ಸಂಗ್ರಹ ಚಿತ್ರ 
ದೇಶ

'ಭಾರತದ ಕಾನೂನು ಪಾಲಿಸುತ್ತಿದ್ದೀರಾ?': Metaಗೆ ಖಡಕ್ ಕ್ಲಾಸ್‌ ತೆಗೆದುಕೊಂಡ ಕೇಂದ್ರ ಸರ್ಕಾರ, ತೀವ್ರ ವಿಚಾರಣೆ

ಗುರುವಾರ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯೆಲ್‌ ಕಪ್ಲಾನ್‌ ನೇತೃತ್ವದ ತಂಡದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿತು.

ನವದೆಹಲಿ: ಸಾಮಾಜಿಕ ಜಾಲತಾಣಗಳ ದೈತ್ಯ ‘ಮೆಟಾ’ (Meta) ಸಂಸ್ಥೆಯ ವಿರುದ್ಧ ಕೇಂದ್ರ ಸರ್ಕಾರ ತನ್ನ ನಿಲುವನ್ನು ತೀವ್ರಗೊಳಿಸಿದೆ.

ಭಾರತಕ್ಕೆ ಭೇಟಿ ನೀಡಿರುವ ಮೆಟಾ ಸಂಸ್ಥೆಯ ಜಾಗತಿಕ ಉನ್ನತಾಧಿಕಾರಿಗಳ ತಂಡವನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು, "ನೀವು ಭಾರತದ ಕಾನೂನನ್ನು ಪಾಲಿಸುತ್ತಿದ್ದೀರಾ ಅಥವಾ ಇಲ್ಲವೇ?" ಎಂದು ನೇರವಾಗಿ ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್‌ ಪೋಸ್ಟ್‌ ಕೆಲ ಗಂಟೆಗಳ ಕಾಲ ನಿರ್ಬಂಧಿಸಲ್ಪಟ್ಟ ಘಟನೆಗೆ ಸಂಬಂಧಿಸಿದಂತೆ ಆರಂಭವಾದ ವಿಚಾರಣೆ ಇದೀಗ ಮೆಟಾದ ಅಲ್ಗಾರಿದಮ್‌, ಕಂಟೆಂಟ್‌ ನಿಯಂತ್ರಣ ವ್ಯವಸ್ಥೆ ಮತ್ತು ಭಾರತದ ಕಾನೂನುಗಳಿಗೆ ಅನುಗುಣವಾಗಿ ಕಂಪನಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದರ ಕುರಿತೀ ತೀವ್ರ ವಿಚಾರಣೆ ನಡೆಸುತ್ತಿದೆ.

ಗುರುವಾರ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯೆಲ್‌ ಕಪ್ಲಾನ್‌ ನೇತೃತ್ವದ ತಂಡದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿತು.

ಐಟಿ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಕಂಪನಿಯ ಅಲ್ಗಾರಿದಮ್‌ಗಳ ಕಾರ್ಯವೈಖರಿ, ಭಾರತೀಯ ಕಾನೂನುಗಳ ಪಾಲನೆ, ಕಾನೂನುಬಾಹಿರ ವಿಷಯಗಳ ನಿಯಂತ್ರಣ ಹಾಗೂ ಬಳಕೆದಾರರ ಸುರಕ್ಷತೆಯ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಸಭೆಯಲ್ಲಿ ಮೆಟಾ ತನ್ನ ವ್ಯವಸ್ಥೆಯಲ್ಲಿ ಕೆಲವು "ಗಂಭೀರ ಸಮಸ್ಯೆಗಳು" ಇರುವುದನ್ನು ಒಪ್ಪಿಕೊಂಡಿದ್ದು, ಅವುಗಳನ್ನು ಸರಿಪಡಿಸಲು ನಿರಂತರ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಅವರ ಫೇಸ್‌ಬುಕ್‌ ಪೋಸ್ಟ್‌ ತಾತ್ಕಾಲಿಕವಾಗಿ ನಿರ್ಬಂಧಿಸಲ್ಪಟ್ಟಿದ್ದ ಘಟನೆಗೆ ಕಂಪನಿ ಈಗಾಗಲೇ ಕ್ಷಮೆಯಾಚಿಸಿದ್ದು, ಇಂತಹ ತಪ್ಪುಗಳು ಮರುಕಳಿಸದಂತೆ ತಾಂತ್ರಿಕ ಸುಧಾರಣೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.

