ಕೊರ್ಬಾ: ಮಕ್ಕಳ ಮುಂದೆಯೇ ಮಚ್ಚಿನಿಂದ ಪತ್ನಿ ಕತ್ತು ಕತ್ತರಿಸಿದ ಪತಿಯೊಬ್ಬ ಬಳಿಕ ರುಂಡ ಹಿಡಿದು ಊರು ತುಂಬಾ ಓಡಾಡಿರುವ ಭಯಾನಕ ಘಟನೆ ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.
ತಲೆಯನ್ನು ಚೀಲದಲ್ಲಿ ಇಟ್ಟುಕೊಂಡು ಗ್ರಾಮದಲ್ಲಿ ಸುತ್ತಾಡುತ್ತಿದ್ದ ಆರೋಪಿ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಿಮಿಸಿದಾಗ , ನಾನು ಆಕೆಯನ್ನು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಅದಕ್ಕಾಗಿಯೇ ಆಕೆಯನ್ನು ಮಚ್ಚಿನಿಂದ ಕೊಂದಿದ್ದೇನೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ತನ್ನ ಬಗ್ಗೆ ಪತ್ನಿ ಅನುಮಾನಿಸುತ್ತಿದ್ದಳು. ಇದು ಇಬ್ಬರ ನಡುವೆ ಆಗಾಗ್ಗೆ ಜಗಳಗಳಿಗೆ ಕಾರಣವಾಯಿತು. ಘಟನೆಯ ಸಮಯದಲ್ಲಿ ಇಬ್ಬರೂ ಮದ್ಯ ಸೇವಿಸಿದ್ದರು ಎಂದು ಹೇಳಲಾಗಿದೆ. ಅದೇ ಅನುಮಾನ ವಿಷಯದಲ್ಲಿ ಬುಧವಾರ ಜಗಳ ನಡೆದಿದ್ದು, ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದು, ಬಳಿಕ ರುಂಡ ಕತ್ತರಿಸಿರುವುದಾಗಿ ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಘಟನೆ ವೇಳೆ ದಂಪತಿಗಳ ಇಬ್ಬರು ಮಕ್ಕಳು ಮನೆಯಲ್ಲಿದ್ದರು ಎಂದು ವರದಿಯಾಗಿದೆ. ಕೆಲವರು ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದು, ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜಗಮಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಂಡೇಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸತ್ರೆಂಗಾದ ಬುಂದೇಲಿ ಗ್ರಾಮದ ನಿವಾಸಿ ಆರೋಪಿ ಸಲೀಕ್ ರಾಮ್ ಯಾದವ್ (45) ಕೌಶಲ್ ಸಾಹು ಎಂಬುವವರ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಛೇಕ್ ಬಾಯಿ (42) ಮತ್ತು ನಾಲ್ವರು ಮಕ್ಕಳೊಂದಿಗೆ ಅಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಪತ್ನಿಯ ರುಂಡವನ್ನು ಚೀಲದಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಲು ಆರೋಪಿ ಯೋಜಿಸಿದ್ದ. ಆದರೆ ಪೊಲೀಸರೇ ಅವನಿದ್ದ ಸ್ಥಳಕ್ಕೆ ಆಗಮಿಸಿ ಬಂಧಿಸಿದ್ದಾರೆ ಎನ್ನಲಾಗಿದೆ. ಈ ಕ್ರೂರ ಘಟನೆಯು ಇಡೀ ಗ್ರಾಮದಲ್ಲಿ ಭೀತಿಯನ್ನು ಸೃಷ್ಟಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.