ನವದೆಹಲಿ: ಇತ್ತೀಚಿನ ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ) ಪ್ರತಿಭಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮೊದಲ ಬಾರಿಗೆ ಜೆನ್ ಝಡ್ ಅನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ದೇಶವು ಯುವ ಭಾರತೀಯರಲ್ಲಿ ನಂಬಿಕೆ ಇಟ್ಟಿದೆ ಮತ್ತು ವಿಕ್ಷಿತ್ ಭಾರತ್ ಕಡೆಗೆ ನಮ್ಮ ಪ್ರಯಾಣಕ್ಕೆ ಅವರ ಕೊಡುಗೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಇಂದು ಐಐಟಿ ದೆಹಲಿಯ 57ನೇ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದು ಹೇಳಿದರು.
ಪ್ರತಿಯೊಂದು ಪೀಳಿಗೆಯೂ ತನ್ನದೇಯಾದ ನಿರ್ದಿಷ್ಟವಾದ ಸವಾಲುಗಳನ್ನು ಎದುರಿಸುತ್ತದೆ ಮತ್ತು ಅದಕ್ಕೆ ಅನುಗುಣವಾದ ರಾಷ್ಟ್ರೀಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಪರಿಹಾರ ಹುಡುಕಿಕೊಳ್ಳುವ ಧೈರ್ಯ ಇದ್ದವರಿಗೆ ಸವಾಲುಗಳೇ ಅವಕಾಶಗಳಾಗಬಹುದು ಎಂದರು.
ಮುಂದಿನ ಮೂರು, ನಾಲ್ಕು ದಶಕಗಳಲ್ಲಿ ಇಂದಿನ ಯುವಕರು ತೆಗೆದುಕೊಳ್ಳುವ ನಿರ್ಧಾರಗಳು ಭಾರತದ ಅಭಿವೃದ್ಧಿಯ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ ಎಂದು ಪ್ರಧಾನಿ ಹೇಳಿದರು.
ಬದಲಾಗುತ್ತಿರುವ ತಾಂತ್ರಿಕತೆ ಮತ್ತು ಜಾಗತಿಕ ಚಲನಶೀಲತೆಗಳು ಕೈಗಾರಿಕೆ (Industries) ಮತ್ತು ವೃತ್ತಿಗಳನ್ನು ಅಭೂತಪೂರ್ವ ವೇಗದಲ್ಲಿ ಬದಲಾಯಿಸುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಕುತೂಹಲ ಮತ್ತು ಕಲಿಯುವ ಬಯಕೆಯನ್ನ ಜೀವಂತವಾಗಿರಿಸಿಕೊಳ್ಳಬೇಕು. ಹೊಸತನ್ನ ಕಲಿತು ಬದಲಾಗುತ್ತಿರುವ ಜಗತ್ತಿನಲ್ಲಿ ಯಶಸ್ವಿಯಾಗಬೇಕು ಎಂದರು.
ಇಂದು, ಜಗತ್ತು ವೇಗವಾಗಿ ಬೆಳೆಯುತ್ತಿದೆ, ಬದಲಾಗುತ್ತಿದೆ. ಮುಂದಿನ 20-30 ವರ್ಷಗಳ ನಂತರ ಏನಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ನಿಮ್ಮ ಕುತೂಹಲವನ್ನ ಜೀವಂತವಾಗಿರಿಸಿಕೊಳ್ಳಿ. ನಿಮ್ಮ ಕಲಿಕೆಯ ಪ್ರವೃತ್ತಿಯನ್ನ ಜೀವಂತವಾಗಿರಿಸಿಕೊಳ್ಳಿ. ಸದಾ ಕಲಿಯುವವರು ಗೆಲ್ಲುತ್ತಾರೆ ಎಂದು ಕಿವಿಮಾತು ಹೇಳಿದರು.