ಬಾಂಬ್ ತಯಾರಿಕಾ ಟಿಪ್ಪಣಿ 
ದೇಶ

ಅಯೋಧ್ಯೆ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಕೆ ಟಿಪ್ಪಣಿ ಪತ್ತೆ: ಪ್ರಥಮ ವರ್ಷದ ವಿದ್ಯಾರ್ಥಿ ಪೊಲೀಸರ ವಶಕ್ಕೆ

ಈ ಕೈಬರಹದ ದಾಖಲೆಯಲ್ಲಿ ಬಾಂಬ್ ತಯಾರಿಸಲು ಬೇಕಾದ ಅಮೋನಿಯಂ ಕಾರ್ಬೋನೇಟ್, ನೈಟ್ರಿಕ್ ಆಮ್ಲ, ಕೆಂಪು ರಂಜಕ, ಕೆಂಪು ಸಲ್ಫೈಡ್ ಹಾಗೂ ಗೇಜ್ ವೈರ್‌ನಂತಹ ರಾಸಾಯನಿಕಗಳ ವಿವರಗಳಿದ್ದವು.

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಜರ್ಷಿ ದಶರಥ್ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಸುವ ವಿವರಗಳಿದ್ದ ಕೈಬರಹದ ಟಿಪ್ಪಣಿ ಸಿಕ್ಕ ಬೆನ್ನಲ್ಲೇ, ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿಯನ್ನು ಬಲರಾಂಪುರ ಮೂಲದ ಸರ್ಫರಾಜ್ ಖಾನ್ ಎಂದು ಗುರುತಿಸಲಾಗಿದೆ. ಈತ ಕಾಲೇಜಿನ 2025 ರ ಎಕ್ಸ್-ರೇ ಟೆಕ್ನಾಲಜಿ ಬ್ಯಾಚ್‌ನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಶನಿವಾರ ಬೆಳಗ್ಗೆ ಎಕ್ಸ್-ರೇ ಕೊಠಡಿಗೆ ಕರ್ತವ್ಯಕ್ಕೆ ತೆರಳಿದ್ದ ವಿದ್ಯಾರ್ಥಿಗಳಿಗೆ ಕಾಗದದ ಟಿಪ್ಪಣಿಯೊಂದು ಸಿಕ್ಕಿದೆ. ಶುಕ್ರವಾರ ರಾತ್ರಿ ಇದೇ ಕೊಠಡಿಯಲ್ಲಿ ಸರ್ಫರಾಜ್ ಇದ್ದ ಎನ್ನಲಾಗಿದೆ.

ಈ ಕೈಬರಹದ ದಾಖಲೆಯಲ್ಲಿ ಬಾಂಬ್ ತಯಾರಿಸಲು ಬೇಕಾದ ಅಮೋನಿಯಂ ಕಾರ್ಬೋನೇಟ್, ನೈಟ್ರಿಕ್ ಆಮ್ಲ, ಕೆಂಪು ರಂಜಕ, ಕೆಂಪು ಸಲ್ಫೈಡ್ ಹಾಗೂ ಗೇಜ್ ವೈರ್‌ನಂತಹ ರಾಸಾಯನಿಕಗಳ ವಿವರಗಳಿದ್ದವು.

ಕಾಲೇಜಿನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಸಿಂಗ್ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಸರ್ಫರಾಜ್ ಜೊತೆ ಕರ್ತವ್ಯದಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ತೀವ್ರಗೊಂಡ ಭದ್ರತೆ ಮತ್ತು ತನಿಖೆ ಟಿಪ್ಪಣಿ ಬರೆದಿರುವುದರ ಹಿಂದೆ ಯಾವುದೇ ಕ್ರಿಮಿನಲ್ ಅಥವಾ ಭಯೋತ್ಪಾದನಾ ಸಂಚು ಇದೆಯೇ ಎಂಬ ಬಗ್ಗೆ ಪೊಲೀಸರು ಹಾಗೂ ಉತ್ತರ ಪ್ರದೇಶ ಎಟಿಎಸ್‌ ಪಡೆಗಳು ತನಿಖೆ ನಡೆಸುತ್ತಿವೆ.

ಘಟನೆ ಬೆನ್ನಲ್ಲೇ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯು ಕ್ಯಾಂಪಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಎಕ್ಸ್-ರೇ, ಲ್ಯಾಬ್ ಹಾಗೂ ಹಾಸ್ಟೆಲ್ ಕೊಠಡಿಗಳಲ್ಲಿ ತಪಾಸಣೆ ನಡೆಸಿದೆ.

2025ರ ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡು 15 ಜನರು ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಹರಿಯಾಣದ ‘ಅಲ್ ಫಲಾಹ್ ವಿಶ್ವವಿದ್ಯಾಲಯ’ದ ಸಿಬ್ಬಂದಿ ಭಾಗಿಯಾಗಿದ್ದ ‘ಜೈಶ್-ಎ-ಮೊಹಮ್ಮದ್’ ಜಾಲ ಬೆಳಕಿಗೆ ಬಂದಿತ್ತು. ಇದೀಗ ಅಯೋಧ್ಯೆಯಂತಹ ಸೂಕ್ಷ್ಮ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲೇ ಇಂತಹ ಟಿಪ್ಪಣಿ ಪತ್ತೆಯಾಗಿರುವುದು ತನಿಖಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ.

ಬಂಧಿತ ವಿದ್ಯಾರ್ಥಿ ಸರ್ಫರಾಜ್ ಖಾನ್‌ಗೆ ಯಾವುದೇ ಉಗ್ರ ಸಂಘಟನೆಗಳ ಜೊತೆ ಸಂಪರ್ಕವಿದೆಯೇ ಅಥವಾ ಪ್ರಚೋದನಾಕಾರಿ ಜಾಲಕ್ಕೆ ಬಿದ್ದಿದ್ದಾನೆಯೇ ಎಂಬ ದೃಷ್ಟಿಯಲ್ಲಿ ಎಸ್‌ಟಿಎಫ್ (STF) ಮತ್ತು ವಿಧಿವಿಜ್ಞಾನ ತಂಡಗಳು ತನಿಖೆ ಚುರುಕುಗೊಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!

ಸಕಲೇಶಪುರ: ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ರೈಲು ಸಂಚಾರ ಸಂಪೂರ್ಣ ಸ್ಥಗಿತ; ಕಾನ್ಸ್ಟೇಬಲ್ ಪರೀಕ್ಷಾರ್ಥಿಗಳ ಪರದಾಟ

ಬೆದರಿಕೆಗಳಿಗೆ ಹೆದರಲ್ಲ, ಮತ್ತೆ ದಾಳಿ ನಡೆದರೆ ತಕ್ಕ ಪ್ರತಿಕ್ರಿಯೆ: ಅಮೆರಿಕಾಗೆ ಇರಾನ್ ತಿರುಗೇಟು, ನೆರೆಹೊರೆಯ ರಾಷ್ಟ್ರಗಳೊಂದಿಗೆ ತುರ್ತು ಮಾತುಕತೆ..!