ತಮಿಳುನಾಡಿನ ರಾಜಕಾರಣಿ ಮತ್ತು ಬಿಜೆಪಿ ಮಾಜಿ ನಾಯಕ ಕೆ. ಅಣ್ಣಾಮಲೈ ಅವರು ಸೋಮವಾರ, ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಮೊದಲ 100 ದಿನಗಳ ಆಡಳಿತವನ್ನು ಸ್ವಾಗತಿಸುತ್ತಲೇ ರಾಜ್ಯದ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತಮಿಳುನಾಡಿನ ರಾಜಕೀಯ ಸನ್ನಿವೇಶದ ಕುರಿತು ವ್ಯಾಪಕವಾಗಿ ಮಾತನಾಡಿದ ಅಣ್ಣಾಮಲೈ, ರಾಜ್ಯದ ಮತದಾರರು ಬಯಸಿರುವ ಬದಲಾವಣೆಯ ಸಂದೇಶವನ್ನು ಆಲಿಸಲು 'ಕೆಲವು ರಾಜಕಾರಣಿಗಳು' ಇನ್ನೂ ಸಿದ್ಧರಿಲ್ಲ ಎಂದು ಹೇಳಿದರು.
'ಇಂಡಿಯಾ ಟುಡೇ ಗ್ರೂಪ್'ನ ತಮಿಳುನಾಡು ರೌಂಡ್ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕೆಲವರು ಇನ್ನೂ 'ಅಪಮಾನಿಸುವುದು', 'ಮಹಿಳೆಯರನ್ನು ಎಳೆದು ತರುವುದು' ಮತ್ತು 'ತಾಯಿ ಹೆಸರೇಳಿ ನಿಂದಿಸುವುದು' ಮುಂತಾದ ಹಳೆಯ ಪದ್ಧತಿಗಳಲ್ಲೇ ಮುಂದುವರಿಯಲು ಬಯಸುತ್ತಿದ್ದಾರೆ. ಕೆಲವು ರಾಜಕೀಯ ನಾಯಕರಿಗೆ ಹಾಗೂ ವಂಶಪಾರಂಪರ್ಯ ರಾಜಕಾರಣಿಗಳಿಗೆ ಪರಿಸ್ಥಿತಿ ಬದಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ' ಎಂದರು.
ಅಣ್ಣಾಮಲೈ ಅವರು ಇದನ್ನು ನೇರವಾಗಿ ಹೇಳದಿದ್ದರೂ, ಅವರ ಹೇಳಿಕೆಗಳು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಇತ್ತೀಚಿನ ಟೀಕೆಗಳಿಗೆ ಸಂಬಂಧಿಸಿದ ವಿವಾದವನ್ನು ಉಲ್ಲೇಖಿಸುವಂತಿದ್ದವು. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕುರಿತು ಮಾತನಾಡುತ್ತಿದ್ದಾಗ ನಟಿ ತ್ರಿಶಾ ಅವರ ಕುರಿತು ಡಬಲ್ ಮೀನಿಂಗ್ ಹೇಳಿಕೆಯೊಂದನ್ನು ನೀಡಿದ್ದರು. ಇದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಿಜಯ್ ನೇತೃತ್ವದ ಸರ್ಕಾರವು ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪದ ಕುರಿತು ಟೀಕೆ ಮಾಡುವಾಗ ಉದಯನಿಧಿ ಅವರು ನೀಡಿದ ಹೇಳಿಕೆಗಳು ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದಲ್ಲದೆ, ತಮಿಳುನಾಡು ಪೊಲೀಸರು ಅವರನ್ನು ಒಂದು ದಿನದ ಮಟ್ಟಿಗೆ ವಶಕ್ಕೆ ಪಡೆಯುವಂತೆಯೂ ಮಾಡಿತ್ತು.
ತಮ್ಮನ್ನು 'ಬಿಜೆಪಿಯ ಬಿ-ಟೀಮ್' ಎಂದು ಬಣ್ಣಿಸಲಾಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, 'ತಮಿಳುನಾಡಿನಲ್ಲಿ ಹೊಸದಾಗಿ ಏನನ್ನಾದರೂ ಆರಂಭಿಸುವವರನ್ನು ಬಿಜೆಪಿಯ 'ಬಿ-ಟೀಂ' ಎಂದು ಕರೆಯುವುದು ದುರದೃಷ್ಟಕರ. ವಿಜಯ್ ಮತ್ತು ಅವರ ಪಕ್ಷವಾದ ಟಿವಿಕೆ (TVK) ಕೂಡ ಇದೇ ರೀತಿಯ ಹಣೆಪಟ್ಟಿಯನ್ನು ಪಡೆದಿತ್ತು ಎಂದು ಅಣ್ಣಾಮಲೈ ಉಲ್ಲೇಖಿಸಿದರು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಮತ್ತು ಟಿವಿಕೆ (TVK) ಪಕ್ಷವು 108 ಸ್ಥಾನಗಳನ್ನು ಗೆದ್ದು ಡಿಎಂಕೆ (DMK)ಯನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ರಾಜಕಾರಣಿಗಳು ಹಾಗೂ ವೀಕ್ಷಕರನ್ನು ಅಚ್ಚರಿಗೊಳಿಸಿದ ಮೂರು ತಿಂಗಳಿಗೂ ಹೆಚ್ಚು ಸಮಯದ ನಂತರ ಅಣ್ಣಾಮಲೈ ಅವರ ಈ ಹೇಳಿಕೆಗಳು ಹೊರಬಂದಿವೆ.