ನವದೆಹಲಿ: "ನಮ್ಮ ಪ್ರಧಾನಮಂತ್ರಿಗೆ ಅಷ್ಟೊಂದು ತಲೆಬಾಗಬೇಡಿ!" ಎಂದು ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ತಂತ್ರಜ್ಞಾನ ದೈತ್ಯ 'ಮೆಟಾ' ಸಂಸ್ಥೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್ ಅವರು, ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿದ್ದು, ಈ ಕುರಿತು ಮೆಟಾ (Meta) ವಿರುದ್ಧ ಕಿಡಿಕಾರಿದ್ದಾರೆ.
ತಮ್ಮ ಖಾತೆಯ ಮೇಲೆ ಏಕೆ ನಿರ್ಬಂಧ ಹೇರಲಾಗಿದೆ ಎಂಬುದಕ್ಕೆ ಕಂಪನಿಯು ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಮೆಟಾ ಭಾರತ ಕಚೇರಿಯನ್ನು ಸಂಪರ್ಕಿಸಿದಾಗ ತಮ್ಮ ಖಾತೆಗೆ ಭಾರತದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಅದು ಇಲ್ಲಿ ಲಭ್ಯವಿಲ್ಲ ಎಂದು ತಿಳಿಸಲಾಗಿದೆ.
ಆದರೆ, ಈ ನಿರ್ಬಂಧಕ್ಕೆ ಕಾರಣವೇನು ಅಥವಾ ಅದನ್ನು ಹೇಗೆ ತೆರವುಗೊಳಿಸಬಹುದು ಎಂಬುದರ ಬಗ್ಗೆ ಕಂಪನಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಮೆಟಾಗೆ ಕಳುಹಿಸಿದ ಇಮೇಲ್ಗಳಿಗೆ ಕೇವಲ ಸಾಮಾನ್ಯ ಸ್ವೀಕೃತಿ ಸಂದೇಶಗಳಷ್ಟೇ ಬಂದಿವೆ ಎಂದು ತಿಳಿಸಿದ್ದಾರೆ.
ತಮ್ಮ ಖಾತೆಯಲ್ಲಿ "Unavailable in some locations" (ಕೆಲವು ಪ್ರದೇಶಗಳಲ್ಲಿ ಲಭ್ಯವಿಲ್ಲ) ಎಂಬ ಸಂದೇಶ ಕಾಣಿಸುತ್ತಿರುವ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿರುವ ಕೇಜ್ರಿವಾಲ್, ಮೆಟಾದ ಸೇವೆಯನ್ನು "ತೀರಾ ಕಳಪೆ ಸೇವೆ" ಎಂದು ಟೀಕಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, "ಪ್ರಧಾನಮಂತ್ರಿಗೆ ಅಷ್ಟೊಂದು ತಲೆಬಾಗಬೇಡಿ. ಇಲ್ಲವಾದರೆ ಭಾರತದಲ್ಲಿ ಅವರ ಖಾತೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು. ಕೇಜ್ರಿವಾಲ್ ಅವರ ಈ ಆರೋಪಗಳಿಗೆ ಮೆಟಾ ಕಂಪನಿಯಿಂದ ತಕ್ಷಣ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.