ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡನೆ (ಡೆಲಿಮಿಟೇಶನ್) ಸಂಬಂಧಿಸಿದ ಮಸೂದೆಗಳ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ನಾರಿ ಶಕ್ತಿ”ಯನ್ನು ನೀಡಿದ್ದೇವೆ ಎಂದು ಹೇಳಿದರೂ, ಅದನ್ನು “ಮುಳ್ಳಿನ ತಂತಿಯಲ್ಲಿ ಸುತ್ತಿ ನೀಡಿದ್ದಾರೆಂದು” ಎಂದು ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಚರ್ಚೆಯ ವೇಳೆ ಮಾತನಾಡಿದ ತರೂರ್ ಅವರು, ಮಹಿಳಾ ಮೀಸಲಾತಿಗೆ ದೇಶಾದ್ಯಂತ ವ್ಯಾಪಕ ರಾಜಕೀಯ ಒಪ್ಪಿಗೆ ಇದ್ದರೂ, ಅದನ್ನು ಜಾರಿಗೆ ತರಲು ಡೆಲಿಮಿಟೇಶನ್ ಪ್ರಕ್ರಿಯೆಯೊಂದಿಗೆ ಜೋಡಿಸಿರುವುದೇಕೆ ಎಂದು ಪ್ರಶ್ನಿಸಿದರು. ಇದೇ ವೇಳೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯು "ರಾಜಕೀಯ ನೋಟು ಅಮಾನ್ಯೀಕರಣ"ವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.
ಮಹಿಳಾ ಮೀಸಲಾತಿಯನ್ನು ಕ್ಷೇತ್ರ ನಿರ್ಣಯದೊಂದಿಗೆ ಜೋಡಿಸುವುದು ಭಾರತೀಯ ಮಹಿಳೆಯರ ಆಕಾಂಕ್ಷೆಗಳನ್ನು ದೇಶದ ಇತಿಹಾಸದಲ್ಲಿ ''ಅತ್ಯಂತ ವಿವಾದಾತ್ಮಕ ಮತ್ತು ಸಂಕೀರ್ಣ'' ಆಡಳಿತಾತ್ಮಕ ವ್ಯಾಯಾಮಗಳಲ್ಲಿ ಒಂದಕ್ಕೆ ಒತ್ತೆಯಾಳುಗಳನ್ನಾಗಿ ಮಾಡುವುದಾಗಿದೆ ಎಂದರು.
ಇಂದು ನಾವು ಮಹಿಳಾ ಮೀಸಲಾತಿ ಪರವಾಗಿ ಬಹುತೇಕ ಸರ್ವಾನುಮತದ ರಾಜಕೀಯ ಒಮ್ಮತವಿರುವ ಹೊಸ್ತಿಲಲ್ಲಿ ನಿಂತಿದ್ದೇವೆ. ಪ್ರತಿಯೊಂದು ಪ್ರಮುಖ ಪಕ್ಷವೂ ಸಾಂಕೇತಿಕತೆಯ ಸಮಯ ಮುಗಿದಿದೆ ಮತ್ತು ಸಾಮೂಹಿಕ ಪಾಲುದಾರಿಕೆಯ ಯುಗ ಪ್ರಾರಂಭವಾಗಬೇಕು ಎಂದು ಅರಿತುಕೊಂಡಿದೆ ಆದರೆ ನಮ್ಮ ಮುಂದಿರುವ ಶಾಸಕಾಂಗ ಪ್ರಕ್ರಿಯೆಯಿಂದ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡನೆ ಒಂದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಅದು ದೇಶದ ರಾಜಕೀಯ ಶಕ್ತಿ ಸಮತೋಲನವನ್ನು ಬದಲಾಯಿಸುವ ಮಹತ್ವದ ಕ್ರಮವಾಗಿದೆ. ಇದನ್ನು ತುರ್ತು ಆಧಾರದ ಮೇಲೆ ಮುಂದುವರಿಸುವುದು ಒಕ್ಕೂಟ ವ್ಯವಸ್ಥೆಗೆ ಹಾನಿ ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ.
"ನೀವು ನೋಟು ಅಮಾನ್ಯೀಕರಣದ ಬಗ್ಗೆ ತೋರಿಸಿದ ಆತುರದಂತೆ, ಕ್ಷೇತ್ರ ಪುನರ್ವಿಂಗಡನೆ (ಡೆಲಿಮಿಟೇಶನ್)ಯನ್ನು ಪ್ರಸ್ತಾಪಿಸಿದ್ದೀರಿ. ದುರದೃಷ್ಟವಶಾತ್, ಅದು ದೇಶಕ್ಕೆ ಎಷ್ಟು ಹಾನಿ ಮಾಡಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಕ್ಷೇತ್ರ ಪುನರ್ವಿಂಗಡನೆ ರಾಜಕೀಯ ನೋಟು ಅಮಾನ್ಯೀಕರಣವಾಗಿ ಪರಿಣಮಿಸುತ್ತದೆ. ಅದನ್ನು ಮಾಡಬೇಡಿ ಎಂದು ಅವರು ಹೇಳಿದರು.
ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ಅಸಮತೋಲನದ ವಿಷಯವನ್ನೂ ಅವರು ಪ್ರಸ್ತಾಪಿಸಿದ್ದು, ಜನಸಂಖ್ಯೆ ನಿಯಂತ್ರಣ ಯಶಸ್ವಿಯಾಗಿ ಅನುಸರಿಸಿದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಆರ್ಥಿಕವಾಗಿ ಬಲಿಷ್ಠ ರಾಜ್ಯಗಳು ಮತ್ತು ಕೇಂದ್ರದ ನೆರವಿನ ಮೇಲೆ ಅವಲಂಬಿತ ರಾಜ್ಯಗಳ ನಡುವಿನ ವ್ಯತ್ಯಾಸವೂ ಹೆಚ್ಚಾಗಬಹುದು ಎಂದೂ ಎಚ್ಚರಿಸಿದ್ದಾರೆ.
ಇದೇ ವೇಳೆ ಡೆಲಿಮಿಟೇಶನ್ ಪ್ರಕ್ರಿಯೆಗೆ ಯುರೋಪಿಯನ್ ಸಂಸತ್ತಿನ ಮಾದರಿಯ 'ಡಿಗ್ರೆಸಿವ್ ಪ್ರೊಪೋರ್ಷನಾಲಿಟಿ' ವಿಧಾನವನ್ನು ಪರಿಗಣಿಸಬಹುದು ಎಂದೂ ತರೂರ್ ಅವರು ಸಲಹೆ ನೀಡಿದ್ದಾರೆ. ಇದು ದೊಡ್ಡ ಮತ್ತು ಚಿಕ್ಕ ರಾಜ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡಬಹುದು ಎಂದು ಅವರು ಹೇಳಿದ್ದಾರೆ.