ನೇವಿ (ರಾಜಸ್ಥಾನ): ಮನೆನೋ ಇಲ್ಲ ಭೂಮಿನೋ ಮಾರಾಟ ಮಾಡಿದಾಗ ಬರುವ ಭಾರೀ ಹಣವನ್ನು ಜೋಪಾನವಾಗಿ ಇಡಬೇಕು ಅಂತ ಹೇಳಿ ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡುತ್ತೇವೆ. ಅಥವಾ ಮನೆಯೆಲ್ಲೇ ಎಲ್ಲಾದರೂ ಒಂದು ಕಡೆ ಸೇಫ್ ಆಗಿ ಇಟ್ಟಿರುತ್ತೇವೆ. ಅರೆ, ಮನೆಯಲ್ಲಿ ಇಟ್ರೆ, ಹೆಂಡತಿ-ಮಕ್ಕಳು ಸುಮ್ ಸುಮನ್ನೇ ಖರ್ಚು ಮಾಡುತ್ತಾರೆ. ಅಕಸ್ಮತ್ ಕಳ್ಳತನವಾದರೆ ಏನು ಕಥೆ? ಹೀಗೆ ಯೋಚನೆ ಮಾಡಿದ ಒಬ್ಬ ರೈತ ಆಮೇಲೆ ಮಾಡಿದ್ದು ಗೊತ್ತಾದ್ರೆ ಶಾಕ್ ಆಗುತ್ತೆ! ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ರಾಜಸ್ಥಾನದ ಬಾಲೋತ್ರಾ (ಬಾಲೋತ್ರಾ) ಜಿಲ್ಲೆಯ ನೇವಿ ಗ್ರಾಮದ 50 ವರ್ಷದ ರೈತ ಮಾಂಗಿಲಾಲ್ ಮೇಘವಾಲ್, ಸುಮಾರು ಒಂದು ವರ್ಷದ ಹಿಂದೆ ತಮ್ಮ ಒಂದು ಒಂದು ತುಂಡು ಭೂಮಿಯನ್ನ ಮಾರಾಟ ಮಾಡಿ ₹5 ಲಕ್ಷ ಹಣವನ್ನು ಪಡೆದಿದ್ದರು. ಈ ಹಣದಿಂದ ತಮ್ಮ ಹೊಲದಲ್ಲಿ ಒಂದು ರೂಮ್ ನಿರ್ಮಿಸ ಬೇಕು ಎಂದು ಕೊಂಡಿದ್ದರು. ಆದ್ರೆ, ಆ ಹಣವನ್ನು ಮನೆಯಲ್ಲಿ ಇಟ್ಟರೆ ಕಳ್ಳತನವಾಗುತ್ತದೆ ಅಥವಾ ಹೆಂಡತಿ-ಮಕ್ಕಳು ಸುಮ್ ಸುಮನ್ನೇ ಖರ್ಚು ಮಾಡುತ್ತಾರೆ ಎಂದು ಭಾವಿಸಿ ಮಣ್ಣಿನಲ್ಲಿ ಹೂತಿಟ್ಟರು. ಆದ್ರೆ, ಇಲ್ಲೇ ಇರೋದು ನೋಡಿ ಟ್ವಿಸ್ಟ್!
ಹೌದು, ಯಾರಿಗೂ ಹೇಳದೆ ಇಡೀ ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ತಮ್ಮ 10 ಬಿಗಾ ವಿಸ್ತೀರ್ಣದ ಹೊಲದ ಮಣ್ಣಿನಲ್ಲಿ ಹೂತಿಟ್ಟಿದ್ದರು. ಆದ್ರೆ, ಮಾಂಗಿಲಾಲ್ ಅವರಿಗೆ ಮರೆವಿನ ಕಾಯಿಲೆ ಇತ್ತು. ಅದರಂತೆ, ಮಣ್ಣಿನಲ್ಲಿ ಹಣ ಹೂತಿಟ್ಟ ಕೆಲವು ಸಮಯದ ನಂತರ, ಅವರು ಅದನ್ನು ಹೂತಿಟ್ಟ ನಿಖರವಾದ ಜಾಗವನ್ನು ಸಂಪೂರ್ಣವಾಗಿ ಮರೆತುಹೋದರು. ಜಾಗ ನೆನಪಾಗದಿದ್ದಾಗ ಅವರು ಕಂಗಾಲಾಗಿ ತಮ್ಮ ಹೆಂಡತಿ ಮತ್ತು ಮಕ್ಕಳಿಗೆ ವಿಷಯ ತಿಳಿಸಿದರು. ಇಡೀ ಕುಟುಂಬ ಹೊಲದಲ್ಲೆಲ್ಲಾ ಹುಡುಕಿದರೂ ಹಣದ ಚೀಲ ಪತ್ತೆಯಾಗಲಿಲ್ಲ.
ಆದರೆ, ಇತ್ತೀಚೆಗೆ ಮಳೆ ಬಂದ ನಂತರ ಹೊಲದಲ್ಲಿ ದುರಸ್ತಿ ಕೆಲಸ ಮಾಡುವಾಗ, ಮಣ್ಣಿನಲ್ಲಿದ್ದ ಪ್ಲಾಸ್ಟಿಕ್ ಚೀಲ ತಾನಾಗಿಯೇ ಹೊರಬಂದಿದೆ. ಅದನ್ನು ತೆಗೆದು ನೋಡಿದಾಗ ಕುಟುಂಬಸ್ಥರಿಗೆ ಭಾರಿ ಆಘಾತ ಕಾದಿತ್ತು. ಯಾಕಂದ್ರೆ, ಕೇವಲ ₹500 ಮುಖಬೆಲೆಯ ನೋಟುಗಳಿದ್ದ ಆ ಚೀಲಕ್ಕೆ ಗೆದ್ದಲು ಹಿಡಿದು, ಶೇಕಡಾ 75 ಕ್ಕಿಂತ ಹೆಚ್ಚು ನೋಟುಗಳು ಸಂಪೂರ್ಣವಾಗಿ ಪುಡಿಪುಡಿಯಾಗಿ ಮಣ್ಣಾಗಿದ್ದವು.!
ಏತನ್ಮಧ್ಯೆ, ರೈತನ ಕುಟುಂಬವು ಈ ಅರ್ಧಂಬರ್ಧ ಹರಿದುಹೋಗಿದ್ದ ನೋಟುಗಳನ್ನು ತೆಗೆದುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಿಗೆ ಭೇಟಿ ನೀಡಿತು. ಆದರೆ ನೋಟುಗಳ ಸ್ಥಿತಿ ಅತ್ಯಂತ ಕೆಟ್ಟದಾಗಿದ್ದರಿಂದ ಅವುಗಳನ್ನು ಬದಲಾಯಿಸಿಕೊಡಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಇನ್ನು ಹೆಚ್ಚಿನ ಪ್ರಕ್ರಿಯೆಗಾಗಿ ಜೈಪುರದಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಕಚೇರಿಗೆ ಹೋಗುವಂತೆ ಬ್ಯಾಂಕ್ ಸಲಹೆ ನೀಡಿದೆ. ಆದರೆ ರೈತ ಅನಕ್ಷರಸ್ಥ ಮತ್ತು ಬಡವನಾಗಿದ್ದರಿಂದ ಜೈಪುರಕ್ಕೆ ಹೋಗಲು ಸಾಧ್ಯವಾಗದೆ ಇಡೀ ಕುಟುಂಬ ತೀವ್ರ ಆಘಾತ ಮತ್ತು ಸಂಕಷ್ಟದಲ್ಲಿದೆ.