ಪುಣೆ: ಮುಂಬೈ-ಸೋಲಾಪುರ ವಂದೇ ಭಾರತ್ ರೈಲು ಸೋಮವಾರ ರಾತ್ರಿ ಪುಣೆ ರೈಲು ನಿಲ್ದಾಣಕ್ಕೆ ಪ್ರವೇಶಿಸುವ ಮುನ್ನ ಹಳಿತಪ್ಪಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(CSMT) ನಿಂದ ನೈಋತ್ಯ ಮಹಾರಾಷ್ಟ್ರದ ಸೋಲಾಪುರಕ್ಕೆ ತೆರಳುತ್ತಿದ್ದ ಪ್ರೀಮಿಯಂ ಎಸಿ ರೈಲು(ಸಂಖ್ಯೆ 22225) ಇಂದು ರಾತ್ರಿ 7.30 ರ ಸುಮಾರಿಗೆ ಪ್ಲಾಟ್ಫಾರ್ಮ್ ಬಳಿ ಕ್ರಾಸಿಂಗ್ ಮೇಲೆ ಹಾದು ಹೋಗುತ್ತಿದ್ದಾಗ ಹಳಿ ತಪ್ಪಿದ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
"ವಂದೇ ಭಾರತ್ ರೈಲಿನ ಒಂದು ಬೋಗಿಯ ಚಕ್ರವು ಡೈಮಂಡ್ ಕ್ರಾಸಿಂಗ್ನಲ್ಲಿ ಹಳಿತಪ್ಪಿತು. ಕ್ರಾಸಿಂಗ್ ಅನ್ನು ಆದ್ಯತೆಯ ಮೇಲೆ ಬದಲಾಯಿಸಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆ ನಿಲ್ದಾಣದಲ್ಲಿ ನಡೆಯುತ್ತಿರುವ ಯಾರ್ಡ್ ನವೀಕರಣ ಕಾರ್ಯದ ಭಾಗವಾಗಿ ಕ್ರಾಸಿಂಗ್ ಅನ್ನು ನವೀಕರಣಕ್ಕೆ ನಿಗದಿಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹಳಿ ತಪ್ಪಿದ ಕೋಚ್ನ ಪ್ರಯಾಣಿಕರು ತಮ್ಮ ಸಾಮಾನುಗಳನ್ನು ಹೊತ್ತುಕೊಂಡು ರೈಲಿನಿಂದ ಇಳಿದು ಹತ್ತಿರದ ಪ್ಲಾಟ್ಫಾರ್ಮ್ಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದೆ.