ಚೆನ್ನೈ: ತಮಿಳುನಾಡಿನ ವಿರೋಧ ಪಕ್ಷದ ನಾಯಕರು ಆಗ್ಗಾಗ್ಗೆ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ನಟಿ ತ್ರಿಶಾ ಕೃಷ್ಣನ್ ಕುರಿತು ಡಿಎಂಕೆ ನಾಯಕ ಉಧಯನಿಧಿ ಸ್ಟಾಲಿನ್ ಆಕ್ಷೇಪಾರ್ಹ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲೇ, ಇದೀಗ ಎಐಎಡಿಎಂಕೆ (AIADMK) ನಾಯಕ ಅಂತದ್ದೇ ಹೇಳಿಕೆ ನೀಡಿದ್ದಾರೆ.
ತ್ರಿಶಾರನ್ನು ತಮಿಳುನಾಡಿನ ಉಪಮುಖ್ಯಮಂತ್ರಿಯನ್ನಾಗಿ ಯಾವಾಗ ನೇಮಕ ಮಾಡಲಾಗುತ್ತದೆ ಎಂದು ಕೇಳುವ ಮೂಲಕ ಹಿರಿಯ ಎಐಎಡಿಎಂಕೆ ನಾಯಕ ಆರ್.ಬಿ. ಉದಯಕುಮಾರ್ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
'ವಿಜಯ್ ಅವರ 'ಆಪ್ತೆ' ತ್ರಿಶಾ ಅವರನ್ನು ಯಾವಾಗ ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗುವುದು ಎಂಬುದನ್ನು ತಮಿಳುನಾಡು ಎದುರು ನೋಡುತ್ತಿದೆ' ಎಂದು ಎಐಎಡಿಎಂಕೆ ನಾಯಕರೊಬ್ಬರು ಪಕ್ಷದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಕರ್ನಾಟಕದಿಂದ ಕಾವೇರಿ ನೀರನ್ನು ಬಿಡುಗಡೆ ಮಾಡಿಸುವಲ್ಲಿ ತಮಿಳುನಾಡು ಸರ್ಕಾರ ವಿಫಲವಾಗಿರುವುದನ್ನು ಟೀಕಿಸುವ ಸಲುವಾಗಿ ಆಗಸ್ಟ್ 8 ರಂದು ತೂತುಕುಡಿಯಲ್ಲಿ ನಡೆದ 'ಜಯಲಲಿತಾ ಪೆರವೈ' ಸಭೆಯಲ್ಲಿ ಎಐಎಡಿಎಂಕೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಉದಯಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು (HR&CE) ಇತ್ತೀಚೆಗೆ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ಏಳು ಸದಸ್ಯರ ವಿಶೇಷ ರಾಜ್ಯಮಟ್ಟದ ಸಮಿತಿಯೊಂದಕ್ಕೆ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ವಿಜಯ್ ನೇತೃತ್ವದ 'ತಮಿಳಿಗ ವೆಟ್ರಿ ಕಳಗಂ' (TVK) ಪಕ್ಷವನ್ನು ಟೀಕಿಸುವ ಭರದಲ್ಲಿ ಎಐಎಡಿಎಂಕೆ ನಾಯಕ ಹೇಳಿಕೆ ನೀಡಿರಬಹುದು ಎನ್ನಲಾಗಿದೆ.
ಈ ಹೇಳಿಕೆ ತ್ರಿಶಾ ಅವರ ಅಭಿಮಾನಿಗಳನ್ನು ಕೆರಳಿಸಿದೆ. ನಟಿ ಕುರಿತು ಉದಯಕುಮಾರ್ ಮಾಡಿರುವ ಟೀಕೆಯನ್ನು ಖಂಡಿಸಿ, ತ್ರಿಶಾ ಅಭಿಮಾನಿಗಳ ಸಂಘವು ಮಧುರೈಯಾದ್ಯಂತ ಪೋಸ್ಟರ್ಗಳನ್ನು ಅಳವಡಿಸಿದೆ.
ದುರದೃಷ್ಟವಶಾತ್, ತ್ರಿಶಾ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ ವಿಜಯ್ ಮತ್ತು ತ್ರಿಶಾ ನಡುವಿನ ಸಂಬಂಧದ ಕುರಿತಾದ ವದಂತಿಗಳು ಹರಡಿದಾಗಿನಿಂದ, ಚಲನಚಿತ್ರ ಮತ್ತು ರಾಜಕೀಯ ರಂಗದ ವ್ಯಕ್ತಿಗಳು ಇದರ ಬಗ್ಗೆ ಮುಕ್ತವಾಗಿ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ.
ಕಳೆದ ವಾರ, ಪಕ್ಷದ ರ್ಯಾಲಿಯೊಂದರಲ್ಲಿ ತ್ರಿಶಾ ಅವರ ಕುರಿತು ಆಕ್ಷೇಪಾರ್ಹ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ ತೀವ್ರ ಟೀಕೆಗೆ ಗುರಿಯಾದರು.
ಉದಯನಿಧಿ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅವು ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿರದೆ ಸರ್ಕಾರದ ಕಾರ್ಯವೈಖರಿಯನ್ನು ಕುರಿತಾಗಿದ್ದವು ಎಂದು ಡಿಎಂಕೆ ಪ್ರತಿಪಾದಿಸಿದೆ.
ಈ ವರ್ಷದ ಆರಂಭದಲ್ಲಿ, ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರು, ವಿಜಯ್ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ 'ತ್ರಿಶಾ ಅವರ ಮನೆಯಿಂದ ಹೊರಬರಬೇಕು' ಎಂದು ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಅವರ ಪರವಾಗಿ ಅವರ ಕಾನೂನು ತಂಡವು ಪ್ರತಿಕ್ರಿಯಿಸಿತ್ತು.