ಸಭೆಯಲ್ಲಿ ಸರ್ಕಾರದ ಪ್ರಮುಖ ಪ್ರಶ್ನೆ ಒಂದೇ ಆಗಿತ್ತು—ಮೆಟಾ ಭಾರತದಲ್ಲಿ ಕಾರ್ಯನಿರ್ವಹಿಸುವಾಗ ಭಾರತದ ಕಾನೂನುಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದೆಯೇ? ಎಂಬುದಾಗಿತ್ತು.

ಅಧಿಕಾರಿಗಳ ಪ್ರಕಾರ, ಕಂಪನಿಯ ಅಲ್ಗಾರಿದಮ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಅವು ಪಕ್ಷಪಾತವಿಲ್ಲದೆ ಕೆಲಸ ಮಾಡುತ್ತಿವೆಯೇ, ಕಾನೂನುಬಾಹಿರ ವಿಷಯಗಳನ್ನು ತಡೆಯಲು ಸಾಕಷ್ಟು ಭದ್ರತಾ ಕ್ರಮಗಳಿವೆಯೇ ಹಾಗೂ ಕಂಪನಿಯ ಸಿಬ್ಬಂದಿಗೆ ಭಾರತೀಯ ಸಂವಿಧಾನ ಮತ್ತು ಕಾನೂನುಗಳ ಬಗ್ಗೆ ಸಮರ್ಪಕ ಅರಿವು ಇದೆಯೇ ಎಂಬ ವಿಚಾರಗಳ ಕುರಿತು ಮೆಟಾಗೆ ವಿವರವಾದ ಪ್ರಶ್ನೆಗಳನ್ನು ಕೇಳಲಾಗಿದೆ.

ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಡಿಜಿಟಲ್‌ ವೇದಿಕೆ ಭಾರತೀಯ ಸಂವಿಧಾನ ಮತ್ತು ಕಾನೂನುಗಳ ಪ್ರಕಾರವೇ ಕಾರ್ಯನಿರ್ವಹಿಸಬೇಕು. ಅಮೆರಿಕ ಅಥವಾ ಯುರೋಪ್‌ನ ಕಾನೂನು ಚೌಕಟ್ಟಿನ ಆಧಾರದ ಮೇಲೆ ಭಾರತದಲ್ಲಿ ಸೇವೆ ನೀಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ಮೆಟಾಗೆ ನೀಡಿದೆ.

ಅಲ್ಗಾರಿದಮ್‌ಗಳ ಮೂಲಕ ಯಾವ ರೀತಿಯಲ್ಲಿ ವಿಷಯಗಳು ಬಳಕೆದಾರರಿಗೆ ತಲುಪುತ್ತವೆ, ಯಾವ ಮಾನದಂಡಗಳ ಆಧಾರದ ಮೇಲೆ ಕೆಲವು ಪೋಸ್ಟ್‌ಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ ಹಾಗೂ ಪಕ್ಷಪಾತವನ್ನು ತಡೆಯಲು ಯಾವ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂಬುದರ ಕುರಿತು ಮೆಟಾ ಸರ್ಕಾರಕ್ಕೆ ಮಾಹಿತಿ ನೀಡಿದೆ. ಆದರೆ, ಈ ವಿವರಣೆಗಳಿಂದ ಸರ್ಕಾರ ಸಂಪೂರ್ಣ ತೃಪ್ತಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಂದಿನ ಮೂರು-ನಾಲ್ಕು ದಿನಗಳ ಕಾಲ ಮೆಟಾದ ತಾಂತ್ರಿಕ ತಜ್ಞರು ಮತ್ತು ಕೇಂದ್ರ ಸರ್ಕಾರದ ತಾಂತ್ರಿಕ ತಂಡದ ನಡುವೆ ಮತ್ತಷ್ಟು ಆಳವಾದ ಚರ್ಚೆಗಳು ನಡೆಯಲಿವೆ. ಐಟಿ ಕಾರ್ಯದರ್ಶಿ ಎಸ್‌. ಕೃಷ್ಣನ್‌ ಈ ಸಭೆಗಳಿಗೆ ನೇತೃತ್ವ ವಹಿಸಲಿದ್ದು, "ತಾಂತ್ರಿಕ ಚರ್ಚೆಗಳು ಮುಂದುವರಿಯುತ್ತವೆ, ನಾವು ಮೆಟಾವನ್ನು ಕಠಿಣವಾಗಿ ಪ್ರಶ್ನಿಸುತ್ತೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಯಾಗುತ್ತಿರುವ ಡೀಪ್‌ಫೇಕ್‌ ವಿಡಿಯೊಗಳು ಹಾಗೂ ನಕಲಿ ಡಿಜಿಟಲ್‌ ವಿಷಯಗಳ ಬಗ್ಗೆ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ಇಂತಹ ವಿಷಯಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವುದರ ಜೊತೆಗೆ ಡಿಜಿಟಲ್‌ ವೇದಿಕೆಗಳ ಮೇಲಿನ ವಿಶ್ವಾಸಕ್ಕೂ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಮೆಟಾ, ಗೂಗಲ್‌ ಮತ್ತು ಎಕ್ಸ್‌ (X) ಸೇರಿದಂತೆ ಪ್ರಮುಖ ಡಿಜಿಟಲ್‌ ವೇದಿಕೆಗಳ ಕಾರ್ಯವೈಖರಿಯನ್ನು ಸರ್ಕಾರ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ಸಾಮಾಜಿಕ ಜಾಲತಾಣಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಈಗಿರುವ ಭಾರತೀಯ ಕಾನೂನು ಮತ್ತು ಸಂವಿಧಾನಾತ್ಮಕ ಚೌಕಟ್ಟಿನ ಅಡಿಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದೇ ಸರ್ಕಾರದ ಉದ್ದೇಶವಾಗಿದೆ.

