ನವದೆಹಲಿ: ಭಾರತದ ಪ್ರಸಿದ್ಧ ಛಾಯಾಗ್ರಾಹಕ, ತಮ್ಮ ಕ್ಯಾಮೆರಾದ ಮೂಲಕ ಭಾರತದ ಅನೇಕ ಮುಖಗಳನ್ನು ಹಿಡಿದಿಟ್ಟ ವ್ಯಕ್ತಿ ರಘು ರೈ ಇಂದು ಭಾನುವಾರ ಬೆಳಗಿನ ಜಾವ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಅಪ್ಪನಿಗೆ ಎರಡು ವರ್ಷಗಳ ಹಿಂದೆ ಪ್ರೋಸ್ಟೇಟ್ ಕ್ಯಾನ್ಸರ್ ಕಂಡುಬಂದಿತ್ತು, ಗುಣಮುಖರಾಗಿದ್ದರು. ನಂತರ ಅದು ಹೊಟ್ಟೆಗೆ ಹರಡಿತು, ಅದೂ ಗುಣವಾಯಿತು. ಇತ್ತೀಚೆಗೆ ಕ್ಯಾನ್ಸರ್ ಮೆದುಳಿಗೆ ಹರಡಿದ್ದು, ಜೊತೆಗೆ ವಯೋಸಹಜ ಸಮಸ್ಯೆಗಳೂ ಇದ್ದವು ಎಂದು ಛಾಯಾಗ್ರಾಹಕರಾದ ಮತ್ತು ರಘು ರೈ ಅವರ ಪುತ್ರ ನಿತಿನ್ ರೈ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅವರು ಪತ್ನಿ ಗುರ್ಮೀತ್, ಪುತ್ರ ನಿತಿನ್ ಹಾಗೂ ಪುತ್ರಿಯರಾದ ಲಗನ್, ಅವನಿ ಮತ್ತು ಪುರವೈ ಅವರನ್ನು ಅಗಲಿದ್ದಾರೆ. ಅವರ ಅಂತಿಮ ವಿಧಿಗಳು ಇಂದು ಸಂಜೆ 4 ಗಂಟೆಗೆ ನೆರವೇರಲಿದೆ.
1942 ಡಿಸೆಂಬರ್ 18ರಂದು (ಈಗ ಪಾಕಿಸ್ತಾನದಲ್ಲಿರುವ) ಝಾಂಗ್ನಲ್ಲಿ ಜನಿಸಿದ ರೈ, 1962ರಲ್ಲಿ ತಮ್ಮ ಹಿರಿಯ ಸಹೋದರ ಎಸ್. ಪಾಲ್ ಅವರಿಂದ ಛಾಯಾಗ್ರಹಣವನ್ನು ಕಲಿಯಲು ಆರಂಭಿಸಿದರು. 1960ರ ದಶಕದ ಮಧ್ಯದಲ್ಲಿ ವೃತ್ತಿಜೀವನ ಆರಂಭಿಸಿ, 1965ರಲ್ಲಿ ದೆಹಲಿಯ ‘ದಿ ಸ್ಟೇಟ್ಸ್ಮನ್’ ಪತ್ರಿಕೆಯಲ್ಲಿ ಸೇರಿದರು. 1968ರಲ್ಲಿ ಮಹರ್ಷಿ ಮಹೇಶ್ ಯೋಗಿಯ ಆಶ್ರಮಕ್ಕೆ ನಡೆದ ಭೇಟಿ ಸೇರಿದಂತೆ ಹಲವು ಪ್ರಮುಖ ರಾಷ್ಟ್ರೀಯ ಘಟನೆಗಳನ್ನು ಅವರು ವರದಿ ಮಾಡಿದರು.
1976ರಲ್ಲಿ ‘ದಿ ಸ್ಟೇಟ್ಸ್ಮನ್’ ಬಿಟ್ಟು, ವಾರಪತ್ರಿಕೆ ‘ಸಂಡೇ’ಯಲ್ಲಿ ಪಿಕ್ಚರ್ ಎಡಿಟರ್ ಆಗಿ ಸೇರಿದರು. 1977ರಲ್ಲಿ ಪ್ರಸಿದ್ಧ ಛಾಯಾಗ್ರಾಹಕ ಹೆನ್ರಿ ಕಾರ್ಟಿಯರ್-ಬ್ರೆಸಾನ್ ಅವರಿಂದ ಮ್ಯಾಗ್ನಮ್ ಫೋಟೋಸ್ ಸದಸ್ಯತ್ವಕ್ಕೆ ನಾಮನಿರ್ದೇಶನಗೊಂಡದ್ದು, ಅವರನ್ನು ವಿಶ್ವದ ಶ್ರೇಷ್ಠ ಛಾಯಾಗ್ರಾಹಕರನ್ನಾಗಿ ಮಾಡಿತು.
ನಂತರ ಅವರು ‘ಇಂಡಿಯಾ ಟುಡೇ’ಯಲ್ಲಿ ಪಿಕ್ಚರ್ ಎಡಿಟರ್ ಹಾಗೂ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ 1984ರ ಭೋಪಾಲ್ ಅನಿಲ ದುರಂತ ಸೇರಿದಂತೆ ಹಲವು ಐತಿಹಾಸಿಕ ಘಟನೆಗಳನ್ನು ದಾಖಲಿಸಿದರು. ಈ ದುರಂತವು ಅವರ ದೀರ್ಘಕಾಲಿಕ ಯೋಜನೆ ಹಾಗೂ ‘Exposure: A Corporate Crime’ ಎಂಬ ಪುಸ್ತಕದ ವಿಷಯವಾಗಿತ್ತು. 1972ರಲ್ಲಿ ಬಾಂಗ್ಲಾದೇಶ ವಿಮೋಚನಾ ಸಮರದ ವರದಿಗಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.
ರಘು ರೈ ಅವರ ಪರಂಪರೆ ಭಾರತದಲ್ಲಿ ಫೋಟೋಜರ್ನಲಿಸಂಗೆ ಹೊಸ ರೂಪ ನೀಡಿದ್ದು, ಅದನ್ನು ಶಕ್ತಿಶಾಲಿ ಕಲಾರೂಪವಾಗಿ ಎತ್ತಿಹಿಡಿದಿದೆ. ಅವರ ಕೃತಿಗಳು ಭಾರತದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಯನ್ನು ದಾಖಲಿಸುವ ಅಪರೂಪದ ಸಂಗ್ರಹವಾಗಿ ಉಳಿದಿವೆ.