್ರಿಯೆಗಳ ಅನಧಿಕೃತ ರೆಕಾರ್ಡಿಂಗ್ಗೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ.
ಆನ್ಲೈನ್ ವಿಚಾರಣೆಗಳ ಕುರಿತು ದೆಹಲಿ ಹೈಕೋರ್ಟ್ನ ನಿಯಮಗಳು, ನ್ಯಾಯಾಲಯದ ಪ್ರಕ್ರಿಯೆಗಳ ವಿಡಿಯೋಗಳನ್ನು ರೆಕಾರ್ಡ್ ಮಾಡುವುದು ಮತ್ತು ಪ್ರಕಟಿಸುವುದನ್ನು ನಿಷೇಧಿಸುತ್ತದೆ.
ಅಂತಹ ವೀಡಿಯೊಗಳನ್ನು ರೆಕಾರ್ಡ್ ಮಾಡಿ ಆನ್ಲೈನ್ನಲ್ಲಿ ಹಾಕಿರುವ "ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರತಿಯೊಬ್ಬರ" ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹೈಕೋರ್ಟ್ ಈ ಹಿಂದೆಯೂ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಕೇಜ್ರಿವಾಲ್ ಅವರ ವಿಡಿಯೋ ಹೈಕೋರ್ಟ್ ಗಮನಕ್ಕೆ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಏಪ್ರಿಲ್ 13 ರಂದು ದೆಹಲಿ ಹೈಕೋರ್ಟ್ ಮುಂದೆ ಕೇಜ್ರಿವಾಲ್ ಖುದ್ದಾಗಿ ಹಾಜರಾಗಿ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಶರ್ಮಾ ಅವರು ಹಿಂದೆ ಸರಿಯಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ಪರ ವಾದಿಸಿದ್ದರು.
ಕೇಜ್ರಿವಾಲ್ ಅವರು ಒಂದು ಗಂಟೆಗೂ ಹೆಚ್ಚು ಕಾಲ ವಾದಿಸಿದ್ದರು. ವಿಚಾರಣೆಯ ನಂತರ, ನ್ಯಾಯಾಲಯದ ಮುಂದೆ ಅವರು ವಾದಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.