ಜುಲೈ 23ರಂದು ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳು ಮತ್ತು ಯುವಕರನ್ನು ಉದ್ದೇಶಿಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ ವಿಡಿಯೊವನ್ನು ಮೊದಲು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಬಳಿಕ ಅದೇ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಲಾಗಿತ್ತು. ಆದರೆ, ಫೇಸ್‌ಬುಕ್‌ನಲ್ಲಿ ಆ ಪೋಸ್ಟ್‌ ಸುಮಾರು ಐದು ಗಂಟೆಗಳ ಕಾಲ ನಿರ್ಬಂಧಗೊಂಡಿದ್ದರಿಂದ ಮಧ್ಯವರ್ತಿ ಸಂಸ್ಥೆಗಳ ಹೊಣೆಗಾರಿಕೆ ಕುರಿತು ಪ್ರಶ್ನೆಗಳು ಉದ್ಭವಿಸಿದ್ದವು. ನಂತರ ಮೆಟಾ ಆ ಪೋಸ್ಟ್‌ ಅನ್ನು ಮರುಸ್ಥಾಪಿಸಿ, ಇದು AI ಆಧಾರಿತ ಸ್ವಯಂಚಾಲಿತ ಕಂಟೆಂಟ್‌ ಫಿಲ್ಟರ್‌ನ ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ಹೇಳಿ ಕ್ಷಮೆಯಾಚಿಸಿತ್ತು.

ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯೆಲ್‌ ಕಪ್ಲಾನ್‌ ಭಾರತಕ್ಕೆ ಭೇಟಿ ನೀಡಿ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಿದ್ದರು.

ಸರ್ಕಾರದ ಮೂಲಗಳ ಪ್ರಕಾರ, ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಪರವಾಗಿ ಪ್ರಧಾನಿ ಮೋದಿ ಅವರ ಪೋಸ್ಟ್‌ ನಿರ್ಬಂಧಗೊಂಡ ಘಟನೆಗೆ ಕ್ಷಮೆಯಾಚಿಸಲಾಗಿದೆ. ಆದರೆ, ಸಾರ್ವಜನಿಕವಾಗಿ ಕಪ್ಲಾನ್‌ ಮಾತ್ರ ಕಂಪನಿಯ ಪರವಾಗಿ ಕ್ಷಮೆಯಾಚಿಸಿರುವುದಾಗಿ ಹೇಳಿಕೆ ನೀಡಿದ್ದರು.

ಸಭೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳು (CSAM), ಡೀಪ್‌ಫೇಕ್‌ಗಳು, ಪರಿಶೀಲಿತ ಖಾತೆಗಳ ಭದ್ರತೆ, ಅಲ್ಗಾರಿದಮ್‌ ಪಕ್ಷಪಾತ ಹಾಗೂ ಹಣ ಪಡೆದು ನಿರ್ದಿಷ್ಟ ರೀತಿಯ ವಿಷಯಗಳನ್ನು ಹೆಚ್ಚು ಪ್ರಚಾರ ಮಾಡುವ ಆರೋಪಗಳ ಬಗ್ಗೆಯೂ ಮೆಟಾವನ್ನು ಸರ್ಕಾರ ಪ್ರಶ್ನಿಸಿದೆ. ಕೆಲವು ರೀತಿಯ ವಿಷಯಗಳನ್ನು ಹೆಚ್ಚು ಪ್ರಸಾರ ಮಾಡಲು ದೊಡ್ಡ ಮೊತ್ತದ ಹಣ ಪಾವತಿಸಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಸರ್ಕಾರ ಕೇಳಿದ್ದು, ಈ ಕುರಿತು ತನ್ನ ವ್ಯವಸ್ಥೆಯಲ್ಲಿ ಕೆಲವು ಕೊರತೆಗಳಿವೆ ಎಂದು ಕಂಪನಿ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 79 ಅನ್ನು ಉಲ್ಲೇಖಿಸಿದ ಕೇಂದ್ರ ಸರ್ಕಾರ, ಮಧ್ಯವರ್ತಿ ಸಂಸ್ಥೆಯಾಗಿ ಮೆಟಾಗೆ ಇರುವ ಕಾನೂನುಬದ್ಧ ಜವಾಬ್ದಾರಿಗಳನ್ನು ಪಾಲಿಸದಿದ್ದರೆ ಕಂಪನಿಗೆ ದೊರೆಯುವ 'ಸೇಫ್‌ ಹಾರ್ಬರ್‌' ರಕ್ಷಣೆಯ ಮೇಲೆಯೂ ಪರಿಣಾಮ ಬೀಳಬಹುದು ಎಂದು ಎಚ್ಚರಿಕೆ ನೀಡಿದೆ.

ಅಕ್ರಮ ವಿಷಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ತನ್ನ ವ್ಯವಸ್ಥೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ ಎಂಬುದನ್ನು ಮೆಟಾ ಒಪ್ಪಿಕೊಂಡಿದ್ದು, ಡೀಪ್‌ಫೇಕ್‌, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳು, ಬಾಟ್‌ ಖಾತೆಗಳು ಹಾಗೂ ಇತರ ಕಾನೂನುಬಾಹಿರ ವಿಷಯಗಳನ್ನು ತಡೆಯಲು ಕ್ರಮಗಳನ್ನು ಮತ್ತಷ್ಟು ಬಲಪಡಿಸುವುದಾಗಿ ಭರವಸೆ ನೀಡಿದೆ.

ಒಟ್ಟಾರೆ, ಭಾರತದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಅಲ್ಗಾರಿದಮ್‌ಗಳ ಪಾರದರ್ಶಕತೆ ಹೆಚ್ಚಿಸುವುದು ಮತ್ತು ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ಮೆಟಾಗೆ ರವಾನಿಸಿದ್ದು, ಮುಂದಿನ ಕೆಲವು ದಿನಗಳ ತಾಂತ್ರಿಕ ಮಟ್ಟದ ಚರ್ಚೆಗಳು ಈ ವಿಷಯದಲ್ಲಿ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಗ್ಗಿಲ್ಲದ AI ಕಂಟೆಂಟ್, ಡೀಪ್‌ಫೇಕ್‌ಗಳಿಗೆ ಬ್ರೇಕ್: ಸಾಮಾಜಿಕ ಜಾಲತಾಣಗಳಿಗೆ ಕೇಂದ್ರದ ಹೊಸ ನಿಯಮ!

ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ದೂರವಾಣಿ ಕರೆ; ಪಶ್ಚಿಮ ಏಷ್ಯಾ ಬಿಕ್ಕಟ್ಟು, ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಚರ್ಚೆ

ರಾಜ್ಯಸಭೆಯಲ್ಲಿ ಖರ್ಗೆ ರಣಕಹಳೆ: ಪ್ರತಿಪಕ್ಷಗಳ ಭಾವನೆಗಳನ್ನು ಅಮಿತ್ ಶಾಗೆ ತಿಳಿಸಿ – ರಿಜಿಜುಗೆ ಸಭಾಪತಿ ರಾಧಾಕೃಷ್ಣನ್ ಸೂಚನೆ

ಕ್ಯಾಲಿಫೋರ್ನಿಯಾದಲ್ಲಿ ಏಕಾಂಗಿ ಪಾದಯಾತ್ರೆ: ಪೆಟ್ರೋಲಿಯಂಗೆ ಪರ್ಯಾಯ ಶೋಧದಲ್ಲಿ ತೊಡಗಿದ್ದ ಭಾರತೀಯ ಮೂಲದ ಪಿಎಚ್‌ಡಿ ವಿದ್ಯಾರ್ಥಿ ನಿಗೂಢ ಸಾವು!

ಪ್ರತಿಭಟನೆ ನಡೆಸಿದಾಕ್ಷಣ ಜೆನ್ ಝೀ ಗಳು ರಾಷ್ಟ್ರವಿರೋಧಿಯಾಗುವುದಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್