ರಾಂಚಿ: ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿ ಜೆಎಲ್ಕೆಎಂ ನಾಯಕ ದೇವೇಂದ್ರ ನಾಥ್ ಮಹ್ತೊ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ 'ತೀವ್ರ' ಕುಸಿತ ಕಂಡುಬಂದ ಕಾರಣ ಮಹ್ತೊ ಅವರ ಸ್ಥಿತಿ ಗಂಭೀರವಾಗಿದೆ. ಸದ್ಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಂಚಿ ಸದರ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ನ್ಯಾನ್ಸಿ ಪ್ರಿಯಾ ತಿಳಿಸಿದ್ದಾರೆ. ಇನ್ನು ವಿಧಾನಸಭೆಯ ಬಳಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ನಲ್ಲಿ ಮಹ್ತೊ ಸಹಾಯಕ ಪಂಕಜ್ ಕುಮಾರ್ ಗಾಯಗೊಂಡಿದ್ದು ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಜಾರ್ಖಂಡ್ ವಿಧಾನಸಭೆಯ ಬಳಿ ನಡೆದ ಘರ್ಷಣೆಯಲ್ಲಿ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಇನ್ನು ಪ್ರತಿಭಟನಾಕರರ ಮೇಲೆ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಬಿಜೆಪಿ ಆಗಸ್ಟ್ 11ರಂದು ಜಾರ್ಖಂಡ್ ಬಂದ್ಗೆ ಕರೆ ನೀಡಿದೆ.
ಜೆಪಿಎಸ್ಸಿ-ಜೆಎಸ್ಎಸ್ಸಿ ಸುಧಾರಣಾ ವೇದಿಕೆಯು ಇಂದು ವಿಧಾನಸಭೆಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿತ್ತು. ಆರಂಭದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವ ಭರವಸೆ ನೀಡಿತ್ತು ಎಂದು ರಾಂಚಿ ನಗರ ಎಸ್ಪಿ ಪರಾಸ್ ರಾಣಾ ಹೇಳಿದ್ದಾರೆ. ಸಂಘಟಕರು ಶಾಂತಿಯುತವಾಗಿರಲು ಮನವಿ ಮಾಡಿದರೂ ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಮೂರರಿಂದ ನಾಲ್ಕು ಸಿಬ್ಬಂದಿ ಗಾಯಗೊಂಡರು ಎಂದು ರಾಣಾ ಹೇಳಿದರು. ಇಬ್ಬರು ಪೊಲೀಸ್ ಸಿಬ್ಬಂದಿಯ ತಲೆಗೆ ಹೊಲಿಗೆ ಹಾಕುವ ಅಗತ್ಯವಿರುವ ಗಾಯಗಳಾಗಿದ್ದರೆ, ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ತಳ್ಳಿ ಮುನ್ನುಗ್ಗುತ್ತಿದ್ದಾಗ ಇತರ ಮೂವರು ಗಾಯಗೊಂಡಿದ್ದಾರೆ. ಬಹು ಭದ್ರತೆ ಹೊರತಾಗಿಯೂ, ಪ್ರತಿಭಟನಾಕಾರರು ವಿಧಾನಸಭೆಯ ಗಡಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು.