ನವದೆಹಲಿ: ದೆಹಲಿಯ ನರೇಲಾದಲ್ಲಿ ಶನಿವಾರ ಬೆಳಗ್ಗೆ ವೇಗವಾಗಿ ಬಂದ ಮರ್ಸಿಡಿಸ್ ಕಾರು, ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ವಾಕಿಂಗ್ ಹೋಗಿದ್ದ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ಮಾಮುರ್ಪುರದ ಹಿಮಾಲಯ ಅಪಾರ್ಟ್ಮೆಂಟ್ಸ್ ಬಳಿ ಈ ಅಪಘಾತ ಸಂಭವಿಸಿದ್ದು, ಮೃತ ಮಹಿಳೆಯನ್ನು 70 ವರ್ಷದ ಊರ್ಮಿಳಾ ಎಂದು ಗುರುತಿಸಲಾಗಿದೆ. ಮರ್ಸಿಡಿಸ್ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಹರಿಯಾಣದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪುತ್ರ, ಶುಭಂ ಎಂದು ಗುರುತಿಸಲಾಗಿದೆ.
ಅಪಘಾತದ ಸಮಯದಲ್ಲಿ ಶುಭಂ ಕುಡಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಅವರ ಕಾರಿನಲ್ಲಿ ಮದ್ಯದ ಬಾಟಲಿ ಸಹ ಪತ್ತೆಯಾಗಿದೆ. ಪೊಲೀಸರು ಶುಭಂನನ್ನು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮರ್ಸಿಡಿಸ್ ಕಾರು ಮತ್ತು ವ್ಯಾಗನ್ ಆರ್ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ, ವ್ಯಾಗನ್ ಆರ್ ಕಾರು ಹಿಂದಕ್ಕೆ ಎಸೆಯಲ್ಪಟ್ಟು ದೂರದಲ್ಲಿ ನಿಲ್ಲಿಸಿದ್ದ ತ್ರಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಸ್ಥಳೀಯ ನಿವಾಸಿ ಊರ್ಮಿಳಾ ಅವರು, ತ್ರಿಚಕ್ರ ವಾಹನ ಮತ್ತು ವ್ಯಾಗನ್ ಆರ್ ನಡುವೆ ಸಿಲುಕಿಕೊಂಡರು. ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಾಗನ್ ಆರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಶುಭಂ ಕುಡಿದು ಮರ್ಸಿಡಿಸ್ ಕಾರನ್ನು ಅತಿ ವೇಗದಲ್ಲಿ ಚಲಾಯಿಸುತ್ತಿದ್ದರು. ಅಪಘಾತದ ನಂತರವೂ ಶುಭಂ ಕಾರಿನಲ್ಲೇ ಕುಳಿತಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಕಪ್ ಹೋಲ್ಡರ್ನಲ್ಲಿ ಮದ್ಯದ ಬಾಟಲಿಯನ್ನು ಸಹ ಇಡಲಾಗಿದೆ. ಈ ಐಷಾರಾಮಿ ಕಾರು ತನ್ನ ಸ್ನೇಹಿತರಿಗೆ ಸೇರಿದ್ದು, ಒಂದು ದಿನದ ಮಟ್ಟಿಗೆ ಪ್ರವಾಸಕ್ಕಾಗಿ ಅದನ್ನು ಎರವಲು ಪಡೆದಿದ್ದೆ ಎಂದು ಶುಭಂ ಹೇಳಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ನರೇಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.