ನವದೆಹಲಿ: ಆಡಳಿತಾರೂಢ ಎನ್ಡಿಎ ಮತ್ತು ವಿಪಕ್ಷಗಳ ನಡುವೆ ಹಲವು ದಿನಗಳಿಂದ ಕಿತ್ತಾಟಕ್ಕೆ ಕಾರಣವಾಗಿರುವ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯು ಯಾವುದೇ ಪಕ್ಷಪಾತ ಅಥವಾ ಅನ್ಯಾಯಯುತವಾಗಿ ಕೂಡಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭರವಸೆ ನೀಡಿದ್ದಾರೆ.
ಪೂರ್ವದಿಂದ ಪಶ್ಚಿಮದವರೆಗೆ, ಉತ್ತರದಿಂದ ದಕ್ಷಿಣದವರೆಗೆ ಯಾವುದೇ ರಾಜ್ಯಕ್ಕೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಗ್ಯಾರಂಟಿ ಕೊಡುತ್ತೇನೆ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ, ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ ಕುರಿತು ಆಡಳಿತರೂಢ ಎನ್ ಡಿಎ ಹಾಗೂ ವಿರೋಧ ಪಕ್ಷಗಳ ಸದಸ್ಯರು ಬೆಳಗ್ಗೆಯಿಂದ ಚರ್ಚೆ ನಡೆಸಿದ್ದು, ರಾಜಕೀಯ ಲಾಭಕ್ಕಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗುತ್ತಿದೆ ಎಂಬುದು ವಿರೋಧ ಪಕ್ಷಗಳ ಟೀಕೆಗೆ ಕಾರಣವಾಯಿತು.
ಈ ಟೀಕೆ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಅಥವಾ ದಕ್ಷಿಣವಾಗಲಿ, ಈ ಪ್ರಕ್ರಿಯೆಯಿಂದ ಯಾವುದೇ ತಾರತಮ್ಯ, ಅನ್ಯಾಯ ಆಗಲ್ಲ ಎಂದು ಭರವಸೆ ನೀಡಲು ಬಯಸುತ್ತೇನೆ. ನೀವು ಗ್ಯಾರಂಟಿ' ಎಂಬ ಪದ ಬಳಸಬೇಕೆಂದು ಬಯಸಿದರೆ, ನಾನು ಅದನ್ನು ಬಳಸುತ್ತೇನೆ, ಇಲ್ಲ ಭರವಸೆ ಎಂಬ ಪದವನ್ನು ಬಳಸಬೇಕೆಂದು ಬಯಸಿದರೆ, ನಾನು ಹಾಗೆ ಹೇಳುತ್ತೇನೆ ಎಂದು ಅವರು ಹೇಳಿದರು.
ದಕ್ಷಿಣ ಮುಖ್ಯಮಂತ್ರಿಗಳಾದ ತಮಿಳುನಾಡಿನ ಎಂ.ಕೆ. ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್, ತೆಲಂಗಾಣದ ರೇವಂತ್ ರೆಡ್ಡಿ ಮತ್ತು ಕರ್ನಾಟಕದ ಸಿದ್ದರಾಮಯ್ಯ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ತಮ್ಮ ರಾಜ್ಯಗಳಿಗೆ ಕ್ಷೇತ್ರ ಪುನರ್ ವಿಂಗಡಣೆಯಿಂದ ಅನ್ಯಾಯವಾಗಲಿದೆ ಎಂದು ಹೇಳುತ್ತಾ ಬಂದಿದ್ದಾರೆ.
ಅವರೊಂದಿಗೆ ಇಂಡಿಯಾ ಒಕ್ಕೂಟದ ಸದಸ್ಯರು, ಕ್ಷೇತ್ರ ಪುನರ್ ವಿಂಗಡಣೆಯು ಬಿಜೆಪಿಯ ದೀರ್ಘಕಾಲೀನ ಚುನಾವಣಾ ಪ್ರಯೋಜನವನ್ನು ಖಾತ್ರಿಪಡಿಸಿಕೊಳ್ಳುವ ರಾಜಕೀಯ ಸಾಧನವಾಗಿದೆ ಎಂದು ಟೀಕಿಸುತ್ತಿದ್ದಾರೆ.