ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು, ಜಲಫಿರಂಗಿ ಬಳಸಿದ ಪೊಲೀಸರು 
ದೇಶ

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

ಜಾರ್ಖಂಡ್‌ನ ವಿವಿಧ ಜಿಲ್ಲೆಗಳಿಂದ ರೈಲು, ಬಸ್ ಹಾಗೂ ಇತರ ವಾಹನಗಳ ಮೂಲಕ ರಾಂಚಿಗೆ ಇಂದು ಬೆಳಗ್ಗೆಯೇ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ರಾಂಚಿ, ಜಾರ್ಖಂಡ್: ಜಾರ್ಖಂಡ್‌ ಪಬ್ಲಿಕ್ ಸರ್ವಿಸ್ ಕಮಿಷನ್ (JPSC) ಮತ್ತು ಜಾರ್ಖಂಡ್ ಸ್ಟಾಪ್ ಸೆಲೆಕ್ಷನ್ ಕಮಿಷನ್ (JSSC) ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ಮತ್ತು ಪೇಪರ್‌ಲೀಕ್‌ ಆರೋಪಗಳ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನೆಯ 16 ನೇ ದಿನವಾದ ಇಂದು ವಿದ್ಯಾರ್ಥಿಗಳು ಬ್ಯಾರಿಕೇಡ್ ಮುರಿದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಜಲಫಿರಂಗಿ ಬಳಸಿದ್ದಾರೆ.

ಜಾರ್ಖಂಡ್‌ನ ವಿವಿಧ ಜಿಲ್ಲೆಗಳಿಂದ ರೈಲು, ಬಸ್ ಹಾಗೂ ಇತರ ವಾಹನಗಳ ಮೂಲಕ ರಾಂಚಿಗೆ ಇಂದು ಬೆಳಗ್ಗೆಯೇ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಬ್ಯಾರಿಕೇಡ್ ಮುರಿದ ವಿಧಾನಸೌಧದತ್ತ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ ಬಳಿಕ ಪೊಲೀಸರು ಜಲಫಿರಂಗಿ ಬಳಸಿದ್ದಾರೆ.

ಸರ್ಕಾರವು ನೇಮಕಾತಿ ಪರೀಕ್ಷೆ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ, ಇಲ್ಲದಿದ್ದರೆ ವಿದ್ಯಾರ್ಥಿಗಳು ಇದೇ ರೀತಿ ಪ್ರತಿಭಟನೆಯನ್ನು ಮುಂದುವರಿಸುತ್ತಾರೆ. ಬ್ಯಾರಿಕೇಡ್ ಹಾಕುವ ಮೂಲಕ ಸರ್ಕಾರ ಸಂಘರ್ಷಕ್ಕೆ ಆಹ್ವಾನ ನೀಡಿದೆ. ಒಂಬತ್ತು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರಿಂದ ಮತ್ತು ಆಸ್ಪತ್ರೆಗೆ ದಾಖಲಾಗಬೇಕಾದ ಸ್ಥಿತಿಯಲ್ಲಿದ್ದರೂ, ನನ್ನನ್ನು ನಾನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಮುಳ್ಳುತಂತಿಯ ತಡೆಗೋಡೆಗಳನ್ನು ನೋಡುವುದು ನನಗೆ ಅತ್ಯಂತ ನೋವುಂಟುಮಾಡಿತು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಯೊಬ್ಬ ತನ್ನ ನೋವನ್ನು ಹೇಳಿಕೊಂಡರು.

ಇದೇ ವೇಳೆ ಮಾತನಾಡಿದ ರಾಂಚಿಯ ಡಿವೈಎಸ್‌ಪಿ (Dy SP) ಅರವಿಂದ್ ಕುಮಾರ್ ವರ್ಮಾ ಮಾತನಾಡಿ, ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ವಿಧಾನಸಭೆಯತ್ತ ನುಗ್ಗುತ್ತಿದ್ದ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು (water cannons) ಬಳಸಿದ್ದಾರೆ ಎಂದು ತಿಳಿಸಿದರು.

ಆರನೇ ಸುತ್ತಿನ ಮಾತುಕತೆಯಲ್ಲಿ ಮೂಡದ ಒಮ್ಮತ:

ಪ್ರತಿಭಟನೆ ನಡೆಸುತ್ತಿರುವ ವಿವಿಧ ಸಂಘಟನೆಗಳು ಮತ್ತು ಸರ್ಕಾರ ನೇಮಿಸಿರುವ ಸಮಿತಿ ನಡುವೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಅಂತಿಮ ಪರಿಹಾರ ಕಂಡುಬಂದಿಲ್ಲ. ನಿನ್ನೆ ನಡೆದ ಆರನೇ ಸುತ್ತಿನ ಮಾತುಕತೆಯಲ್ಲೂ ಒಮ್ಮತ ಮೂಡಿಲ್ಲ.

ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿದ್ದು, ಶೇ.98 ರಷ್ಟು ಬೇಡಿಕೆಗಳನ್ನು ಅಂಗೀಕರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದಾಗ್ಯೂ ಸರ್ಕಾರದ ಹೇಳಿಕೆಯನ್ನು ತಳ್ಳಿಹಾಕಿರುವ ಪೊಲೀಸರು, ಪರೀಕ್ಷೆಯಲ್ಲಿನ ಅಕ್ರಮ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಪಾದಯಾತ್ರೆ: ಮಾಜಿ ಪ್ರಧಾನಿ HD ದೇವೇಗೌಡ ಭಾಗಿ

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!

ಶಾಲೆಗಳಿಗೆ ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಮಂದಿಗೆ ನೋ ಎಂಟ್ರಿ: ಉತ್ತರ ಪ್ರದೇಶ ಸರ್ಕಾರದ ಖಡಕ್ ಆದೇಶ