ತಿರುವನಂತಪುರ: ಕೇರಳಂ ರಾಜ್ಯದಾದ್ಯಂತ ಶನಿವಾರ ಭಾರಿ ಮಳೆಯಾಗಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ ಮೂವರು ಮಕ್ಕಳು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಹಾಗೂ ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಹಲವೆಡೆ ಸೇತುವೆಗಳು, ರಸ್ತೆಗಳು ಮುಳುಗಡೆಯಾಗಿವೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕೊಟ್ಟಾಯಂ ಜಿಲ್ಲೆಯಲ್ಲಿ ಮಣಿಮಾಲ ಮತ್ತು ಪುಲ್ಲಕ್ಕಯಾರ್ ನದಿಗಳು ಉಕ್ಕಿ ಹರಿಯುತ್ತಿವೆ. ಕೂಟ್ಟಿಕಲ್ ಸೇತುವೆ ಮುಳುಗಡೆಯಾಗಿದೆ. ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕೋಯಿಕ್ಕೋಡ್, ಮಲಪ್ಪುರಂ, ಕಣ್ಣೂರು, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಸಣ್ಣಪುಟ್ಟ ಭೂಕುಸಿತ ಸಂಭವಿಸಿವೆ.
ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆಯು ದಕ್ಷಿಣ ಕೇರಳದ ಪೂರ್ವ ಭಾಗಗಳಲ್ಲಿ ಗಂಟೆಗಟ್ಟಲೆ ಧಾರಾಕಾರ ಸುರಿಯಿತು, ಇದರಿಂದಾಗಿ ಬೆಳಗಿನ ಜಾವ 2.30 ರ ಸುಮಾರಿಗೆ ನದಿಗಳು ಉಕ್ಕಿ ಹರಿದವು.
ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಲು ಪ್ರಾರಂಭಿಸಿದಾಗ, ದಡದಲ್ಲಿರುವ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಭೀತಿ ಹರಡಿತು, ಜನರು ತಮ್ಮ ಜೀವಕ್ಕಾಗಿ ಪರದಾಡಿದರು.
ರಣನಿ, ವಡಸೇರಿಕ್ಕರ ಮತ್ತು ಪಾಲಾ ಸೇರಿದಂತೆ ಪಟ್ಟಣಗಳು ಪ್ರವಾಹದಲ್ಲಿ ಮುಳುಗಿದವು. ರಾಜ್ಯಾದ್ಯಂತ 65 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 1,465 ಜನರಿಗೆ ಆಶ್ರಯ ನೀಡಲಾಗಿದೆ.