ಮುಂಬೈ: ನಿರುದ್ಯೋಗವನ್ನು ದೇಶಾದ್ಯಂತ ಒಂದು ದೊಡ್ಡ ಸಮಸ್ಯೆಯಾಗಿ ತೆಗೆದುಕೊಳ್ಳಲಾಗುವುದು ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಗುರುವಾರ ಹೇಳಿದ್ದಾರೆ.
ಇಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಿಜೆಪಿಯ ಕೋರ್ ಕಮಿಟಿ ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ದೀಪ್ಕೆ, ದೇಶಾದ್ಯಂತ ಜನ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮತ್ತು ಜನರ ಧ್ವನಿಯಾಗಲು ಮುಂದಿನ ತಿಂಗಳು ದೇಶಾದ್ಯಂತ ಜಾಗೃತಿ ಅಭಿಯಾನ ಪ್ರಾರಂಭಿಸುವುದಾಗಿ ಘೋಷಿಸಿದರು.
ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ವಕ್ತಾರ ಅಶುತೋಷ್ ರಂಕಾ ಮತ್ತು ಇತರ ಪಕ್ಷದ ಪ್ರತಿನಿಧಿಗಳು ಸಹ ಹಾಜರಿದ್ದರು.
ಅಭಿಯಾನವನ್ನು ಘೋಷಿಸಿದ ದೀಪ್ಕೆ, "'ಕ್ಯಾ ಬೋಲ್ತಿ ಪಬ್ಲಿಕ್'(ಜನ ಏನು ಹೇಳುತ್ತಾರೆ?) ಅಭಿಯಾನದ ಸಮಯದಲ್ಲಿ, ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಜನ ಏನು ಹೇಳುತ್ತಾರೆ? ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆ" ಎಂದರು.
ನಮ್ಮ ಪ್ರತಿಭಟನೆ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ ನಿರುದ್ಯೋಗಿ ಯುವಕರನ್ನು ಸಹ ಆಕರ್ಷಿಸಿತ್ತು ಎಂದು ದೀಪ್ಕೆ ಹೇಳಿದರು. ದೇಶದ ಜನಸಂಖ್ಯೆಯ ಶೇ. 60 ರಷ್ಟು ಜನ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದವರಲ್ಲಿ ಅನೇಕರು ಆ ವಯಸ್ಸಿನವರಿದ್ದರು ಎಂದು ಅವರು ತಿಳಿಸಿದರು.
"ನಿರುದ್ಯೋಗವು ಒಂದು ಪ್ರಮುಖ ಸಮಸ್ಯೆಯಾಗಿದೆ; ನಾವು ಅದನ್ನು ರಾಷ್ಟ್ರವ್ಯಾಪಿ ಸಮಸ್ಯೆಯನ್ನಾಗಿ ಮಾಡುತ್ತೇವೆ" ಎಂದು ಸಿಜೆಪಿ ಮುಖ್ಯಸ್ಥರು ಹೇಳಿದರು.
"ನಾವು ಶಿಕ್ಷಣ ಸುಧಾರಣೆಗಳ ಮೇಲೆ ಕೆಲಸ ಮಾಡುತ್ತೇವೆ. ಶಾಲಾ ಶಿಕ್ಷಣದಿಂದಲೂ ಶಿಕ್ಷಣವು ಕೈಗೆಟುಕುವಂತಿಲ್ಲ. ಶಿಕ್ಷಣವು ಈಗ ಲಾಭ ಗಳಿಸುವ ಉದ್ಯಮವಾಗಿದೆ. ನಾವು ಅದನ್ನು ಬದಲಾಯಿಸಲು ಬಯಸುತ್ತೇವೆ" ಎಂದರು.
ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿದ್ಯಾರ್ಥಿಗಳ ಆಂದೋಲನದ ದೊಡ್ಡ ಸಾಧನೆ ಎಂದು ಬಣ್ಣಿಸಿದ ದೀಪ್ಕೆ, "ಈ ಸರ್ಕಾರ ಕಳೆದ 10-12 ವರ್ಷಗಳಲ್ಲಿ ಜನರ ಮನಸ್ಸಿನಲ್ಲಿ ಸೃಷ್ಟಿಸಿದ್ದ ಭಯ ಈಗ ಅಂತ್ಯಗೊಂಡಿದೆ" ಎಂದರು.
"ಜನರು ಈಗ ಬೀದಿಗೆ ಬರುತ್ತಾರೆ. ಇಂದು ಅವರು ಒಬ್ಬ ವ್ಯಕ್ತಿಯ ರಾಜೀನಾಮೆಯನ್ನು ಕೇಳಿದ್ದಾರೆ; ನಾಳೆ ಅವರು ಇತರರ ರಾಜೀನಾಮೆಯನ್ನು ಕೇಳುತ್ತಾರೆ" ಎಂದು ಅವರು ಹೇಳಿದರು.